ಹರಿಹರ, ಜು,25- ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಗೆ ನಗರದ ದೇವಸ್ಥಾನ ರಸ್ತೆಯ ಕರ್ನಾಟಕ ಒನ್ ಸೆಂಟರ್ ಬಳಿ ಸಾರ್ವಜನಿಕರು ಬೃಹತ್ ಸರತಿ ಸಾಲಿನಲ್ಲಿ ನಿಂತು ಅರ್ಜಿ ಸಲ್ಲಿಸಿದರು.
ನಗರದ ದೇವಸ್ಥಾನ ರಸ್ತೆ ಹಾಗೂ ಟಿ.ಜೆ. ಶಿವಣ್ಣ ಕಟ್ಟಡದಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಬೆಂಕಿನಗರ, ಕಾಳಿದಾಸ ನಗರ, ಹರ್ಲಾಪುರ ಸೇರಿದಂತೆ, ಇತರೆ ಬಡಾವಣೆಗಳಲ್ಲಿ ಇರುವಂತಹ ಸೇವಾ ಕೇಂದ್ರಗಳು ಸಾರ್ವಜನಿಕರಿಂದ ಅರ್ಜಿಯನ್ನು ಸ್ವೀಕರಿಸುವ ಕಾರ್ಯವನ್ನು ಮಾಡುತ್ತಿದ್ದು, ಈ ಕೇಂದ್ರಗಳಲ್ಲಿ ಅರ್ಜಿಯನ್ನು ನೀಡಿದಾಗ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಸೌಲಭ್ಯಗಳು ದೊರೆಯದಿದ್ದರೆ ಯಾರನ್ನು ದೋಷಿಸಬೇಕು. ಹಾಗಾಗಿ ತಾಲ್ಲೂಕು ಆಡಳಿತ ಇದರ ಬಗ್ಗೆ ಗಮನ ಹರಿಸುವಂತೆ ಸಾರ್ವಜನಿಕರು ಒತ್ತಾಯಿಸಿದರು.
ಅಲ್ಲದೇ ಗೃಹ ಜ್ಯೋತಿ ಯೋಜನೆಯ ಅಡಿ ಜುಲೈ ತಿಂಗಳ ಉಚಿತ ವಿದ್ಯುತ್ ಪಡೆಯಲು ನೋಂದಣಿಗೆ ಇಂದು ಮಂಗಳವಾರ ಕೊನೆಯ ದಿನವಾಗಿತ್ತು. ಹಾಗಾಗಿ ಆಗಸ್ಟ್ ತಿಂಗಳಲ್ಲಿ ಶೂನ್ಯ ಬಿಲ್ ಪಡೆಯುವ ಉದ್ದೇಶದಿಂದ ಇಂದು ಕರ್ನಾಟಕ ಒನ್ ಸೆಂಟರ್ ಬಳಿ ಸಾರ್ವಜನಿಕರು ಹೆಚ್ಚಿನ ಸಂಖೆಯಲ್ಲಿ ಸೇರಿದ್ದರು. ಅರ್ಜಿ ಸಲ್ಲಿಸಲು ಇನ್ನೂ ಅಂತಿಮ ದಿನ ಪ್ರಕಟಿಸಿಲ್ಲ. ಇನ್ನು ಆಗಸ್ಟ್ ನಲ್ಲಿ ಅರ್ಜಿ ಸಲ್ಲಿಸಿದರೆ, ಸೆಪ್ಟಂಬರ್ನಲ್ಲಿ ಶೂನ್ಯ ಬಿಲ್ ಪಡೆಯಬಹುದಾಗಿದೆ.