ದಾವಣಗೆರೆ, ಆ. 15- ಎಸ್ಸಿ, ಎಸ್ಟಿ, ಟಿಎಸ್ಪಿಗಾಗಿ ಮೀಸಲಿಟ್ಟ ಹಣವನ್ನು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸುವುದನ್ನು ಕೂಡಲೇ ಕೈಬಿಡಬೇಕೆಂದು ಆಗ್ರಹಿಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಹಕ್ಕುಗಳ ಹೋರಾಟ ಸಮಿತಿ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಉಪ ಯೋಜನೆಗಾಗಿ ಮೀಸಲಿಟ್ಟಿದ್ದ ಹಣದಲ್ಲಿ 11 ಸಾವಿರ ಕೋಟಿ ರೂ. ಗಳನ್ನು ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳುವ ತೀರ್ಮಾನವನ್ನು ಕೂಡಲೇ ಕೈಬಿಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಉಪ ಯೋಜನೆಗಳಿಗಾಗಿ 34,293,69 ಕೋಟಿಗಳಷ್ಟು ಹಣ ಮೀಸಲಿಟ್ಟಿದೆ. ಆದರೆ ಬೇರೆ ಯೋಜನೆಗಳಿಗೆ ಈ ಅನುದಾನವನ್ನು ವರ್ಗಾಯಿಸುವ ಸಚಿವ ಸಂಪುಟದ ತೀರ್ಮಾನ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ಧರಾಮಯ್ಯ ಸರ್ಕಾರ ಕೂಡ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ. ಕೂಡಲೇ ಎಸ್ಸಿ,ಎಸ್ಟಿಗೆ ಮೀಸಲಿಟ್ಟ ಹಣವನ್ನು ಬೇರೆ ಯೋಜನೆ ಗಳಿಗೆ ಬಳಸಬಾರದು ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ರಾಜ್ಯ ಸಂಚಾಲಕ ಆವರಗೆರೆ ವಾಸು, ರುದ್ರೇಶ ಮಳಲಕೆರೆ, ಹನುಮಂತಪ್ಪ, ರಂಗನಾಥ, ಕೆರೆಯಾಗಳಹಳ್ಳಿ ರಾಜು, ಎನ್.ಹೆಚ್. ರಾಮಣ್ಣ, ನರೇಗ ರಂಗನಾಥ್, ಬಸಣ್ಣ, ವಿ. ಲಕ್ಷ್ಮಣ್, ಹನುಮಂತಪ್ಪ ಯರವನಾಗತಿಹಳ್ಳಿ, ರಮೇಶ್ ಸಿ. ದಾಸರ್, ಸಿ. ಗುರುಮೂರ್ತಿ, ಪರಶುರಾಮ್ ಪಾಲ್ಗೊಂಡಿದ್ದರು.