ದಾವಣಗೆರೆ, ಫೆ. 1 – ಕೆಟ್ಟ ವಿಚಾರಗಳು ಹಾಗೂ ಕೆಟ್ಟ ಸಂಸ್ಕಾರಗಳಿಂ ದಾಗಿ ಆತ್ಮಶಕ್ತಿ ಕುಂದುತ್ತಿದೆ. ಇದರಿಂದಾಗಿ ಕಲಿಯುಗದಲ್ಲಿ ಕುಟುಂಬ ಹಾಗೂ ಸಮಾಜದಲ್ಲಿ ಸಮಸ್ಯೆಗಳು ಉಲ್ಬಣಿಸು ತ್ತಿವೆ. ಇದನ್ನು ತಪ್ಪಿಸಬೇಕಾದರೆ ಸಕಾರಾ ತ್ಮಕ ಚಿಂತನೆಯ ಕಲೆ ರೂಢಿಸಿ ಕೊಳ್ಳಬೇಕು ಎಂದು ಅಧ್ಯಾತ್ಮಿಕ ಮಾರ್ಗದರ್ಶಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಶಿವಾನಿ ದೀದಿ ತಿಳಿಸಿದ್ದಾರೆ.
ನಗರದ ಬಾಪೂಜಿ ಎಂ.ಬಿ.ಎ. ಕಾಲೇಜು ಮೈದಾನ ದಲ್ಲಿ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾ ಲಯದಿಂದ ಆಯೋಜಿಸಲಾಗಿದ್ದ §ಸುಖ – ಶಾಂತಿಮಯ ಜೀವನಕ್ಕಾಗಿ ಸಕಾರಾತ್ಮಕ ಚಿಂತನೆ ಕಲೆ¬ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.
ಆತ್ಮ ಶರೀರವನ್ನು ತೊರೆದ ಮೇಲೆ §ಓಂ ಶಾಂತಿ¬ ಎಂದು ಹೇಳುತ್ತಾರೆ. ಆದರೆ, ಜೀವಂತವಿರುವಾಗಲೇ ಶಾಂತಿ ಪಡೆದು ಕೊಳ್ಳಬೇಕು. ನಮ್ಮ ಕರ್ಮಗಳನ್ನು ನಿರ್ವ ಹಿಸುತ್ತಲೇ ಶಾಂತವಾಗಿರಬೇಕು ಎಂದರು.
ಸರಿಯಾದ ಸಂಸ್ಕಾರಗಳನ್ನು ಬೆಳೆಸಿ ಕೊಳ್ಳದಿದ್ದರೆ ಕೋಪ, ಅಸೂಯೆ, ದ್ವೇಷ ಇತ್ಯಾದಿ ಗುಣಗಳನ್ನು ಹೊಂದುತ್ತೇವೆ. ನಂತರ, ನಾವು ಆತ್ಮಾವಲೋಕನ ಮಾಡಿಕೊಳ್ಳದೇ ಬೇರೆಯವರನ್ನು ಆರೋಪಿಸುತ್ತೇವೆ. ನಮ್ಮ ತಪ್ಪುಗಳಿಗೆ ಬೇರೆಯವರನ್ನು ದೂರದೇ, ಸರಿ – ತಪ್ಪು ಗುರುತಿಸುವ ವಿವೇಕ ಹೊಂದಬೇಕು ಎಂದು ತಿಳಿಸಿದರು.
ಉದ್ವಿಗ್ನತೆ, ಕೋಪ, ಹೆದರಿಕೆ, ಅಸೂಯೆ, ನಿರೀಕ್ಷೆ ಮೋಹ, ಚಿಂತೆ ಇತ್ಯಾದಿಗಳು ಆತ್ಮದ ಶಕ್ತಿಯನ್ನು ಕುಂದಿಸುತ್ತವೆ. ಮತ್ತೊಂದೆಡೆ ಸಂತೋಷ, ಶಾಂತಿ, ವಿಶ್ವಾಸ, ಸಹಕಾರ, ಪ್ರೀತಿ, ಧ್ಯಾನ, ಕಾಳಜಿಗಳು ಆತ್ಮದ ಶಕ್ತಿ ಹೆಚ್ಚಿಸುತ್ತವೆ ಎಂದವರು ಹೇಳಿದರು.
ದಿನದ ಕರ್ಮಕ್ಕೆ ಅಂಕಗಳಿಂದ ಅಂಕೆ
ನಾವು ಪ್ರತಿನಿತ್ಯ ಮಾಡುವ ಕರ್ಮಗಳಿಂದ ಆತ್ಮಕ್ಕೆ ಶಕ್ತಿ ಹೆಚ್ಚಾಗಬೇಕು, ಸೌಖ್ಯದ ಅನುಭವ ಆಗಬೇಕು, ಶರೀರದ ಚೈತನ್ಯ ಹೆಚ್ಚಾಗಿ ಶಾಂತಿ ದೊರೆಯಬೇಕು. ಇಂತಹ ಕರ್ಮ ಎಷ್ಟರ ಮಟ್ಟಿಗೆ ಮಾಡಿದ್ದೇವೆ? ನಾವು ದಿನವೊಂದರಲ್ಲಿ ಮಾಡಿದ ಕರ್ಮಗಳಿಗೆ ಹತ್ತಕ್ಕೆ ಎಷ್ಟು ಅಂಕ ಕೊಡಬಹುದು? ಎಂಬ ಪ್ರಶ್ನೆ ಹಾಕಿಕೊಳ್ಳಿ.
ನಮ್ಮ ಚಿಂತನೆ, ಮಾತುಗಳು ಹಾಗೂ ವ್ಯವಹಾರ ಹೇಗಿತ್ತು ಎಂಬುದರ ಬಗ್ಗೆ ಗಮನ ಹರಿಸಿ. ಪ್ರತಿದಿನ ಹತ್ತಕ್ಕೆ ಹತ್ತು ಅಂಕ ಗಳಿಸುವ ಸಾಮರ್ಥ್ಯ ನಿಮ್ಮಲ್ಲಿದೆ. ಅಂತಹ ಸಾಮರ್ಥ್ಯ ಕಂಡುಕೊಳ್ಳುವುದರಿಂದ ಆತ್ಮ ಬಲವಾಗುತ್ತದೆ ಎಂದು ಬ್ರಹ್ಮಾಕುಮಾರಿ ಶಿವಾನಿ ದೀದಿ ಹೇಳಿದರು.
ಪರ ನಿಂದನೆ ನಿಲ್ಲಿಸುವ ವ್ರತ
ಗಾಸಿಪ್ ಹೆಸರಿನಲ್ಲಿ ಬೇರೆಯವರ ಬಗ್ಗೆ ಕೀಳಾಗಿ ಮಾತನಾಡುವುದರಿಂದ ನಮ್ಮ ಚೈತನ್ಯ ಕುಂದುತ್ತದೆ. ಬೇರೆಯರ ಬಗ್ಗೆ ಕೆಟ್ಟ ಮಾತನಾಡುವುದು ಎಂದರೆ, ಪರರ ಮನೆಯ ಕಸವನ್ನು ತಂದು ನಮ್ಮ ಮನೆ ಹಾಗೂ ಮನಸ್ಸಿನಲ್ಲಿ ಸುರಿದುಕೊಂಡಂತೆ.
ನಾವು ಬೇರೆಯವರ ಬಗ್ಗೆ ಕೆಟ್ಟ ಮಾತುಗಳನ್ನು ಆಡಬಾರದು. ಹಾಗೆಯೇ ಬೇರೆಯವರೂ ನಮ್ಮ ಬಳಿ ಕೆಟ್ಟ ಮಾತುಗಳನ್ನು ಆಡಲು ಅವಕಾಶ ನೀಡಬಾರದು. ಇಂತಹ ಪರ ನಿಂದನೆ ನಿಲ್ಲಿಸುವ §ವ್ರತ¬ವನ್ನು ಒಂದು ತಿಂಗಳು ಕೈಗೊಂಡರೆ ಶಾಂತಿ – ನೆಮ್ಮದಿ ನಿರೀಕ್ಷೆಗೂ ಹೆಚ್ಚಾಗಿ ಸಿಗುತ್ತದೆ ಎಂದು ಬ್ರಹ್ಮಾಕುಮಾರಿ ಶಿವಾನಿ ದೀದಿ ಹೇಳಿದರು.
ಸಂಕಲ್ಪ ಧಾರಣೆಯಿಂದ ಸಿದ್ಧಿ ಸಾಧ್ಯ
ಭಾರತದಲ್ಲಿ ಋಷಿ, ಮುನಿ, ಸನ್ಯಾಸಿ ಹಾಗೂ ಧರ್ಮಾತ್ಮರು ಸಂಕಲ್ಪ ಮಾಡಿದ್ದೆಲ್ಲಾ ಸಾಧ್ಯವಾಗುತ್ತಿತ್ತು. ಇದಕ್ಕೆ ಅವರ ಮನಸ್ಸಿನಲ್ಲಿದ್ದ ಶಕ್ತಿಯೇ ಕಾರಣ. ಇಂತಹ ಸಂಕಲ್ಪ ಶಕ್ತಿಯನ್ನೂ ನಾವೂ ಹೊಂದಬಹುದು.
ಪ್ರತಿದಿನ ಮಲಗುವ ಮುಂಚಿನ ಸಮಯ ಹಾಗೂ ಬೆಳಿಗ್ಗೆ ಎದ್ದ ತಕ್ಷಣ ನಮ್ಮ ಸುಪ್ತ ಮನಸ್ಸು ಹೆಚ್ಚು ಶಕ್ತಿಯುತವಾಗಿರುತ್ತದೆ. ಈ ಸಮಯವು ಸಂಕಲ್ಪ ತೊಡಲು ಅತ್ಯಂತ ಸೂಕ್ತ. ಕುಟುಂಬದಲ್ಲಿ ಶಾಂತಿ ನೆಲೆಸುವುದೇ ಆಗಲೀ, ಆರೋಗ್ಯವೇ ಆಗಲೀ ಯಾವುದೇ ಸಂಕಲ್ಪದ ಬಗ್ಗೆ 10-15 ನಿಮಿಷಗಳ ಕಾಲ ಚಿಂತಿಸಬೇಕು. ಇದನ್ನು ಬರೆದರೆ ಇನ್ನೂ ಉತ್ತಮ. ಇಂತಹ ಸಂಕಲ್ಪ ಧಾರಣೆಯಿಂದ ಅಂದುಕೊಂಡಿದ್ದನ್ನು ಸಾಧಿಸಲು ನೆರವಾಗುತ್ತದೆ ಎಂದು ಬ್ರಹ್ಮಾಕುಮಾರಿ ಶಿವಾನಿ ದೀದಿ ತಿಳಿಸಿದರು.
ನಮ್ಮ ಯಾವ ವಿಚಾರ ಹಾಗೂ ಕರ್ಮಗಳು ಆತ್ಮಶಕ್ತಿಯನ್ನು ಕುಂದಿಸುತ್ತವೆಯೋ ಅಂಥವುಗಳಿಂದ ದೂರ ಇರಬೇಕು. ನಮ್ಮ ಬಗ್ಗೆ ಹಾಗೂ ಬೇರೆಯವರ ಬಗ್ಗೆ ಸದಾ ಒಳ್ಳೆಯ ವಿಚಾರಗಳನ್ನು ಮಾಡಿದಾಗ ಆತ್ಮಶಕ್ತಿ ಹೆಚ್ಚಾಗುತ್ತದೆ ಎಂದವರು ಹೇಳಿದರು.
ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಶಾಮನೂರು ಶಿವಶಂಕರಪ್ಪ, ಬ್ರಹ್ಮಾಕುಮಾರಿ ಸಮಾಜವು ಅಂತರರಾಷ್ಟ್ರೀಯ ಅಧ್ಯಾತ್ಮಿಕ ಸಂಸ್ಥೆಯಾಗಿದೆ. ಧರ್ಮ – ಜಾತಿ ಭೇದವಿಲ್ಲದೇ ಅಧ್ಯಾತ್ಮಿಕ ಶಿಕ್ಷಣ ನೀಡುತ್ತಿದೆ ಎಂದು ಹೇಳಿದರು.
ನಕಾರಾತ್ಮಕ ಭಾವನೆಗಳಿಂದ ಇಂದು ವಿರೋಧಾತ್ಮಕ ಪ್ರವೃತ್ತಿ ಬೆಳೆಯುತ್ತಿದೆ, ಸಾಮಾಜಿಕ ವಾತಾವರಣ ಹಾಳಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಕಾರಾತ್ಮಕ ಚಿಂತನೆಯ ಅಗತ್ಯವಿದೆ ಎಂದರು.
ವೇದಿಕೆಯ ಮೇಲೆ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಹುಬ್ಬಳ್ಳಿ ವಲಯದ ನಿರ್ದೇಶಕ ಬ್ರಹ್ಮಾಕುಮಾರ ಬಸವರಾಜ ರಾಜಋಷಿ, ಶಾಸಕ ಬಿ.ಪಿ. ಹರೀಶ್, ಜಿಲ್ಲಾಧಿಕಾರಿ ಎಂ. ವಿ. ವೆಂಕಟೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ತಹಶೀಲ್ದಾರ್ ಅಶ್ವತ್ಥ್, ಬಾಪೂಜಿ ವಿದ್ಯಾಸಂಸ್ಥೆ ಸದಸ್ಯ ಅಥಣಿ ಎಸ್. ವೀರಣ್ಣ, ದಾವಣಗೆರೆ ವಿ.ವಿ. ಉಪ ಕುಲಪತಿ ಪ್ರೊ. ಬಿ.ಡಿ. ಕುಂಬಾರ್, ಬಾಪೂಜಿ ವಿದ್ಯಾಸಂಸ್ಥೆ ಸದಸ್ಯೆ ಪ್ರಭಾ ಮಲ್ಲಿಕಾರ್ಜುನ್, ಗ್ರಾಸಿಂ ಇಂಡಸ್ಟ್ರೀಸ್ ಸೀನಿಯರ್ ಪ್ರೆಸಿಡೆಂಟ್ ಅಜಯ್ ಗುಪ್ತ ಮತ್ತಿತರರು ಉಪಸ್ಥಿರಿದ್ದರು.
ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಹುಬ್ಬಳ್ಳಿ ವಲಯದ ಸಂಚಾಲಕಿ ಬ್ರಹ್ಮಾಕುಮಾರಿ ನಿರ್ಮಲಾಜೀ ಅಧ್ಯಕ್ಷತೆ ವಹಿಸಿದ್ದರು. ದಾವಣಗೆರೆ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬ್ರಹ್ಮಾಕುಮಾರಿ ಲೀಲಾಜಿ ಸ್ವಾಗತಿಸಿದರು.