ಅಂಬೇಡ್ಕರ್ ತತ್ವ, ಸಿದ್ಧಾಂತಗಳು ವಿಶ್ವಕ್ಕೇ ಮಾದರಿ

ಅಂಬೇಡ್ಕರ್ ತತ್ವ, ಸಿದ್ಧಾಂತಗಳು ವಿಶ್ವಕ್ಕೇ ಮಾದರಿ

ಡಾ. ಅಂಬೇಡ್ಕರ್ 67ನೇ ಮಹಾಪರಿನಿರ್ವಾಣ ದಿನಾಚರಣೆಯಲ್ಲಿ ಡಿಸಿ ವೆಂಕಟೇಶ್

ದಾವಣಗೆರೆ, ಡಿ.  6- ಡಾ. ಬಿ.ಆರ್.ಅಂಬೇಡ್ಕರ್‍ರವರು ಹಾಕಿಕೊಟ್ಟಂತಹ ಸಂವಿಧಾನ ಮತ್ತು ತತ್ವ, ಸಿದ್ಧಾಂತಗಳು ಕೇವಲ ಒಂದು ದೇಶಕ್ಕೆ ಸೀಮಿತವಾಗದೇ ಇಡೀ ವಿಶ್ವಕ್ಕೇ ಮಾದರಿಯಾಗಿ ರುವಂತವು ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ತಿಳಿಸಿದರು.

ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ರವರ 67ನೇ ಮಹಾಪರಿನಿರ್ವಾಣ ದಿನಾಚರಣೆ ಅಂಗವಾಗಿ ಡಾ.ಬಿ.ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು. 

ಡಾ.ಬಿ.ಆರ್ ಅಂಬೇಡ್ಕರ್ ಅವರು ನಮ್ಮ ದೇಶ ಕಂಡ ಮಹಾನ್ ಸಾಮಾಜಿಕ ಪರಿವರ್ತಕ, ಆರ್ಥಿಕ ಶಾಸ್ತ್ರಜ್ಞರಾಗಿದ್ದು, ಅವರು ರಚಿಸಿದಂತಹ ಸಂವಿಧಾನದಿಂದ ರಾಜಕೀಯ, ಸಾಮಾಜಿಕ ಸ್ವಾತಂತ್ರ್ಯವನ್ನು ಹೊಂದಲು ಸಾಧ್ಯವಾಗಿದೆ  ಎಂದರು.

ಅಂಬೇಡ್ಕರ್‍ರವರು ಚಿಕ್ಕ ವಯಸ್ಸಿನಲ್ಲಿಯೇ ಶ್ರೇಣೀಕೃತ ಸಮಾಜದಲ್ಲಿ ಅನುಭವಿಸಿದ ಸಂಕಷ್ಟ, ಶೋಷಣೆ ಹಾಗೂ ಮೌಢ್ಯಗಳ ವ್ಯವಸ್ಥೆಯನ್ನು ಸಾಮಾಜಿಕವಾಗಿ ಬದಲಾವಣೆ ಮಾಡಬೇಕು ಮತ್ತು ಸಮಾಜದ ಕಟ್ಟಕಡೆಯ ಸಮುದಾಯವಾಗಿ ಜೀವನ ನಡೆಸುತ್ತಿದ್ದ ದಲಿತರಿಗೂ ಸಹ ಪರಿಪೂರ್ಣವಾದಂತಹ ಜೀವನ ಅವಕಾಶವನ್ನು ಒದಗಿಸಿಕೊಡಲು ಹಗಲು- ರಾತ್ರಿ ಕಷ್ಟಪಟ್ಟು ಭಾರತಕ್ಕೆ ವಿಶಾಲವಾದಂತಹ ಸಂವಿಧಾನವನ್ನು ರಚಿಸಿ ಕೊಟ್ಟರು.

ಈ ಸಂವಿಧಾನದಲ್ಲಿ ಬಸವ ತತ್ವವಿದೆ, ಕೀರ್ತನಕಾರರ ಎಲ್ಲಾ ರೀತಿಯ ವಿಚಾರಧಾರೆಗಳೂ ಅಡಕವಾಗಿವೆ. ಹಾಗೆಯೇ ಪ್ರತಿಯೊಬ್ಬರಿಗೂ ಕಾನೂನಿನಲ್ಲಿ ಸಮಾನ ಅವಕಾಶ ನೀಡಿದ್ದು, ಈ ಅವಕಾಶದಿಂದಲೇ ಇಂದು ಒಬ್ಬ ಮಹಿಳೆ ದೇಶದ ರಾಷ್ಟ್ರಪತಿಯಾಗಲು ಸಾಧ್ಯವಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುರೇಶ್.ಬಿ.ಇಟ್ನಾಳ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್.ಕೆ ಇತರರು ಈ ಸಂದರ್ಭದಲ್ಲಿದ್ದರು.

error: Content is protected !!