ದಾವಣಗೆರೆ, ಆ. 20 – ಸಂಸ್ಕೃತಿ ಹಾಗೂ ಕಲೆಗಳನ್ನು ಉಳಿಸಿ, ಬೆಳೆಸಿದಷ್ಟೂ ಸಮಾಜದಲ್ಲಿ ಒಗ್ಗಟ್ಟು ಹೆಚ್ಚಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಅಭಿಪ್ರಾಯ ಪಟ್ಟಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅನುದಾನಮ್ ಚಾರಿಟೆಬಲ್ ಟ್ರಸ್ಟ್, ನಿಹಾರಿಕ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಭವಾನಿ ಫೌಂಡೇಷನ್ಗಳ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಜನಪದ ಕಲಾ ಉತ್ಸವದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಬಂಜಾರ ಸಮು ದಾಯ ವಿಶಿಷ್ಟವಾದ ಸಂಸ್ಕೃತಿ ಹಾಗೂ ಕಲೆ ಹೊಂ ದಿದೆ. ಸಮಾಜವು ವೈವಿಧ್ಯತೆಯನ್ನು ಕಾಪಾಡಿ ಕೊಂಡು ಬಂದಿದೆ. ಬಂಜಾರ ಸಮುದಾಯದವರು ತಮ್ಮ ಸಂಸ್ಕೃತಿ ಗೌರವಿಸುವುದು ಹಾಗೂ ಪ್ರೀತಿ ಸುವುದನ್ನು ಇತರರೂ ಕಲಿಯಬೇಕಿದೆ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್, ಸಮಾಜ ಬೆಳೆಯಬೇಕಾದರೆ ಸಂಸ್ಕೃತಿಯ ಪೋಷಣೆ ಅಗತ್ಯ. ಪಾಲಿಕೆ ವತಿಯಿಂದಲೂ ಜನಪದ ಉತ್ಸವಗಳಿಗೆ ಪ್ರೋತ್ಸಾಹ ನೀಡುತ್ತಾ ಬರಲಾಗುತ್ತಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅನುದಾನಮ್ ಚಾರಿಟಬಲ್ ಟ್ರಸ್ಟೀ ಎಲ್. ಕುಬೇರ ನಾಯ್ಕ, ಬಂಜಾರ ತಾಂಡಾ ಸಂಸ್ಕೃತಿ ಉಳಿಸಲು ಹಾಗೂ ಕಲಾವಿದರ ಅನ್ವೇಷಣೆ ಮಾಡಿ ಬೆಳೆಸಲು ತಮ್ಮ ಸಂಘಟನೆ ಕಾರ್ಯ ನಿರ್ವಹಿಸುತ್ತಿದೆ ಎಂದರು.
ವೇದಿಕೆ ಮೇಲೆ ಪಾಲಿಕೆ ಸದಸ್ಯೆ ಮೀನಾಕ್ಷಿ ಜಗದೀಶ್, ಮುಖಂಡರಾದ ಎನ್. ಜಯದೇವ ನಾಯ್ಕ, ಕುಬೇರ ನಾಯ್ಕ, ಗೋವಿಂದ ನಾಯ್ಕ, ಪೀರ್ಯಾ ನಾಯ್ಕ, ಬಸವರಾಜ ನಾಯ್ಕ, ಶಾಂತಾ ನಾಯ್ಕ, ಚಿರಡೋಣಿ ರುದ್ರೇಶ್, ಲಲಿತ ಜಾಧವ್ ಮತ್ತಿತರರು ಉಪಸ್ಥಿತರಿದ್ದರು.
ನಿಹಾರಿಕಾ ಪ್ರಾರ್ಥಿಸಿದರು. ಹೆಚ್. ಶಾಂತಾನಾಯಕ್ ಸ್ವಾಗತಿಸಿದರು.