ಸಂವಿಧಾನಕ್ಕೆ ಚ್ಯುತಿ ತರುವವರಿಗೆ ಮತ ಚಲಾಯಿಸಬೇಡಿ

ಸಂವಿಧಾನಕ್ಕೆ ಚ್ಯುತಿ ತರುವವರಿಗೆ ಮತ ಚಲಾಯಿಸಬೇಡಿ

ಜಗಳೂರು ಶಾಸಕ ಬಿ. ದೇವೇಂದ್ರಪ್ಪ  

ಜಗಳೂರು, ಜ. 15 – ಸಂವಿಧಾನಕ್ಕೆ, ಪ್ರಜಾಪ್ರಭುತ್ವಕ್ಕೆ ಚ್ಯುತಿ ತರುವವರಿಗೆ ಮತ ಚಲಾಯಿಸಬೇಡಿ ಎಂದು ಶಾಸಕ.ಬಿ. ದೇವೇಂದ್ರಪ್ಪ  ಹೇಳಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ‌ ಹಾಗೂ ಭೋವಿ ಸಮಾಜದ ಸಹಯೋಗದಲ್ಲಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶೋಷಿತ ಸಮುದಾಯಗಳಿಗೆ ರಾಜಕೀಯ ಪ್ರಜ್ಞೆ ಅವಶ್ಯಕ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕಾರಣ, ಸ್ವಾಭಾವಿಕ, ಅದು ಚುನಾವಣೆಗೆ ಸೀಮಿತವಾಗಬೇಕಿದೆ. ಸಮುದಾಯದ ಅಭಿವೃದ್ದಿಗೆ ಪಕ್ಷಾತೀತ ಸಂಘಟಿತ ಹೋರಾಟ ಅನಿವಾರ್ಯ. ದೇಶದಲ್ಲಿ ಸಂವಿಧಾನ ಅನುಷ್ಠಾನ ಗೊಳಿಸುವವರನ್ನು ಜನಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡಬೇಕಿದೆ ಎಂದರು.

12 ನೇ ಶತಮಾನದಲ್ಲಿ ಭೋವಿ ಸಮಾಜದಲ್ಲಿ ಜನಿಸಿ ಪವಾಡಗಳ ಮುಖಾಂ ತರ ಬಸವಣ್ಣನವರ ಅನುಭವ ಮಂಟಪ ದಲ್ಲಿ ಅಗ್ರಸ್ಥಾನದ ವಚನಕಾರರಾಗಿದ್ದ ಕರ್ಮಯೋಗಿ ಸಿದ್ದರಾಮೇಶ್ವರ ಸ್ವಾಮೀಜಿ ಸೊಲ್ಲಾಪುರದಲ್ಲಿ ದೇವಸ್ಥಾನ ಸ್ಥಾಪಿಸಿ, ಕೆರೆ ಕಟ್ಟೆಗಳನ್ನು ನಿರ್ಮಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿ, ಆದರ್ಶರಾಗಿದ್ದಾರೆ.

ತಮ್ಮ ಬೇಡಿಕೆಯಂತೆ ಪಟ್ಟಣದಲ್ಲಿ ನಿಗದಿಗೊಳಿಸಿದ ಜಾಗವನ್ನು ಅತಿಕ್ರಮಣ ದಿಂದ ತೆರವುಗೊಳಿಸಿ ಸಮುದಾಯ ಭವನ ಕಾಂಪೌಂಡ್, ಗೇಟ್ ಸೇರಿದಂತೆ , ವಿಧಾನ ಸಭಾ ಕ್ಷೇತ್ರದಲ್ಲಿ ಭೋವಿ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಬದ್ದ ಎಂದು ಭರವಸೆ ನೀಡಿದರು.

ಭೋವಿ ಸಮಾಜದ ಜಿಲ್ಲಾ ಉಪಾಧ್ಯಕ್ಷ ವಕೀಲ  ಡಿ. ಶ್ರೀನಿವಾಸ್ ಮಾತನಾಡಿ, ತಾಲ್ಲೂಕಿನಲ್ಲಿ ಉದ್ಯೋಗವಿಲ್ಲದೆ ಉದ್ಯೋಗ ಅರಸಿ ಕಾಫಿ ನಾಡಿಗೆ ಗುಳೇ ಹೋಗುತ್ತಿದ್ದು. ಅಂಬೇಡ್ಕರ್ ಆಶಯದಂತೆ ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕಿದೆ. ಶಾಸಕರು ತಾಲ್ಲೂಕಿನಲ್ಲಿ ಭೋವಿ ಸಮಾಜದವರಿಗೆ ಮನರೇಗಾದಡಿ ಸಮರ್ಪಕ ಉದ್ಯೋಗ ಕಲ್ಪಿಸಿ ಗುಳೇ ತಪ್ಪಿಸಬೇಕು ಎಂದು ಮನವಿ ಮಾಡಿದರು.

ಕೆಪಿಸಿಸಿ ಎಸ್.ಟಿ. ಘಟಕದ‌ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ ಮಾತನಾಡಿ, ವಿವಿಧ ಸಮುದಾಯಗಳ ಮಹನೀಯರ ಜಯಂತಿಗಳನ್ನು ಆಚರಿಸುವ ಸರ್ಕಾರದ ಉದ್ದೇಶ ದಾರ್ಶನಿಕರ  ಕೊಡುಗೆಗಳನ್ನು ಸ್ಮರಿಸಿಕೊಂಡು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದಾಗಿದೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಪ್ರವಾಸಿ ಮಂದಿರದಿಂದ ಮಹಾತ್ಮಗಾಂಧಿ ವೃತ್ತ, ಅಂಬೇಡ್ಕರ್ ವೃತ್ತದವರೆಗೆ ಅದ್ಧೂರಿ ಯಾಗಿ ಮೆರವಣಿಗೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎಚ್.ಪಿ. ರಾಜೇಶ್, ಬಿಜೆಪಿ ಮುಖಂಡ ಬಿಸ್ತುವಳ್ಳಿ ಬಾಬು, ಭೋವಿ ಸಮಾಜದ ತಾಲ್ಲೂಕು ಅಧ್ಯಕ್ಷ ಅರ್ಜುನ್, ಮುಖಂಡರಾದ ಪುಟ್ಟಣ್ಣ, ಶಿವಣ್ಣಗೌಡ, ಓಮಣ್ಣ, ಸಿ. ತಿಪ್ಪೇಸ್ವಾಮಿ, ಬಿ.ಮಹೇಶ್ವರಪ್ಪ, ಪೂಜಾರ್ ಸಿದ್ದಪ್ಪ, ಕುಬೇಂದ್ರಪ್ಪ, ಪಲ್ಲಾಗಟ್ಟೆ ಶೇಖರಪ್ಪ, ವೀರೇಶ್, ಮಾಳಮ್ಮನಹಳ್ಳಿ ವೆಂಕಟೇಶ್, ಎ.ಎಲ್.ತಿಪ್ಪೇಸ್ವಾಮಿ, ಅಂಜಿನಪ್ಪ, ರೇವಣಸಿದ್ದಪ್ಪ ಮುಂತಾದವರು ಉಪಸ್ಥಿತರಿದ್ದರು.

error: Content is protected !!