ಬೆಳವನೂರು ಗ್ರಾಮದ ಜನತಾ ದರ್ಶನದಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ
ದಾವಣಗೆರೆ, ಅ. 25 – ಸರ್ಕಾರ ವಿವಿಧ ಯೋಜನೆಗಳಿಗೆ ನೀಡುವ ಅನುದಾನ ಅವಧಿ ಮೀರಿ ವಾಪಸ್ ಹೋಗಬಾರದು. ಇದಕ್ಕಾಗಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಬೇಕು ಹಾಗೂ ಜನರು ಯೋಜನೆಗಳ ಬಗ್ಗೆ ತಿಳಿದು ಅದರ ಲಾಭ ಪಡೆಯಬೇಕು ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.
ತಾಲ್ಲೂಕಿನ ಬೆಳವನೂರು ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಜನತಾ ದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರಿ ಯೋಜನೆಗಳನ್ನು ಜನರಿಗೆ ತಲುಪಿಸಲು ಜನತಾದರ್ಶನ ಸರಿಯಾದ ವ್ಯವಸ್ಥೆಯಾಗಿದೆ. ಅಧಿಕಾರಿಗಳೇ ಮನೆ ಮನೆಗೆ ಬಂದು ಜನರ ಸಮಸ್ಯೆ ಕೇಳಿ ಬಗೆಹರಿಸುತ್ತಿದ್ದಾರೆ. ಪ್ರತಿ ತಾಲ್ಲೂಕು ಹಾಗೂ ಊರುಗಳಿಗೆ ಈ ಜನತಾ ದರ್ಶನ ತಲುಪಲಿದೆ ಎಂದವರು ಹೇಳಿದರು.
ಒಂದು ಊರು, ಪಂಚಾಯ್ತಿ ಮೂರು
ಬೆಳವನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತರಳಬಾಳು ನಗರ ಮೂರು ಪಂಚಾಯ್ತಿ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. ಇದರಿಂದ ಜನರಿಗೆ ಸಮಸ್ಯೆಯಾಗಿದ್ದು, ಒಂದೇ ಪಂಚಾಯ್ತಿ ವ್ಯಾಪ್ತಿಗೆ ತರಬೇಕು ಎಂದು ಬೆಳವನೂರು ಗ್ರಾ.ಪಂ. ಉಪಾಧ್ಯಕ್ಷ ಎಂ.ಪಿ. ನವೀನ್ ಕುಮಾರ್ ಮನವಿ ಮಾಡಿಕೊಂಡರು. ಇದೇ ವೇಳೆ ಹಳೇ ಬೆಳವನೂರು, ಹೊಸ ಬೆಳವನೂರು, ತರಳಬಾಳು ನಗರ, ತುರ್ಚಘಟ್ಟ, ಚಂದ್ರನಹಳ್ಳಿಯ ಗ್ರಾಮಗಳ ಮುಖಂಡರು ತಮ್ಮ ಗ್ರಾಮಗಳ ಸಮಸ್ಯೆಗಳ ಕುರಿತು ಮನವಿಗಳನ್ನು ಸಲ್ಲಿಸಿದರು.
ಗಂಡಸರಿಗೆ ಹೊಟ್ಟೆಕಿಚ್ಚು ಬೇಡ: ಎಸ್ಸೆಸ್
ಜನತಾ ದರ್ಶನ ಕಾರ್ಯಕ್ರಮದಲ್ಲಿ ಸುಕನ್ಯ ಸಮೃದ್ಧಿ ಯೋಜನೆ, ಸೀಮಂತ ಯೋಜನೆ, ಸ್ವಚ್ಛ ಭಾರತ ಶೌಚಾಲಯ ಸೇರಿದಂತೆ ಹಲವು ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲಾಯಿತು. ಫಲಾನುಭವಿಗಳಲ್ಲಿ ಬಹುತೇಕರು ಮಹಿಳೆಯರೇ ಇದ್ದಾರೆ. ಅಲ್ಲದೇ, ಉಚಿತ ಬಸ್ ಯೋಜನೆ, ಮನೆ ಯಜಮಾನಿಗೆ 2 ಸಾವಿರ ರೂ. ಸೇರಿದಂತೆ ಹಲವು ಯೋಜನೆಗಳು ಹೆಣ್ಣು ಮಕ್ಕಳವೇ ಆಗಿವೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು. ಹೀಗೆಂದು ಗಂಡಸರು ಹೊಟ್ಟೆಕಿಚ್ಚು ಪಟ್ಟುಕೊಳ್ಳಬಾರದು. ಮುಂದಿನ ದಿನಗಳಲ್ಲಿ ಗಂಡಸರಿಗೂ ಅನುಕೂಲ ಕಲ್ಪಿಸಲಾಗುವುದು ಎಂದರು.
ಪೂರ್ಣ ಕುಂಭದ ಸ್ವಾಗತ
ಜನತಾ ದರ್ಶನದ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಪೋಷಣ್ ಅಭಿಯಾನ, ಎನ್.ಆರ್.ಎಲ್.ಎಂ. ಸ್ವಸಹಾಯ ಗುಂಪುಗಳು ಉತ್ಪಾದಿಸಿದ ವಸ್ತುಗಳ ಪ್ರದರ್ಶನ, ಆರೋಗ್ಯ ಇಲಾಖೆಯಿಂದ ಆರೋಗ್ಯ ಶಿಬಿರ, ತೋಟಗಾರಿಕೆ, ಕೃಷಿ, ಬೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಮಳಿಗೆ ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಪೂರ್ಣ ಕುಂಭ ಹಾಗೂ ಕಲಾ ಮೇಳಗಳೊಂದಿಗೆ ಸ್ವಾಗತ ನೀಡಲಾಯಿತು.
ದರ್ಶನಕ್ಕೆ ಮೊದಲೇ ಅರ್ಧ ಸಮಸ್ಯೆ ಇತ್ಯರ್ಥ
ಜನತಾ ದರ್ಶನ ಕಾರ್ಯಕ್ರಮ ಆರಂಭವಾಗುವ ಮೂರು ದಿನಗಳ ಮೊದಲಿನಿಂದಲೇ ಬೆಳವನೂರಿನ ಮನೆ, ಮನೆಗಳಿಗೆ ಅಧಿಕಾರಿಗಳು ತೆರಳಿ ಜನರಿಂದ ಸಮಸ್ಯೆಗಳ ಕುರಿತು ಅರ್ಜಿಗಳನ್ನು ಪಡೆದಿದ್ದಾರೆ. ಇದುವರೆಗೂ 442 ಅರ್ಜಿಗಳು ಬಂದಿದ್ದು, ಅರ್ಧದಷ್ಟನ್ನು ಈಗಾಗಲೇ ಬಗೆಹರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ಹೇಳಿದರು.ಹೊಸ ಬೆಳವನೂರಿಗೆ ಗ್ರಾಮ ಠಾಣಾ ಗುರುತಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಪೋಡಿ ಮುಕ್ತ ಮಾಡಲಾಗುವುದು. ಬಹು ಮಾಲೀಕತ್ವದ ಪೋಡಿಗಳನ್ನು ಏಕ ಮಾಲೀಕತ್ವಕ್ಕೆ ಪರಿವರ್ತಿಸಲಾಗುವುದು ಎಂದೂ ಅವರು ಭರವಸೆ ನೀಡಿದರು.
ಸಿಎಂ, ನಾನು ಒಂದಾಗಿಯೇ ಇರುತ್ತೇವೆ ಎಂದ ಶಾಸಕ ಎಸ್ಸೆಸ್
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಾನು ಒಂದೇ ಪಕ್ಷದವರು. ಹೀಗಾಗಿ ನಾವು ಒಂದಾಗಿಯೇ ಇರುತ್ತೇವೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿ ದ್ದಾರೆ. ಮುಖ್ಯಮಂತ್ರಿ ಕುರಿತು ಸಾಫ್ಟ್ ಆಗಿದ್ದೀರಿ ಎಂಬ ಪತ್ರಕರ್ತರ ಪ್ರಶ್ನೆಗೆ ಶಾಸಕರು ಈ ಉತ್ತರ ನೀಡಿದರು. ಲಿಂಗಾಯತ ಅಧಿಕಾರಿಗಳಿಗೆ ಹುದ್ದೆ ನೀಡುವಲ್ಲಿ ಅನ್ಯಾಯ ವಾಗುತ್ತಿದೆ ಎಂದು ಶಾಸಕ ಎಸ್ಸೆಸ್ ನೀಡಿದ ಹೇಳಿಕೆ ರಾಜ್ಯಾದ್ಯಂತ ರಾಜಕೀಯ ಚರ್ಚೆಗೆ ಗ್ರಾಸವಾಗಿತ್ತು. ಈ ಹಿನ್ನೆಲೆಯಲ್ಲಿ ಶಾಸಕರ ಹೇಳಿಕೆ ಪ್ರಾಮುಖ್ಯತೆ ಪಡೆದುಕೊಂಡಿದೆ.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್, ಹಲವು ಜ್ವಲಂತ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸುತ್ತಿದ್ದೇವೆ. ಸ್ಥಳದಲ್ಲೇ ಬಗೆಹರಿಯದ ಸಮಸ್ಯೆಗಳಿಗೆ ಎರಡು ವಾರಗಳಲ್ಲಿ ಪರಿಹಾರ ನೀಡಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಆಶ್ರಯ ಮನೆಗಳಿಗೆ ಹಲವಾರು ಅರ್ಜಿಗಳು ಬಂದಿವೆ. ಸರ್ಕಾರಿ ಜಮೀನು ಗುರುತಿಸಿ ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಇಟ್ನಾಳ್ ಮಾತನಾಡಿ, ಬೆಳವನೂರು ಪಂಚಾಯ್ತಿಯ ವಿದ್ಯುತ್ ನಿರ್ವಹಣೆ ಜಿಲ್ಲೆಗೇ ಮಾದರಿಯಾಗಿದೆ. ಬೆಳವನೂರು ಪಂಚಾಯ್ತಿಯಲ್ಲಿ ಈಗಲೂ 80 ಲಕ್ಷ ರೂ.ಗಳ ಅನುದಾನ ಲಭ್ಯವಿದೆ. ಇನ್ನಷ್ಟು ಅಭಿವೃದ್ಧಿಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ವೇದಿಕೆಯ ಮೇಲೆ ಬೆಳವನೂರು ಗ್ರಾ.ಪಂ. ಅಧ್ಯಕ್ಷೆ ಹೂವಮ್ಮ, ಬೆಳವನೂರು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಎಂ.ಪಿ. ನವೀನ್ ಕುಮಾರ್, ಉದ್ಯಮಿ ಎಸ್.ಎಸ್. ಗಣೇಶ್, ತಹಶೀಲ್ದಾರ್ ಅಶ್ವತ್ಥ್ ಮತ್ತಿತರರು ಉಪಸ್ಥಿತರಿದ್ದರು.
ಉಪವಿಭಾಗಾಧಿಕಾರಿ ದುರ್ಗಾಶ್ರೀ ಸ್ವಾಗತಿಸಿದರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ನಿರೂಪಿಸಿದರು.