ದಾವಣಗೆರೆ, ಜು. 21- ಸ್ಥಳೀಯ ವಿನೋಬನಗರದ 3 ಹಾಗೂ 4ನೇ ಮುಖ್ಯ ರಸ್ತೆ ಬಳಿ ಇರುವ ಕೆ.ಎಸ್. ವೈನ್ ಲ್ಯಾಂಡ್ ಹೆಸರಿನ ಬಾರ್ನಿಂದಾಗಿ ತೀವ್ರ ತೊಂದರೆಯಾಗುತ್ತಿದ್ದು, ಕೂಡಲೇ ಬಾರ್ ಸ್ಥಳಾಂತರಗೊಳಿಸುವಂತೆ ಅಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅನುಪಮಾ ರವಿಕುಮಾರ್, ಬಾರ್ಗೆ ಎಂಪಿಆರ್ ನಿಯಮದಡಿ ಪಾರ್ಸಲ್ ಮಾರಾಟಕ್ಕೆ ಮಾತ್ರ ಪರವಾನಿಗೆ ಇದೆ. ಆದರೆ, ಮಾಲೀಕರು ಅಲ್ಲಿಯೇ ಕುಡಿಯಲು ಅವಕಾಶ ನೀಡಿದ್ದಾರೆ. ಕುಡಿದು 3 ಹಾಗೂ 4ನೇ ಮುಖ್ಯ ರಸ್ತೆಯ ಅಡ್ಡರಸ್ತೆಗಳಲ್ಲಿ ಓಡಾಡಿ ಮನೆಗಳ ಮುಂದೆ ಮೂತ್ರ ವಿಸರ್ಜನೆ ಮಾಡುತ್ತಾ, ಬಾಟಲಿಗಳನ್ನು ಮನೆಗಳ ಮುಂದೆ ಬೀಸಾಕುತ್ತಾರೆ. ಯಾರಿಗಾದರೂ ಬುದ್ದಿ ಹೇಳಲು ಹೋದರೆ ಜಗಳಕ್ಕೆ ಬರುತ್ತಾರೆ ಎಂದು ಆರೋಪಿಸಿದರು. ಈ ಹಿಂದೆ ಬಾರ್ ಅನ್ನು ಬೇರೆ ಜಾಗಕ್ಕೆ ವರ್ಗಾಯಿಸಲು ಕೇಳಿದಾಗ ಆರು ತಿಂಗಳ ಗಡುವ ಕೊಟ್ಟಿದ್ದರು. ಈಗ ಮತ್ತೆ ಅಬಕಾರಿ ಅಧಿಕಾರಿಗಳು ಬಾರ್ನ ಪರವಾನಿಗೆ ನವೀಕರಿಸಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಬಾರ್ ಸ್ಥಳಾಂತರಿಸದಿದ್ದರೆ ಅಲ್ಲಿನ ನಿವಾಸಿಗಳೊಂದಿಗೆ ಬಾರ್ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. ವಿನೋಬನಗರದ ನಿವಾಸಿಗಳಾದ ವಿಜಯಲಕ್ಷ್ಮಿ ನಿರಂಜನ್, ಅನಿತಾ ಬಸವಲಿಂಗಪ್ಪ, ಶಂಶಾದ್ ಸೈಫುಲ್ಲಾ, ಭಾಗೀರಥಿ ಪಾಂಡುರಂಗ ಇತರರು ಉಪಸ್ಥಿತರಿದ್ದರು.