ಯಾಕಾದರೂ ಲಿಂಗಾಯತರಾದೆವೋ ಎನ್ನುವ ಸ್ಥಿತಿ ನಿರ್ಮಾಣ: ಜಯ ಮೃತ್ಯುಂಜಯ ಶ್ರೀ
ದಾವಣಗೆರೆ, ಸೆ. 3 – ಜಾತಿ ಪ್ರಮಾಣ ಪತ್ರದಲ್ಲಿ `ಲಿಂಗಾಯತ’ ಎಂದು ನಮೂದಿಸಿದ ಕಾರಣಕ್ಕಾಗಿ ಮಕ್ಕಳು ಮೀಸಲಾತಿ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಈ ಮಕ್ಕಳು ನಾವು ಯಾಕಾದರೋ ಲಿಂಗಾಯತರಾದೆವೋ ಎಂದು ಬೈದುಕೊಳ್ಳುವ ಪರಿಸ್ಥಿತಿ ಇದೆ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ವಿಷಾದಿಸಿದ್ದಾರೆ.
ನಗರದ ಶಿವಯೋಗಾಶ್ರಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿವಶರಣ, ನಿಜಸುಖಿ ಹಡಪದ ಅಪ್ಪಣ್ಣ ಶರಣರ 889ನೇ ಜಯಂತ್ಯೋತ್ಸವ ಹಾಗೂ ಜನಜಾಗೃತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಹಡಪದ ಸಮುದಾಯ ಒಂದೇ ಆಗಿದೆ. ಆದರೆ, ಹಿಂದೂ ಹಡಪದ ಎಂದು ಜಾತಿ ಪ್ರಮಾಣ ಪತ್ರದಲ್ಲಿದ್ದರೆ 2ಎ, ಲಿಂಗಾಯತ ಹಡಪದ ಎಂದಿದ್ದರೆ 3ಬಿಗೆ ಸೇರಿಸಲಾಗುತ್ತಿದೆ ಎಂದವರು ಹೇಳಿದರು.
ಹಿಂದೂ ಹಡಪದ ಹಾಗೂ ಲಿಂಗಾಯತ ಹಡಪದ ಒಂದೇ ಸಮುದಾಯದ ಪರ್ಯಾಯ ನಾಮಗಳು. ಕುರುಬ, ಕುಂಬಾರ, ಕಮ್ಮಾರ ಹೀಗೆ ಎಲ್ಲ ಲಿಂಗಾಯತರ ಉಪಪಂಗಡಗಳು ಮೀಸಲಾತಿಯಿಂದ ವಂಚಿತವಾಗಿವೆ. ಸಾಕಷ್ಟು ಪಂಗಡಗಳು ಮೀಸಲಾತಿ ಕಾರಣಕ್ಕಾಗಿಯೇ ಲಿಂಗಾಯತ ಹೆಸರಿನ ಬಳಕೆ ಬಿಟ್ಟಿವೆ ಎಂದು ಶ್ರೀಗಳು ತಿಳಿಸಿದರು.
ಕಾಯಕ ಸಮಾಜಕ್ಕೆ ಮೀಸಲಾತಿ, ಕಾಲಿಗೆ ಬೀಳಿಸಿಕೊಳ್ಳುವವರಿಗೆ ಅಲ್ಲ
ಕೆಲ ಕಾಯಕ ಸಮುದಾಯದವರ ಮುಖ ನೋಡಬಾರದು ಎಂಬ ಅನಿಷ್ಟ ಪದ್ಧತಿ ಸಮಾಜದಲ್ಲಿತ್ತು. ಇಂತಹ ಕಾಯಕ ಸಮುದಾಯದ ವರಿಗೆ ಮೀಸಲಾತಿ ಸಿಗಬೇಕೇ ಹೊರತು, ಗುರುವಿನ ಸ್ಥಾನದಲ್ಲಿದ್ದು ಕಾಲಿಗೆ ಬೀಳಿಸಿಕೊಳ್ಳುವವರಿಗೆ ಅಲ್ಲ ಎಂದು ಶಾಸಕ ಬಸವಂತಪ್ಪ ಹೇಳಿ ದರು. ಗುರುವಿನ ಸ್ಥಾನದಲ್ಲಿ ರುವ ಕೆಲವರು ಬೋಗಸ್ ಪ್ರಮಾಣ ಪತ್ರದಿಂದ ಮೀಸಲಾತಿ ಪಡೆ ಯುತ್ತಿದ್ದಾರೆ. ಈ ಬಗ್ಗೆ ತನಿಖೆ ಮಾಡಿ ಕ್ರಮ ತೆಗೆದುಕೊಳ್ಳಲು ಮುಖ್ಯಮಂತ್ರಿಗಳಿಗೆ ಒತ್ತಾಯಿಸುತ್ತೇನೆ ಎಂದರು.
ಹಡಪದ ಶ್ರೀಗಳಿಂದ ‘ಬೆಂಕಿ’ ಮಾತು
ಹಡಪದ ಅಪ್ಪಣ್ಣ ಸಮಾಜಕ್ಕೆ 2ಎ ಮೀಸಲಾತಿ ನೀಡದೇ ಇದ್ದರೆ ಉಗ್ರವಾದ ಹೋರಾಟ ನಡೆಸಬೇಕಾಗುತ್ತದೆ. ಬಸ್ಸಿಗೆ ಕಲ್ಲು ಹೊಡೆಯುವ, ಬೆಂಕಿ ಹಚ್ಚುವ ಕಾಲ ಬರುತ್ತದೆ ಎಂದು ತಂಗಡಗಿಯ ಶ್ರೀ ಅನ್ನದಾನಿ ಭಾರತಿ ಬಸವಪ್ರಿಯ ಹಡಪದ ಅಪ್ಪಣ್ಣ ಸ್ವಾಮೀಜಿ ಎಚ್ಚರಿಸಿದರು. ಲಿಂಗಾಯತ ಎಂಬ ಕಾರಣಕ್ಕಾಗಿ 2ಎ ಮೀಸಲಾತಿ ಸಿಗುವುದಿಲ್ಲ ಎಂದಾದರೆ, ನಾವು ಬೌದ್ಧ ಧರ್ಮಕ್ಕೆ ಮತಾಂತರವಾಗುತ್ತೇವೆ ಎಂದು ಈ ಹಿಂದೆಯೇ ಹೇಳಿದ್ದನ್ನು ಸ್ವಾಮೀಜಿ ನೆನಪಿಸಿದರು. ಶ್ರೀಗಳ ಮಾತಿಗೆ ಅಸಮಾಧಾನ ವ್ಯಕ್ತಪಡಿಸಿದ ಮುರುಘಾಮಠದ ಉಸ್ತುವಾರಿಗಳಾದ ಶ್ರೀ ಬಸವಪ್ರಭು ಸ್ವಾಮೀಜಿ, ಶಾಂತಿಯುತವಾಗಿ ಪ್ರತಿಭಟನೆಗಳನ್ನು ನಡೆಸಬೇಕು. ಇನ್ನೊಂದು ಧರ್ಮಕ್ಕೆ ಹೋಗುತ್ತೇವೆ ಎನ್ನುವುದರಲ್ಲಿ ಅರ್ಥವಿಲ್ಲ. ನಾವು ಸದಾ ನಿಮ್ಮೊಂದಿಗೆ ಇರುತ್ತೇವೆ ಎಂದು ಭರವಸೆ ನೀಡಿದರು.
ಗ್ಯಾರಂಟಿ ಬಿಟ್ಟರೂ ಸರಿ ಬಾರ್ ಬೇಡ : ತೇಜಸ್ವಿ
ಮೀಸಲಾತಿಯಿಂದ ಕೆಲ ಕುಟುಂಬಗಳು ಮಾತ್ರ ಉದ್ಧಾರವಾಗುತ್ತವೆ. ಪ್ರತಿ ವೃತ್ತಿಗೆ ಆರ್ಥಿಕ ಶಕ್ತಿ ಕೊಟ್ಟರೆ ಸಂಪೂರ್ಣ ಅಭಿವೃದ್ಧಿ ಸಾಧ್ಯ ಎಂದು ರೈತ ಮುಖಂಡ ತೇಜಸ್ವಿ ಪಟೇಲ್ ಅಭಿಪ್ರಾಯ ಪಟ್ಟರು. ಸರ್ಕಾರ ಹೊಸ ಬಾರ್ಗಳನ್ನು ತೆರೆಯಲು ಮುಂದಾಗಿರುವುದಕ್ಕೆ ಆಕ್ಷೇಪಿಸಿದ ಅವರು, ಒಂದೆರಡು ಗ್ಯಾರಂಟಿಗಳನ್ನು ಕೈ ಬಿಟ್ಟರೂ ಪರವಾಗಿಲ್ಲ. ಬಾರ್ಗಳನ್ನು ತೆರೆಯಬಾರದು ಎಂದರು.
Click here to change this text
ಈ ಹಿಂದೆ ಮೀಸಲಾತಿ ನಿಗದಿ ಪಡಿಸುವ ಸಂದರ್ಭದಲ್ಲಿ ಲಿಂಗಾಯತ ಸಮುದಾಯಗಳನ್ನು ಮೀಸಲಾತಿ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಈ ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿ ಗಳು ಕ್ರಮ ತೆಗೆದುಕೊಳ್ಳಬೇಕು ಎಂದ ವರು ಆಗ್ರಹಿಸಿದರು.
ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಮುರುಘಾ ಮಠದ ಉಸ್ತುವಾರಿಗಳಾದ ಶ್ರೀ ಬಸವಪ್ರಭು ಸ್ವಾಮೀಜಿ, ಸಂಸ್ಕಾರದಿಂದ ನಾವು ಲಿಂಗವಂತರು. ಆದರೆ, ಮೀಸಲಾತಿಯಿಂದ ಹಡಪದ ಸಮುದಾಯಕ್ಕೆ ಸೇರಿದವರು ಎಂದು ಗುರುತಿಸಿಕೊಳ್ಳುವ ಮೂಲಕ ಸರ್ಕಾರದಿಂದ ಸೌಲಭ್ಯಗಳನ್ನು ಕೇಳಬೇಕಿದೆ ಎಂದರು.
ಸಾಹಿತಿ ಬಾಮ ಬಸವರಾಜಯ್ಯ ಮಾತನಾಡಿ, ಮೀಸಲಾತಿಗಾಗಿ ಹಾವನೂರು ವರದಿ ರೂಪಿಸಿದ ಸಂದರ್ಭದಲ್ಲಿ ಲಿಂಗಾಯತ ಹಡಪದವರನ್ನು 3ಬಿ ಪ್ರವರ್ಗಕ್ಕೆ ಸೇರಿಸಲಾಗಿದೆ. ಅವರನ್ನು 2ಎಗೆ ಸೇರ್ಪಡೆ ಮಾಡುವ ಜವಾಬ್ದಾರಿ ಈಗಿನ ಜನಪ್ರತಿನಿಧಿಗಳು ಹಾಗೂ ಸ್ವಾಮೀಜಿಗಳಿಗೆ ಇದೆ ಎಂದರು.
ಬಿಜಾಪುರದ ಗಾಣಿಗೆರೆ ಪೀಠದ ಶ್ರೀ ಬಸವಕುಮಾರ ಸ್ವಾಮೀಜಿ ಆಶಯ ನುಡಿಗಳನ್ನಾಡಿದರು.
ವೇದಿಕೆಯ ಮೇಲೆ ತಂಗಡಗಿಯ ಶ್ರೀ ಹಡಪದ ಅಪ್ಪಣ್ಣ ಸ್ವಾಮೀಜಿ, ಹೊಸದುರ್ಗದ ಕುಂಚಿಟಿಗ ಸಂಸ್ಥಾನ ಮಠದ ಶ್ರೀ ಬಸವ ಶಾಂತವೀರ ಸ್ವಾಮೀಜಿ, ಚಿತ್ರದುರ್ಗ ಭೋವಿ ಗುರುಪೀಠದ ಶ್ರೀ ಬಸವ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಶಾಸಕ ಕೆ.ಎಸ್. ಬಸವಂತಪ್ಪ, ಮುಖಂಡರಾದ ತೇಜಸ್ವಿ ಪಟೇಲ್, ನಾಗರಾಜ್ ಹೇಮಗಿರಿ ಮೈಲಾರ, ಶಿವಯೋಗಿ ಹೊಸರಿತ್ತಿ, ಶಿರಮಗೊಂಡನಹಳ್ಳಿಯ ಶಿವಾನಂದ ಗುರೂಜಿ, ಚೇತನಾ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.