ಭೌತಿಕ ಬದುಕಿಗೆ ಧರ್ಮದ ಆಚರಣೆ ಅವಶ್ಯಕ – ಶ್ರೀಗಳ ಹಿತನುಡಿ

ಭೌತಿಕ ಬದುಕಿಗೆ ಧರ್ಮದ ಆಚರಣೆ ಅವಶ್ಯಕ – ಶ್ರೀಗಳ ಹಿತನುಡಿ

ಬೀದರ್‌, ಜು.25- ಜನ್ಮ  ಜನ್ಮಗಳ ಪುಣ್ಯದ ಫಲದಿಂದ ಮಾನವ ಜನ್ಮ ಪ್ರಾಪ್ತವಾಗಿದೆ. ಅರಿವು, ಆದರ್ಶಗಳಿಂದ ಬದುಕನ್ನು ಸಮೃದ್ಧಗೊಳಿಸಿಕೊಳ್ಳಬೇಕು. ಭೌತಿಕ ಬದುಕಿಗೆ ಅಧ್ಯಾತ್ಮದ ಅರಿವು ಮತ್ತು ಧರ್ಮಾಚರಣೆಯಿಂದ ಬಾಳು ಉಜ್ವಲಗೊಳ್ಳುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರ ಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಮಂಗಳವಾರ ತಾಲ್ಲೂಕಿನ ಕೊಳ್ಳಾರ ಕೆ. ವ್ಯಾಪ್ತಿಯಲ್ಲಿ ಬರುವ ಶ್ರೀ ಜಗದ್ಗುರು ಪಂಚಾಚಾರ್ಯ ಪುಣ್ಯಾಶ್ರಮದಲ್ಲಿ ಜರುಗಿದ ಅಧಿಕ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡುತ್ತಿದ್ದರು.

ಬದುಕು ಒಂದು ಸುಂದರ ಮನೆಯ ಕಿಟಕಿ ಇದ್ದಂತೆ. ಕಿಟಕಿ ತೆರೆದರೆ ಬೆಳಕು, ಇಲ್ಲದಿದ್ದರೆ ಕತ್ತಲು. ಹಾಗೆಯೇ ಮನುಷ್ಯ ಶ್ರಮಪಟ್ಟರೆ ಸುಖ. ಇಲ್ಲದಿದ್ದರೆ ದುಃಖ ತಪ್ಪಿದ್ದಲ್ಲ. ಪೆಟ್ಟು ತಿಂದ ಕಲ್ಲು ಸುಂದರ ಮೂರ್ತಿಯಾಗುತ್ತದೆ. ಪೆಟ್ಟುಕೊಟ್ಟ ಸುತ್ತಿಗೆ ಸುತ್ತಿಗೆಯಾಗಿಯೇ ಉಳಿಯುತ್ತದೆ. ನೋವು ಕೊಡುವವರು ಹಾಗೆಯೇ ಇರುತ್ತಾರೆ. ನೋವುಂಡವರು ಜ್ಞಾನಿಗಳಾಗುತ್ತಾರೆ. 

ಸಂಸ್ಕಾರ, ಸಂಸ್ಕೃತಿಯ ಆಚರಣೆಯಿಂದ ಜೀವನ ಉಜ್ವಲಗೊಳ್ಳಲು ಸಾಧ್ಯ. ತಿಳಿದು ಬರುವುದು ಜನನ. ತಿಳಿಯದೇ ಬರುವುದು ಮರಣ. ತಿಳಿದು ಬದುಕುವುದೇ ನಿಜವಾದ ಜೀವನ. ವೀರಶೈವ ಧರ್ಮದಲ್ಲಿ ಗುರು ಕೊಟ್ಟ ಇಷ್ಟಲಿಂಗವನ್ನು ಸದಾ ಧರಿಸಿ ಪೂಜಿಸಿದರೆ ಒಂದೇ ಜನ್ಮದಲ್ಲಿ ಜೀವನ್ಮುಕ್ತಿ ಪ್ರಾಪ್ತವಾಗುವುದೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ. ಶ್ರೀ ಜಗದ್ಗುರು ಪಂಚಾಚಾರ್ಯ ಪುಣ್ಯಾಶ್ರಮದಿಂದ ಈ ಭಾಗದಲ್ಲಿ ಅಧ್ಯಾತ್ಮ ಚಿಂತನಗಳನ್ನು ಜನ ಮನಕ್ಕೆ ಮುಟ್ಟಿಸುವ ಉದ್ದೇಶ ಹೊಂದಿದೆ. ಕಾರ್ಯಕ್ರಮದ ಸಂಘಟಕರ ಶ್ರಮ ಸಾರ್ಥಕಗೊಂಡಿದೆ ಎಂದು ಹರುಷ ವ್ಯಕ್ತಪಡಿಸಿದರು.

ಸಮಾರಂಭವನ್ನು ಉದ್ಘಾಟಿಸಿದ ಹುಡುಗಿ ಹಿರೇಮಠದ ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಒತ್ತಡದಲ್ಲಿ ಸಿಲುಕಿರುವ ಮನುಷ್ಯನಿಗೆ ಮಾನಸಿಕ ಶಾಂತಿ, ನೆಮ್ಮದಿ ಇಲ್ಲದಂತಾಗಿದೆ. ಶ್ರೀ ಗುರುವಿನ ಮಾರ್ಗದರ್ಶನದಲ್ಲಿ ಎಲ್ಲರೂ ಬದುಕು ಕಟ್ಟಿಕೊಂಡು ಬಾಳಬೇಕಾಗುತ್ತದೆ ಎಂದು ಹೇಳಿದರು.  

ಮೇಹಕರ ಹಿರೇಮಠದ ಶ್ರೀ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಮಲೂರು ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಸಮ್ಮುಖ ವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೀದರ್‌ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿ, ನಿರ್ಮಿಸುತ್ತಿರುವ ಸಮುದಾಯ ಭವನಕ್ಕೆ 10 ಲಕ್ಷ ರೂ. ಅನುದಾನ ನೀಡುವುದಾಗಿ ತಿಳಿಸಿದರು. 

ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ ಮಾತನಾಡಿದರು. ಬೀದರ್ ಕ.ಕಾ.ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಡಿ.ಕೆ.ಗಣಪತಿ ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರು ರಕ್ಷೆ ಸ್ವೀಕರಿಸಿದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಭವ್ಯ ಮಂದಿರವನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಉದ್ಘಾಟಿಸಿ, ಇಷ್ಟಲಿಂಗ ಮಹಾಪೂಜೆ ನೆರವೇರಿಸಿದರು. 

error: Content is protected !!