ಉಕ್ಕಡಗಾತ್ರಿ ಬಳಿ ತುಂಗಭದ್ರಾ ನದಿಯಲ್ಲಿ ನೀರು ಹರಿವು ಇಳಿದಿಲ್ಲ
ಮಲೇಬೆನ್ನೂರು, ಜು.26- ಮಲೆನಾಡಿನಲ್ಲಿ ಮಳೆ ಆರ್ಭಟ ಕಡಿಮೆಯಾಗಿದ್ದು, ಜಲಾಶಯಗಳಿಗೆ ನೀರಿನ ಒಳಹರಿವು ಇಳಿಮುಖವಾಗಿದೆ.
ಭದ್ರಾ ಜಲಾಶಯಕ್ಕೆ ಮಂಗಳ ವಾರ 31,425 ಕ್ಯೂಸೆಕ್ಸ್ ಇದ್ದ ಒಳಹರಿವು ಬುಧವಾರ ಬೆಳಿಗ್ಗೆ 24,704 ಕ್ಯೂಸೆಕ್ಸ್ ಇಳಿಕೆ ಕಂಡಿದೆ.
ಬುಧವಾರ ಸಂಜೆ ಜಲಾಶಯ ದ ನೀರಿನ ಮಟ್ಟ 156 ಅಡಿ ಆಗಿತ್ತು. ಸಂಜೆ 40 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಇದರಿಂದಾಗಿ ಉಕ್ಕಡಗಾತ್ರಿ ಬಳಿ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು 2 ಅಡಿ ಕಡಿಮೆ ಆಗಿದ್ದು, ಗುರುವಾರದಿಂದ ಉಕ್ಕಡಗಾತ್ರಿ-ಪತ್ತೇಪುರ ಸಂಪರ್ಕ ಸೇತುವೆ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇದೆ ಎಂದು ಅಜ್ಜಯ್ಯ ದೇವಸ್ಥಾನದ ಕಾರ್ಯದರ್ಶಿ ಸುರೇಶ್ ತಿಳಿಸಿದ್ದಾರೆ.
ರಾಜ್ಯದ ಪ್ರಮುಖ ಜಲ ವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಜಲಾಶಯಕ್ಕೆ ಬುಧವಾರ 68,645 ಕ್ಯೂಸೆಕ್ಸ್ ಒಳಹರಿವು ಇದ್ದು, ಕಳೆದ 24 ಗಂಟೆಯಲ್ಲಿ ಜಲಾಶಯಕ್ಕೆ 3 ಅಡಿ 4 ಇಂಚು ನೀರು ಹರಿದು ಬಂದಿದೆ.
1819 ಅಡಿ ಗರಿಷ್ಠ ಮಟ್ಟದ ಜಲಾಶಯದಲ್ಲೀಗ 1780 ಅಡಿ ನೀರು ದಾಖಲಾಗಿದೆ.
ವಿಶ್ವ ವಿಖ್ಯಾತ ಜೋಗ ಜಲಪಾತಕ್ಕೆ ಮುಂಗಾರು ಮಳೆ ವೈಭವ ತಂದಿದ್ದು, ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸಿದೆ.