ಭರಮಸಾಗರ, ಜು.13- ನಮ್ಮ ಭಾರತೀಯ ಸಾಂಪ್ರದಾಯಿಕ, ಪುರಾತನ ಪರಂಪರೆಗಳಲ್ಲಿ ಯೋಗವು ಒಂದು.
ಸರ್ವ ರೋಗಗಳಿಗೆ ದಿವ್ಯ ಔಷಧಿ ಯೋಗಾಸನ. ದೇಹದ ಪ್ರತಿ ಸಮಸ್ಯೆಗಳಿಗೆ ಒಂದೊಂದು ಆಸನವಿರುವುದು ಒಂದು ವೈಶಿಷ್ಟ ಎಂದು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಅಭಿಪ್ರಾಯಿಸಿದರು.
ಇಲ್ಲಿನ ಪತಂಜಲಿ ಯೋಗ ಸಮಿತಿ, ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ಓಂಕಾರ ಯೋಗ ಚಿಕಿತ್ಸಾ ಕೇಂದ್ರ, ಬಾಪೂಜಿ ವಿದ್ಯಾಸಂಸ್ಥೆ ಸಂಯುಕ್ತಾಶ್ರಯದಲ್ಲಿ ಈಚೆಗೆ ಹಮ್ಮಿಕೊಳ್ಳಲಾಗಿದ್ದ ಯೋಗ ಶಿಬಿರದಲ್ಲಿ ಅವರು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಭರಮಸಾಗರದ ಬಾಪೂಜಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ನಿಜಗುಣಸ್ವಾಮಿ ಮಾತನಾಡಿ, ಪ್ರತಿ ಮನೆಯಂಗಳದಲ್ಲಿ ಪ್ರತಿದಿನ ಯೋಗ ಮಾಡಿದಾಗ ಮುಂದಿನ ಪೀಳಿಗೆ ಶಿಸ್ತು, ಶಿಷ್ಟಾಚಾರ, ಸಮಯ ಪ್ರಜ್ಞೆ, ಕರ್ತವ್ಯ ಪ್ರಜ್ಞೆ ಅರಿವು ಮೂಡಿಸಲು ನಾಂದಿಯಾಗುತ್ತದೆ. ಹೀಗೆ ಯೋಗ ಮುಂದುವರೆದರೆ ನಮ್ಮ ಕುಟುಂಬಗಳು ವಿಶ್ವ ಕುಟುಂಬವಾಗುತ್ತವೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಡಿ.ವಿ. ಶರಣಪ್ಪ, ಮಾಜಿ ಉಪಾಧ್ಯಕ್ಷ ಹೆಚ್.ಎನ್.ತಿಪ್ಪೇಸ್ವಾಮಿ, ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯಸ್ಥರಾದ
ಬ್ರಹ್ಮಾಕುಮಾರಿ ರೇಖಾ, ಪೊಲೀಸ್ ಸಬ್ಇನ್ಸ್ಪೆಕ್ಟರ್ ರವಿನಾಯ್ಕ, ಡಿ.ವಿ.ಎಸ್.ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಗುರುಸಿದ್ದೇಶ್, ಯೋಗ ಮಹಿಳಾ ಸಮಿತಿ ಅಧ್ಯಕ್ಷರಾದ ಶ್ರೀಮತಿ ಕಮಲಮ್ಮ, ಓಂಕಾರ ಯೋಗ ಚಿಕಿತ್ಸಾ ಕೇಂದ್ರದ ಸಂಸ್ಥಾಪಕ ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.
ಬಾಪೂಜಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಗೊಂಚಿಗಾರ್ ಯೋಗ ಗೀತೆಯೊಂದಿಗೆ ಪ್ರಾರ್ಥನೆ ಮಾಡಿದರು. ಓಂಕಾರ ಯೋಗ ಚಿಕಿತ್ಸಾ ಕೇಂದ್ರದ ಅಧ್ಯಕ್ಷ ಶಿವರಾಜ್ ಸ್ವಾಗತಿಸಿದರು. ಯೋಗ ಶಿಕ್ಷಕಿ ಪುಷ್ಪಾ ಕಾರ್ಯಕ್ರಮ ನಿರೂಪಿಸಿದರು. ಯೋಗ ಶಿಕ್ಷಕ ಪರಶುರಾಮಪ್ಪ ವಂದಿಸಿದರು.