ಜಗಳೂರು ಶಾಸಕ ಬಿ. ದೇವೇಂದ್ರಪ್ಪ
ಜಗಳೂರು, ಆ.26- ನೀರಿನ ಮಿತ ಬಳಕೆ ಮತ್ತು ಸಂರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಕರೆ ನೀಡಿದರು.
ಪಟ್ಟಣದ ಹಳೇಬಸ್ ನಿಲ್ದಾಣದ ಬಳಿ “ಅಟಲ್ ಭೂ ಜಲಯೋಜನೆ” ಕಲಾ ತಂಡದ ಜನಜಾಗೃತಿ ಜಾಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಂತರ್ಜಲ ಹೆಚ್ಚಳಕ್ಕೆ ಅಟಲ್ ಭೂ ಜಲ ಯೋಜನೆ ಸಹಕಾರಿಯಾಗಲಿದೆ. ಮಳೆನೀರನ್ನು ಸಂಗ್ರಹಣೆ ಮಾಡಿ ಮಿತವಾಗಿ ಬಳಕೆ ಮಾಡಬೇಕು. ತಾಲ್ಲೂಕು ಕಳೆದ ವರ್ಷ ಅತಿವೃಷ್ಟಿಗೆ ತುತ್ತಾಗಿ ಹಳ್ಳಕೊಳ್ಳಗಳು ಭರ್ತಿಯಾಗಿ ಬೆಳೆ ನಾಶವಾಗಿದ್ದವು. ಪ್ರಸಕ್ತ ಸಾಲಿನಲ್ಲಿ ಸರಿಯಾಗಿ ಮಳೆ ಬೀಳದೆ ಮುಂ ಗಾರು ಬೆಳೆಗಳು ಬಾಡುತ್ತಿವೆ. ರೈತರು ಸಂಕಷ್ಟದಲ್ಲಿ ದ್ದಾರೆ. ಜನ ಜಾನುವಾರುಗಳು ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುವ ಭೀತಿ ಎದುರಾಗಿದೆ ಎಂದು ಶಾಸಕರು ಆತಂಕ ವ್ಯಕ್ತಪಡಿಸಿದರು.
ಪ್ರಕೃತಿಯಲ್ಲಿ ನೀರು, ಗಾಳಿ, ಬೆಳಕು ದೇವರು ಕೊಟ್ಟ ಭಿಕ್ಷೆಯಾಗಿದೆ. ಕೋವಿಡ್ ಸಂದರ್ಭದಲ್ಲಿ ಆಮ್ಲಜನಕಕ್ಕೂ ಪರದಾಡುವಾಗ ಪರಿಸರದ ಮಹತ್ವ ಅರಿವಾಗಿದೆ. ಪ್ರಕೃತಿ ವಿನಾಶ ಜೀವ ಸಂಕುಲಕ್ಕೆ ಆಪತ್ತು. ಪ್ರಕೃತಿ ಉಳಿವಿಗಾಗಿ ನಾವೆಲ್ಲರೂ ಸಂಕಲ್ಪ ಮಾಡಬೇಕು ಎಂದರು. ಕಲಾತಂಡದಿಂದ ನೀರಿನ ಮಿತಬಳಕೆ ಕುರಿತು ಜನ ಜಾಗೃತಿ ಮೂಡಿಸಲಾಗುತ್ತಿದೆ. ಸರ್ಕಾರದ ಯೋಜನೆಗಳ ಮಹತ್ವ, ಅನುಷ್ಟಾನ ಕುರಿತು ಮಾಹಿತಿ ತಿಳಿದುಕೊಳ್ಳಬೇಕು ಎಂದರು.
ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಷಂಷೀರ್ ಅಹಮದ್, ಡಿಪಿಎಂ ನೋಡಲ್ ಅಧಿಕಾರಿ ಆರ್.ಬಸವರಾಜ್, ಪ.ಪಂ ಸದಸ್ಯರಾದ ರಮೇಶ್ ರೆಡ್ಡಿ, ಶಕೀಲ್ ಅಹಮ್ಮದ್ ಮುಖಂಡರಾದ ಕಲ್ಲೇಶ್ ರಾಜ್ ಪಟೇಲ್, ಅಹಮ್ಮದ್ ಅಲಿ, ಓಮಣ್ಣ, ಶಂಭುಲಿಂಗಪ್ಪ, ಮಾಳಮ್ಮನಹಳ್ಳಿ ವೆಂಕಟೇಶ್, ಬಿ.ಮಹೇಶ್ವರಪ್ಪ, ಕೃಷಿ ಇಲಾಖೆ ಅಧಿಕಾರಿ ಮಿಥುನ್ ಕಿಮಾವತ್, ನೀರಾವರಿ ಇಲಾಖೆಯ ಚಂದ್ರಗೌಡ, ಶ್ವೇತಾ ಕೆ.ಎಸ್., ಅರ್ಪಿತ ಎಸ್.ಆರ್, ಯಶ್ವಂತ್, ಮಂಜುನಾಥ್ ಮುಂತಾದವರು ಇದ್ದರು.