ಶಿಕ್ಷಕರ ಕಾರ್ಯವೈಖರಿಗೆ ಶಾಸಕ ಕೆ.ಎಸ್. ಬಸವಂತಪ್ಪ ತರಾಟೆ
ದಾವಣಗೆರೆ, ಜ. 30 – ಶಾಲೆಗಳಲ್ಲಿ ವಿದ್ಯಾರ್ಥಿಗಳು ಗೈರಾಗಿದ್ದರೂ ಅವರು ಹಾಜರಾಗಿದ್ದಾರೆ ಎಂದು ತೋರಿಸಲಾಗುತ್ತಿದೆ. ತಿಂಗಳ ಕೊನೆಗೆ ವಿದ್ಯಾರ್ಥಿಗಳ ಎಲ್ಲ ಪಡಿತರ ಖರ್ಚಾಗಿದೆ ಎಂದು ತೋರಿಸಲಾಗುತ್ತಿದೆ. ದೇವರಂತ ಮಕ್ಕಳ ವಿಷಯದಲ್ಲಿ ಈ ರೀತಿ ಮಾಡಲಾಗುತ್ತಿದೆ ಎಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ವಿಷಾದಿಸಿದ್ದಾರೆ.
ತಾಲ್ಲೂಕು ಪಂಚಾಯ್ತಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆ.ಡಿ.ಪಿ. ಸಭೆಯಲ್ಲಿ ಅವರು ಮಾತನಾಡಿದರು.
ಹೊನ್ನೂರು – ಗೊಲ್ಲರಹಟ್ಟಿ ಶಾಲೆಗೆ ತಾವು ಭೇಟಿ ನೀಡಿದಾಗ ಗೈರಾದ ವಿದ್ಯಾರ್ಥಿಗಳಿಗೂ ಹಾಜರಿ ನೀಡಲಾಗಿತ್ತು. ಇದೇ ಪರಿಸ್ಥಿತಿ ಹಲವು ಶಾಲೆಗಳಲ್ಲಿದೆ. ವಿದ್ಯಾರ್ಥಿಗಳ ವಾಸ್ತವಿಕ ಹಾಜರಿ ಕಡಿಮೆ ಇದ್ದರೂ, ಆಹಾರ ವಸ್ತುಗಳ ಬಳಕೆ ಪೂರ್ಣವಾಗಿ ಆಗಿದೆ ಎಂದು ತೋರಿಸಲಾಗುತ್ತಿದೆ. ವಿದ್ಯಾರ್ಥಿಗಳ ಗೈರಿನಿಂದ ಉಳಿಕೆಯಾದ ಆಹಾರ ವಸ್ತುಗಳನ್ನು ಮುಂದಿನ ತಿಂಗಳಿಗೆ ಬಳಸಿಕೊಳ್ಳಬೇಕು ಎಂದು ಹೇಳಿದರು.
ಕಲ್ಪನಹಳ್ಳಿ ಶಾಲೆಗೆ ಭೇಟಿ ನೀಡಿದಾಗ ತರಕಾರಿ ಕೊಳೆತಿತ್ತು. ಸಾರಿನಲ್ಲಿ ಬೇಳೆಯೇ ಇರಲಿಲ್ಲ. ಬೇಳೆ ಯಾರಿಗೆ ದಕ್ಕಬೇಕೋ ಅವರಿಗೆ ದಕ್ಕಿರಬಹುದು ಎಂದು ಬಸವಂತಪ್ಪ ಹೇಳಿದರು.
ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡುವುದೇ ಕಡಿಮೆಯಾಗಿದೆ. ನಾನು ಎಷ್ಟು ಶಾಲೆಗಳಿಗೆ ಭೇಟಿ ನೀಡಿದ್ದೇನೋ ಅದರ ಅರ್ಧದಷ್ಟೂ ಬಿ.ಇ.ಒ.ಗಳು ಭೇಟಿ ನೀಡಿಲ್ಲ. ಅಧಿಕಾರಿಗಳು ಶಾಲೆಗೆ ಭೇಟಿ ನೀಡಿದರೆ ಸಮಸ್ಯೆಗಳು ಬಗೆಹರಿಯುತ್ತವೆ ಎಂದರು.
ತಿಪ್ಪೆ ತೆಗೆಸಲೂ ತಹಶೀಲ್ದಾರ್ ಬರಬೇಕೇ?
ಹೂವಿನಮಡು ಆಸ್ಪತ್ರೆಯ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಇದನ್ನು ತೆರವುಗೊಳಿಸಲು ಪೊಲೀಸ್ ಇಲಾಖೆಯ ಜೊತೆಗೂಡಿ ಆರೋಗ್ಯ ಇಲಾಖೆ ಕ್ರಮ ತೆಗೆದುಕೊಳ್ಳಬೇಕಿತ್ತು. ಆದರೆ, ಜಾಗ ಒತ್ತುವರಿಯಾಗಿದೆ, ಇಲ್ಲಿ ತಿಪ್ಪೆ ಹಾಕಲಾಗಿದೆ ಎಂದು ಆರೋಗ್ಯಾಧಿಕಾರಿಗಳು ತಹಶೀಲ್ದಾರರಿಗೆ ಪತ್ರ ಬರೆದಿದ್ದಾರೆ.
ಈ ವಿಷಯ ಪ್ರಸ್ತಾಪಿಸಿದ ತಹಶೀಲ್ದಾರ್ ಎಂ.ಬಿ.ಅಶ್ವಥ್, ತಿಪ್ಪೆ ತೆಗೆಸಲು ತಹಶೀಲ್ದಾರ್ಗೆ ಪತ್ರ ಬರೆಯಬೇಕೇ? ಅತಿಕ್ರಮಣ ಆಗಿದ್ದರೆ ಎಫ್.ಐ.ಆರ್. ದಾಖಲಿಸಿ. ನಿಮ್ಮ ಆಸ್ತಿ ನೀವು ರಕ್ಷಿಸಿಕೊಳ್ಳಿ ಎಂದರು.
ಕುಡಿಯುವ ನೀರಿಗೆ ನೋಡಲ್ ಅಧಿಕಾರಿಗಳ ನೇಮಕ
ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಜನವರಿಯಲ್ಲೇ ಅಣಜಿ, ಆನಗೋಡು, ಮಾಯಕೊಂಡ ಮುಂತಾದ ಕಡೆಗಳಲ್ಲಿ ನೀರಿನ ಸಮಸ್ಯೆ ಕಂಡು ಬರುತ್ತಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಉಲ್ಬಣಿಸುವ ಕಾರಣ ಹೆಚ್ಚಿನ ಗಮನ ಹರಿಸಬೇಕು ಎಂದು ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು. ಈ ಹಿನ್ನೆಲೆಯಲ್ಲಿ, ನೋಡಲ್ ಅಧಿಕಾರಿಗಳನ್ನು ನೇಮಿಸಲು ನಿರ್ಧರಿಸಲಾಯಿತು. ಅಧಿಕಾರಿಗಳು ದೀರ್ಘ ರಜೆ ಪಡೆಯಬಾರದು. ನಿರ್ಲಕ್ಷ್ಯ ತೋರಿದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದೂ ಎಚ್ಚರಿಕೆ ನೀಡಲಾಯಿತು.
ಸಭೆಗೆ ಅಸಮರ್ಪಕ ಮಾಹಿತಿ, ನೋಟಿಸ್ಗೆ ಸೂಚನೆ
ದಾವಣಗೆರೆ ಉತ್ತರ ಹಾಗೂ ದಕ್ಷಿಣ ವಲಯದ ಬಿ.ಇ.ಒ.ಗಳು ಕೆ.ಡಿ.ಪಿ. ಸಭೆಗೆ ಸಲ್ಲಿಸಿರುವ ಮಾಹಿತಿಗಳು ಅಸಮರ್ಪಕವಾಗಿರುವ ಬಗ್ಗೆ ಶಾಸಕ ಕೆ.ಎಸ್. ಬಸವಂತಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಈ ಬಗ್ಗೆ ನೋಟಿಸ್ ಕಳಿಸುವಂತೆ ತಿಳಿಸಿದರು. ಸಭೆಗೆ ತಪ್ಪು ಮಾಹಿತಿ ನೀಡಲಾಗಿದೆ. ಸಭೆಗೆ ಅಗೌರವ ತೋರಲಾಗಿದೆ. ಈ ಬಗ್ಗೆ ಶಿಸ್ತು ಕ್ರಮ ತೆಗೆದುಕೊಳ್ಳಲು ನೋಟಿಸ್ ಕಳಿಸಿ ಎಂದವರು ಹೇಳಿದರು.
ದಾರಿಗಾಗಿ ದಾನಿಗಳ ಪರದಾಟ
ಕೊಡಗನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕಾಗಿ ದಾನಿಗಳು ನಾಲ್ಕು ಎಕರೆ ಜಾಗ ಕೊಟ್ಟಿದ್ದಾರೆ. ಆದರೆ, ಆ ಭಾಗದಲ್ಲಿರುವ ತಮ್ಮ ಸ್ವಂತ ಜಾಗಕ್ಕೆ ತೆರಳಲು 10 ಅಡಿ ದಾರಿ ಕೊಡಿ ಎಂದು ಕೇಳುವ ಪರಿಸ್ಥಿತಿ ಎದುರಾಗಿದೆ. ಈ ವಿಷಯ ಸಭೆಯಲ್ಲಿ ಪ್ರಸ್ತಾಪಿಸಿದ ಶಾಸಕ ಕೆ.ಎಸ್. ಬಸವಂತಪ್ಪ, ದಾನ ಕೊಟ್ಟವರಿಗೆ ಸಹಕಾರ ಇಲ್ಲ ಎಂದು ಹೇಳಬಾರದು. ಅವರ ಜಾಗಕ್ಕೆ ದಾರಿ ಕಲ್ಪಿಸಿ ಕೊಡಲು ಮಾನವೀಯತೆ ತೋರಿಸಬೇಕು ಎಂದರು.
ಮಕ್ಕಳಿಗೆ ಸರ್ಕಾರದ ವತಿಯಿಂದ ಶೂ ನೀಡಲಾಗಿದೆ. ಆದರೆ, ಮೂರು ತಿಂಗಳಲ್ಲೇ ಶೂಗಳು ಹರಿದು ಹೋಗಿದ್ದು ಮಕ್ಕಳು ಬರಿಗಾಲಲ್ಲಿ ಶಾಲೆಗೆ ಬರುವುದನ್ನು ನೋಡಿದ್ದೇನೆ ಎಂದು ಶಾಸಕರು ಹೇಳಿದರು.
ನಾನು ಶಾಲೆಗಳಿಗೆ ಹೋದಾಗ ಇಂತಹ ಹತ್ತಾರು ಲೋಪಗಳು ಕಾಣುತ್ತವೆ. ಆದರೆ, ಅಧಿಕಾರಿಗಳು ಹೋದಾಗ ಇಂತಹ ಲೋಪಗಳು ಏಕೆ ಕಾಣುವುದಿಲ್ಲ? ಎಂದವರು ಅಚ್ಚರಿ ವ್ಯಕ್ತಪಡಿಸಿದರು.
ಖಾಸಗಿ ಶಾಲೆಗಳ ಕಡತಗಳಿಗೂ ಅನುಮೋದನೆ ಕೊಡದೇ ಬಾಕಿ ಉಳಿಸಲಾಗುತ್ತಿದೆ. ಈ ಬಗ್ಗೆ ಒಕ್ಕೂಟದವರು ತಮ್ಮ ಬಳಿ ದೂರು ನೀಡಿದ್ದಾರೆ ಎಂದು ಬಸವಂತಪ್ಪ ಹೇಳಿದರು.
ಅನುಕಂಪದ ನೌಕರಿಗಾಗಿ ಅರ್ಜಿಯ ಜೊತೆಗೆ ಎಲ್ಲ ದಾಖಲೆ ಸಲ್ಲಿಸಿದರೂ ವಿಳಂಬ ಮಾಡಿದ ಪ್ರಕರಣ ನನ್ನ ಗಮನಕ್ಕೆ ಬಂದಿದೆ. ಈ ರೀತಿಯ ನಿರ್ಲಕ್ಷ್ಯ ತೋರಿದರೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಶಿಕ್ಷಣ ಇಲಾಖೆಯ ಸಿಬ್ಬಂದಿ ಹೇಳದೇ ಕೇಳದೇ ಬೇರೆ ಕಚೇರಿಗಳಿಗೆ ಹೋಗಬಾರದು ಎಂದು ತಾಕೀತು ಮಾಡಿದ ತಾ.ಪಂ. ಆಡಳಿತಾಧಿಕಾರಿ ಎಲ್.ಎ. ಕೃಷ್ಣಾನಾಯ್ಕ, ಚಲನವಲನದ ಪುಸ್ತಕವನ್ನು ನಿರ್ವಹಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಕಾರ್ಯನಿರ್ವಹಣಾಧಿಕಾರಿ ರಾಮಾಭೋವಿ, ತಹಶೀಲ್ದಾರ್ ಡಾ. ಎಂ.ಬಿ. ಅಶ್ವತ್ಥ್, ಬಿಇಒ ಪುಷ್ಪಲತ ಹಾಗೂ ಇತರೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.