ದಾವಣಗೆರೆ, ಸೆ. 29- ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ಗೆ ದಾವಣಗೆರೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು, ಬ್ಯಾಂಕ್ಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಕೆಎಸ್ಸಾರ್ಟಿಸಿ ಬಸ್ಗಳೂ ಸಂಚರಿಸಿದವು. ಆದರೆ ಖಾಸಗಿ ಬಸ್ಗಳ ಸಂಖ್ಯೆ ವಿರಳವಾಗಿತ್ತು.
ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್ಗಳು ಹೊರಡಲು ಸಜ್ಜಾಗಿದ್ದರೂ, ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಮಧ್ಯಾಹ್ನ 12ರ ನಂತರವೇ ಒಂದಿಷ್ಟು ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿ ಗ್ರಾಮಾಂತರ ಪ್ರದೇಶಗಳಿಗೆ ಕೆಲ ಬಸ್ಗಳು ಹೊರಟವು.
ಮಂಡಿಪೇಟೆ, ಗಡಿಯಾರ ಕಂಬ, ಚಾಮರಾಜ ಸರ್ಕಲ್ ಬಳಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಪರಿಸ್ಥಿತಿ ಯಥಾಸ್ಥಿತಿಯಲ್ಲಿತ್ತು. ಬಸ್ಗಳು ಸಂಚರಿಸಿದವು. ಪ್ರಯಾಣಿಕರಿಗೆ ಯಾವುದೇ ಅನಾನುಕೂಲತೆ ಉಂಟಾಗಲಿಲ್ಲ. ನಗರದಲ್ಲಿ ಆಟೋಗಳ ಸಂಚಾರ ಎಂದಿನಂತಿತ್ತು.
ಬೆಳಿಗ್ಗೆಯಿಂದಲೇ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ವಹಿವಾಟು ನಡೆಸದೇ ಬಂದ್ಗೆ ಸಹಕರಿಸುವಂತೆ ಮನವಿ ಮಾಡುತ್ತಿದ್ದರು. ಜಯದೇವ ವೃತ್ತ, ಅಶೋಕ ರಸ್ತೆ, ಹದಡಿ ರಸ್ತೆ, ಗಾಂಧಿ ವೃತ್ತ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದವು.
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಬಂಧನ-ಬಿಡುಗಡೆ
ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಬಸ್ಗಳ ಓಡಾಟಕ್ಕೆ ಅಡ್ಡಿಪಡಿಸಲಾಗುತ್ತಿದೆ ಎಂದು ಕಾರ್ಮಿಕ ಮುಖಂಡ ಹೆಚ್.ಜಿ. ಉಮೇಶ್, ಐರಣಿ ಚಂದ್ರು, ಐಗೂರು ಸುರೇಶ್ ಸೇರಿದಂತೆ 9 ಜನರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದರು. ಪ್ರತಿಭಟನೆ ನಡೆಸಲು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳುತ್ತಿದ್ದ ರೈತ ಮುಖಂಡರನ್ನೂ ಪೊಲೀಸರು ಜೀಪಿನಲ್ಲಿಯೇ ಕರೆದೊಯ್ದ ಘಟನೆ ನಡೆಯಿತು. ಈ ವೇಳೆ ಜೀಪಿನಲ್ಲಿ ಬರಲು ವಿರೋಧಿಸಿದ ರೈತ ಮುಖಂಡರು ಬೈಕ್ ಮೂಲಕ ಜಿಲ್ಲಾಧಿಕಾರಿ ಕಚೇರಿ ಬಳಿ ತೆರಳಿದರು.
ಕರವೇಯಿಂದ ಸರ್ಕಾರಗಳ ಸಮಾರಾಧನೆ
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ವತಿಯಿಂದ ನಗರದ ಗುರು ಭವನದ ಬಳಿ ರಾಜ್ಯದ ಮುಖ್ಯಮಂತ್ರಿ, ಪ್ರಧಾನಿ ಹಾಗೂ ತಮಿಳು ನಾಡು ಮುಖ್ಯಮಂತ್ರಿಗಳ ಭೂತ ದಹನ ಮಾಡಿ ನಂತರ ಅಣಕು ಕೈಲಾಸ ಸಮಾರಾಧನೆ ನಡೆಸಲಾಯಿತು.
ಈ ವೇಳೆ ಕರವೇ ಜಿಲ್ಲಾ ಅಧ್ಯಕ್ಷ ಎಂ.ಎಸ್. ರಾಮೇಗೌಡ ಮಾತನಾಡಿ, ರಾಜ್ಯದ 28 ಸಂಸದರು ಕಾವೇರಿ ವಿಚಾರದಲ್ಲಿ ದನಿ ಎತ್ತದೇ ಇರುವುದು ಖಂಡನೀಯ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಕ್ಷಣ ತಮಿಳುನಾಡು ಮುಖ್ಯಮಂತ್ರಿ ಸ್ಟ್ಯಾಲಿನ್ ಜೊತೆ ಮತ್ತು ರಾಹುಲ್ ಗಾಂಧಿ ಜೊತೆ ಸೌಹಾರ್ದತವಾಗಿ ಮಾತನಾಡಿ, ಬಗೆಹರಿಸುವ ಕೆಲಸ ಮಾಡಬೇಕಾಗಿದೆ. ಇದರ ಜೊತೆಗೆ ನಾಲ್ಕು ರಾಜ್ಯದ ಮುಖ್ಯಮಂತ್ರಿಗಳ ಸಭೆ ಕರೆದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಧ್ಯಪ್ರವೇಶಿಸಿ ಕಾವೇರಿ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದರೆ ಕೇಂದ್ರ ಸರ್ಕಾರದ ವಿರುದ್ಧ ಅಕ್ಟೋ ಬರ್ 10ರಂದು ದೆಹಲಿ ಚಲೋ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಬಸಮ್ಮ, ಮಂಜುಳಮ್ಮ, ಶಾಂತಮ್ಮ, ಸಾಕಮ್ಮ, ಗೋಪಾಲ್ ದೇವರಮನಿ, ಬ್ಯಾಟರಿ ಜಬಿವುಲ್ಲಾ, ಜಿ.ಎಸ್. ಸಂತೋಷ್, ಜಬಿವುಲ್ಲಾಖಾನ್, ಭಾಷಾ ದಾದರ್, ನಿಜಾಮ್ ಬಿಲಾಲ್, ದಾದಾಪೀರ್, ಪೈಲ್ವಾನ್,ತನ್ವೀರ್, ಗಿರೀಶ್ ಕುಮಾರ್, ರವಿಕುಮಾರ್, ಲೋಕೇಶ್, ಈಶ್ವರ್, ಆಟೋ ರಫೀಕ್, ಖಾದರ್ ಭಾಷಾ, ಧೀರೇಂದ್ರ ನಾಗರಾಜ್, ತುಳಸಿರಾಮ್, ಬಸವರಾಜ್, ಸಂಜು, ವಿನಯ್, ಸಾಗರ್, ಅಕ್ಷಯ್, ಗುರುಮೂರ್ತಿ, ಅಲ್ಲಾಭಕ್ಷಿ ಉಪಸ್ಥಿತರಿದ್ದರು.
ಕನ್ನಡ ಪರ ಸಂಘಟನೆಗಳು ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ಅಂಗವಾಗಿ ದಾವಣಗೆರೆ ಅಶೋಕ ರಸ್ತೆಯಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದವು
ಡಿಸಿ ಕಚೇರಿ ಎದುರು ರೈತ ಸಂಘ ಪ್ರತಿಭಟನೆ
ಶೀಘ್ರದಲ್ಲಿ ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಳ್ಳುವ ಮುಖಾಂತರ ಕಾವೇರಿ ನೀರಿಗೆ ಪರ್ಯಾಯ ಸುರಕ್ಷತಾ ಕ್ರಮಕ್ಕೆ ಮುಂದಾಗಬೇಕು ಎಂಬುದು ಸೇರಿದಂತೆ, ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಮಿತಿಯಿಂದ ಇಲ್ಲಿನ ಜಿಲ್ಲಾಡಳಿತ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಪಿ.ಪಿ. ಮರುಳಸಿದ್ದಯ್ಯ, ರಾಜ್ಯ ಗೌರವಾಧ್ಯಕ್ಷ ಕುರುವ ಗಣೇಶ್, ಹೊನ್ನೂರು ಮುನಿಯಪ್ಪ, ಕೆ. ಜಿ ಶೇಖರಪ್ಪ, ಜಿ. ಹೊನ್ನೂರು ರಾಜು, ಕೆ. ವಿ. ರುದ್ರಮುನಿ, ನಾಗಾನಾಯ್ಕ, ಗೋಶಾಲೆ ಬಸವರಾಜ್, ಕಣಿವೆ ಬಿಳಚಿ ಅಣ್ಣಪ್ಪ, ಮಾಯಕೊಂಡ ಬೀರಪ್ಪ, ಕೆ.ಬಿ.ಮಲ್ಲೇಶಪ್ಪ, ಸಂತೋಷನಾಯ್ಕ, ಮಲ್ಲೇನಹಳ್ಳಿ ನಾಗರಾಜ್ ಮತ್ತಿತರರು ಪಾಲ್ಗೊಂಡಿದ್ದರು.
ಕನ್ನಡ ಪರ ಸಂಘಟನೆಗಳ ಒಕ್ಕೂಟದ ಕೆ.ಜಿ. ಶಿವಕುಮಾರ್, ರೈತ ಮುಖಂಡ ಹುಚ್ಚವ್ವನಹಳ್ಳಿ ಮಂಜುನಾಥ್, ಹೆಚ್.ಜಿ. ಉಮೇಶ್, ಐರಣಿ ಚಂದ್ರು, ಬಿ.ಪ್ರವೀಣ್, ನಾಗರಾಜ್, ನಿಂಗಪ್ಪ, ಹನುಮಂತಪ್ಪ, ನಿಂಗಣ್ಣ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆಯಿಂದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿ ನಂತರ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು. ಈ ವೇಳೆ ಸಂಸ್ಥಾಪಕ ರಾಜ್ಯಾಧ್ಯಕ್ಷ ವಿ.ಅವಿನಾಶ್, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಮಾಲಾ ನಾಗರಾಜ್, ರಾಜ್ಯ ಪ್ರಧಾನ ಕಾರ್ಯದರ್ಶಿ ಗಣೇಶ್ ಎಸ್., ಫಯಾಜ್ ಅಹ್ಮದ್, ಚಮನ್ ಶರೀಫ್, ಈರಣ್ಣ ಎನ್.ಎಸ್., ಗೌಸ್ ಪೀರ್, ಶಾಂತಮ್ಮ, ಮಮ್ತಾಜ್, ನಾಗರಾಜ್, ಕೆ.ಹುಲಿಕುಂಟೇಶ್ವರ್, ಸುಲೇಮಾನ್, ನಿಂಗರಾಜ್, ಜೆ.ಜಗದೀಶ್, ಶರಣೇಶ್, ಶರಣಪ್ಪ ಅಂಬಾರಿ, ನಟರಾಜ್, ಹನುಮಂತಪ್ಪ, ಅಕ್ಬರ್ ಭಾಷಾ, ಸುನಿತ್ ಇತರರು ಈ ಸಂದರ್ಭದಲ್ಲಿದ್ದರು.
ಅಖಿಲ ಕರ್ನಾಟಕ ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘಗಳ ಒಕ್ಕೂಟ, ಡಾ.ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ, ರಾಜರತ್ನ ಪುನೀತ್ ರಾಜ್ಕುಮಾರ್ ಅಭಿಮಾನಿಗಳ ಸಂಘದಿಂದ ಕರ್ನಾಟಕ ಬಂದ್ ಬೆಂಬಲಿಸಿ ದಾವಣಗೆರೆ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧ್ಯಕ್ಷ ಯೋಗೇಶ್, ಪದಾಧಿಕಾರಿಗಳಾದ ಜಿ.ಸಿ. ಶ್ರೀನಿವಾಸ್, ಶಿವಕುಮಾರ್, ಧರ್ಮರಾಜ್, ಮುರಳಿ, ಪರಶುರಾಮ್, ಅಜಯ್, ಅಂಜಿನಪ್ಪ ಇತರರು ಇದ್ದರು.
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯಿಂದಲೂ ಪ್ರತಿಭಟನೆ ನಡೆಸಲಾಯಿತು. ರಾಜ್ಯಾಧ್ಯಕ್ಷ ನಿಂಗರಾಜ್ಗೌಡ್ರು, ರಾಜ್ಯ ಮಹಿಳಾ ಕಾರ್ಯಾಧ್ಯಕ್ಷೆ ಎನ್.ಎಸ್. ಸುವರ್ಣಮ್ಮ, ನಾಗವೇಣಿ, ಕಸ್ತೂರಮ್ಮ, ಸುಜಾತ, ಭಾಗ್ಯಲಕ್ಷ್ಮಿ, ಸುನಿತಾ, ರೇಖಾ, ಶಾಂತಮ್ಮ, ಯಶೋಧಮ್ಮ, ಅನುಷಾ, ಆಶಾ, ಮಂಜುನಾಥ್ ಅಣಜಿ, ಶಿವಕುಮಾರ್ ಅಣಜಿ, ರಾಘವೇಂದ್ರ, ನಾಗರಾಜ ಅಣಜಿ, ರಘು ಇತರರಿದ್ದರು.
ಜೈ ಕರುನಾಡ ವೇದಿಕೆ ಜಿಲ್ಲಾ ಘಟಕದಿಂದ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ಗೌರವಾಧ್ಯಕ್ಷ, ಡಿ.ಎಸ್.ಕೆ. ಪರಶುರಾಮ್, ಜಿಲ್ಲಾಧ್ಯಕ್ಷ ಪರಶುರಾಮ ನಂದಿಗಾವಿ, ಪ್ರಧಾನ ಕಾರ್ಯದರ್ಶಿ ಇ.ಮಂಜುನಾಥ್ ಬಾಳೆಕಾಯಿ ಹಾಗೂ ಪದಾಧಿಕಾರಿಗಳು ಇದ್ದರು.
ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ಜಿಲ್ಲಾ ಸಮಿತಿ ನಡೆಸಿದ ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಕೆ.ಎಂ. ಚನ್ನಬಸಪ್ಪ ಇತರರಿದ್ದರು.
ಕನ್ನಡ ಚಳವಳಿ ಕೇಂದ್ರ ಸಮಿತಿ, ಡಾ. ರಾಜ್ ಅಭಿಮಾನಿಗಳ ಸಂಘ, ಅಖಂಡ ಕರ್ನಾಟಕ ರಕ್ಷಣಾ ವೇದಿಕೆ, ಕರವೇ (ಪ್ರವೀಣ ಶೆಟ್ಟಿ ಬಣ), ಜಯ ಕರ್ನಾಟಕ, ಜೈ ಕರುನಾಡ ವೇದಿಕೆ, ಗಜ ಸೇನೆ, ಸುವರ್ಣ ಕರ್ನಾಟಕ ವೇದಿಕೆ, ಶಂಕರ್ನಾಗ್ ಅಭಿಮಾನಿಗಳ ಆಟೋ ಬಳಗ, ದಲಿತ ಸೇನೆ, ದಲಿತ ಸೇನಾ ಸಮಿತಿ, ಕರ್ನಾಟಕ ನವ ನಿರ್ಮಾಣ ಸೇನೆ, ಸ್ನೇಹ ಸಂಘ, ಕರ್ನಾಟಕ ಕದಂಬ ಸೇನೆ, ಕನ್ನಡ ನಾಡು ಸಮರ ಸೇನೆ, ದಾವಣಗೆರೆ ಕಟ್ಟಡ ಕಾರ್ಮಿಕರ ಅಸಂಘಟಿತ ವೇದಿಕೆ, ವಿಷ್ಣು ಸೇನಾ ಸಮಿತಿ, ಕರ್ನಾಟಕ ಕನ್ನಡ ಸೇನೆ, ಸುವರ್ಣ ಕರ್ನಾಟಕ ಹಿತರಕ್ಷಣಾ ವೇದಿಕೆ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಜೈ ಕರುನಾಡ ವೇದಿಕೆ, ರೈತ ಸಂಘ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ) ಸೇರಿದಂತೆ ಹಲವು ಸಂಘಟನೆಗಳು ಬಂದ್ ಬೆಂಬಲಿಸಿ ಪ್ರತಿಭಟನೆ ನಡೆಸಿದವು.