ಹರಿಹರ, ಜು. 13 – ಗ್ಯಾರಂಟಿಗಳನ್ನು ಜಾರಿಗೆ ತರುವ ಸಲುವಾಗಿ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ನೀಡದೇ ಹಿನ್ನಡೆಯಾಗಿದೆ ಎಂದು ಶಾಸಕ ಬಿ.ಪಿ. ಹರೀಶ್ ವಿಧಾನಸಭಾಧ್ಯಕ್ಷರ ಬಳಿ ತಿಳಿಸಿದ್ದಾರೆ.
ಅನುದಾನ ನೀಡದೇ ಹೋದರೆ ಶಿಕ್ಷಣ, ಆರೋಗ್ಯ, ರಸ್ತೆ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ ಕೊರತೆಯಾಗುವ ಜೊತೆಗೆ ನಿರುದ್ಯೋಗ ಸಮಸ್ಯೆಯೂ ಉಲ್ಬಣಿಸುತ್ತದೆ ಎಂದವರು ಹೇಳಿದ್ದಾರೆ.
ಹರಿಹರ ಕ್ಷೇತ್ರದಲ್ಲಿ ಮರಳು, ಇಟ್ಟಿಗೆ, ಭತ್ತದ ಗದ್ದೆಗಳು ಸೇರಿದಂತೆ ಹಲವಾರು ಆರ್ಥಿಕ ಚಟುವಟಿಕೆಗಳು ನಡೆಯುತ್ತಿವೆ. ಆದರೆ, ಹಲವಾರು ವರ್ಷಗಳಿಂದ ರಸ್ತೆಗಳ ದುರಸ್ತಿಯಾಗಿಲ್ಲ. ಗ್ರಾಮೀಣ ಜನರಿಗೆ ತೊಂದರೆಯಾಗಿದೆ. ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಬೇಕು ಹಾಗೂ ಬೈರನಪಾದ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಿ ರೈತರ ಕಷ್ಟ ಬಗೆಹರಿಸಲು ಸರ್ಕಾರ ಮುಂದಾಗಬೇಕು ಎಂದು ಹೇಳಿದರು.