ದಾವಣಗೆರೆ ವ್ಯಪಕೈವ್ಯಾ ಸಹಕಾರ ಸಂಘದ ಸಮಾಪನೆ ತೆರವು ಮಾಡದಂತೆ ಒತ್ತಾಯ

ದಾವಣಗೆರೆ, ಆ. 10- ಜಿಲ್ಲೆಯ ವ್ಯವಸಾಯಗಾರರ ಪರಿವರ್ತನಾ ಕೈಗಾರಿಕಾ ಮತ್ತು ವ್ಯಾಪಾರೋದ್ಯಮ ಸಹಕಾರ ಸಂಘದಲ್ಲಿ 17 ಕೋಟಿಗೂ ಅಧಿಕ ಹಣದ ದುರುಪಯೋಗ ನಡೆದಿದ್ದು, ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮತ್ತು ಯಾವುದೇ ಕಾರಣಕ್ಕೂ ಸಮಾಪನೆ ತೆರವು ಗೊಳಿಸದಂತೆ ಸಹಕಾರ ಸಂಘದ ಮಾಜಿ ನಿರ್ದೇಶಕರು, ಸದಸ್ಯರು ಒತ್ತಾಯಿಸಿದ್ದಾರೆ.

ಬಾಡದ ಆರ್.ಎಸ್. ಗುರುಶಾಂತಪ್ಪ ಮಾತನಾಡಿ, 2009 ರಿಂದ 2018 ರ ಅವಧಿಯಲ್ಲಿ ಆಡಳಿತ ಮಂಡಳಿಯಲ್ಲಿದ್ದ ಕೆಲವರು ಆಡಳಿತದಲ್ಲಿ ಲೋಪ ಎಸಗಿ, ಕಾನೂನು ಉಲ್ಲಂಘಿಸಿ, ಅಕ್ರಮ ಎಸಗಿದ್ದಾರೆ. 

ಈ ಕುರಿತು ಸಹಕಾರ ಇಲಾಖೆ ಅಧಿಕಾರಿಗಳಿಂದ ತನಿಖೆ ನಡೆಸಿ, ವ್ಯವಸಾಯಗಾರರ ಪರಿವರ್ತನಾ ಕೈಗಾರಿಕಾ ಮತ್ತು ವ್ಯಾಪಾರೋದ್ಯಮ ಸಹಕಾರ ಸಂಘ ಸಮಾಪನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಅಂದಿನ ಆಡಳಿತ ಮಂಡಳಿಯಲ್ಲಿದ್ದ ಸದಸ್ಯರ ಅಭಿಪ್ರಾಯಗಳಿಗೆ ಕಿವಿಗೊಡದೇ ಏಕಪಕ್ಷೀಯವಾಗಿ ಏಕಸ್ವಾಮ್ಯ ಸಾಧಿಸುವ ಉದ್ದೇಶದಿಂದ ಆಮಿಷವೊಡ್ಡಿ, ಬೆದರಿಸಿ ತಾನು ಹೇಳಿದಂತೆ ಮಾಡಿಸಿಕೊಂಡಿದ್ದಾರೆ. ಅಲ್ಲದೇ ಸಂಘದ ಅಸ್ಥಿತ್ವಕ್ಕೆ ಧಕ್ಕೆ ತಂದಿದ್ದಾರೆಂದು ದೂರಿದರು.

ಸಹಕಾರ ಸಂಘದಲ್ಲಿ ರೈತರ ಚಟುವಟಿಕೆಗಳನ್ನು ಬಿಟ್ಟು ಇನ್ನಿತರೆ ಅಕ್ರಮ ಚಟುವಟಿಕೆ ಮಾಡುತ್ತಾ ಒತ್ತಾಯ ಪೂರ್ವಕವಾಗಿ ನಿರ್ದೇಶಕರ ಸಹಿ ಪಡೆದು ಸಂಘದಲ್ಲಿ ದುರಾಡಳಿತ, ಹಣ ದುರುಪಯೋಗ ಮಾಡಿದ್ದಾರೆ. 

ಕಾರಣ ಈ ಎಲ್ಲಾ ದುರುಪಯೋಗದ ಸಮಗ್ರ ತನಿಖೆ ನಡೆಸಿ, ರೈತರು, ಸಾರ್ವಜನಿಕರ ಹಿತದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ನೂತನವಾಗಿ ವ್ಯವಸಾಯಗಾರರ ಪರಿವರ್ತನಾ ಕೈಗಾರಿಕಾ ಮತ್ತು ವ್ಯಾಪಾರೋದ್ಯಮ ಸಹಕಾರ ಸಂಘ ನಿಯಮಿತವನ್ನು ಆರಂಭಿಸಲು ಸಂಬಂಧಿಸಿದ ಅಧಿಕಾರಿಗಳು ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಸ್.ಆನ್. ಚನ್ನಬಸಪ್ಪ, ಎಂ.ಎಸ್. ಮಲ್ಲಿಕಾರ್ಜುನ್, ಎನ್.ಇ. ಶಿವಕುಮಾರ್, ಎಂ.ಆರ್. ಕುಬೇಂದ್ರ ಹೆಚ್.ಜಿ. ಮರುಳಸಿದ್ಧಪ್ಪ, ಆರ್.ಜಿ. ನರೇಶ್ ಉಪಸ್ಥಿತರಿದ್ದರು. 

error: Content is protected !!