ಪುಟ್ಟರಾಜ ಕವಿ ಗವಾಯಿಗಳ ಸಾಹಿತ್ಯ ಮನದ ಕೊಳೆ ತೊಳೆಯುವ ಪವಿತ್ರ ಗಂಗೆ

ಪುಟ್ಟರಾಜ ಕವಿ ಗವಾಯಿಗಳ ಸಾಹಿತ್ಯ ಮನದ ಕೊಳೆ ತೊಳೆಯುವ ಪವಿತ್ರ ಗಂಗೆ

ಕಾಶಿ ಜಗದ್ಗುರುಗಳಿಂದ ಪುಟ್ಟರಾಜ ಸಾಹಿತ್ಯ ಪ್ರಚಾರ ಅಭಿಯಾನಕ್ಕೆ ಚಾಲನೆ

ಗದಗ, ಜು. 12- ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಸಾಹಿತ್ಯ ಅದು ನಿಜವಾಗಿಯೂ ಲಿಂಗ ಸಾಹಿತ್ಯ. ಮನದ ಕೊಳೆ ತೊಳೆಯುವ ಪವಿತ್ರ ಜ್ಞಾನಗಂಗೆ ಎಂದು ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದಂಗಳವರು ನುಡಿದರು.

`ಸಾವಿರದ ಸಾಹಿತ್ಯ ಸಾವಿರ ಮನೆ ಮನಗಳಿಗೆ’ ಪುಟ್ಟರಾಜ ಸಾಹಿತ್ಯ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಪೂಜ್ಯರು ತಮ್ಮ ಸಾಹಿತ್ಯದ ಮೂಲಕ ನೀಡಿದ ಸಂದೇಶವನ್ನು ಆಸ್ತಿಕ ಜನರಿಗೆ ತಲುಪಿಸುವ ಉದ್ದೇಶದಿಂದ, ಅಭಿಮಾನಿ ಭಕ್ತರ ಮಹಾಬಳಗವಾದ ಡಾ. ಪಂಡಿತ ಪುಟ್ಟರಾಜ ಸೇವಾ ಸಮಿತಿಯು ಸಾಹಿತ್ಯ ಪ್ರಚಾರದ ಅಕ್ಷರ ದಾಸೊಹ ಕಾಯಕ ಕೈಗೆತ್ತಿಕೊಂಡು,  ‘ಸಾವಿರದ ಸಾಹಿತ್ಯ ಸಾವಿರ ಮನೆ ಮನಗಳಿಗೆ’ ಪುಟ್ಟರಾಜ ಸಾಹಿತ್ಯ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದರು.

 ಈ ಅಭಿಯಾನಕ್ಕೆ ಆಯ್ಕೆ ಮಾಡಿಕೊಂಡ ‘ಗುರು ವಚನ ಪ್ರಭಾ’ ವಚನ ಸಂಕಲನ. ಬಸವಾದಿ ಶರಣರಿಂದ ಆರಂಭಗೊಂಡ  ವಚನಾ ಸಾಹಿತ್ಯ ಪರಂಪರೆ ಮುಂದುವರೆಸಿಕೊಂಡು ಬಂದ ಸಾಹಿತ್ಯ ಕೃತಿ ಇದಾಗಿದೆ ಎಂದು ಹೇಳಿದರು.

ಇಲ್ಲಿನ ವಚನಗಳು ಪೂಜ್ಯರು ತಮ್ಮ ಲಿಂಗಪೂಜಾ ಸಮಯದಲ್ಲಿ, ಗುರು ಕುಮಾರ ಪಂಚಾಕ್ಷರೇಶ್ವರ ಅಂಕಿತ ನಾಮದಿಂದ ರಚಿಸಿದ ಲಿಂಗ ನುಡಿಯಾಗಿ ಅರಳಿದ ಪುಷ್ಪಗಳಾಗಿವೆ ಎಂದು ತಿಳಿಸಿದರು.

ಈ ಅಪರೂಪದ ವಚನಗಳನ್ನು ವಿಶ್ಲೇಷಿಸಿ, ಸರಣಿ ರೂಪದಲ್ಲಿ ಅವುಗಳನ್ನು ಪ್ರಕಟಿಸುವ ಯೋಜನೆಯನ್ನು ಕೈಗೆತ್ತಿ ಕೊಂಡಿದ್ದೇವೆ. ಈ ಯೋಜನೆ ಭಾಗವಾಗಿ ಹಿರಿಯ ಮತ್ತು ಯುವ ಬರಹಗಾರರಿಂದ ವಿಶ್ಲೇಷಿಸಿದ ಲೇಖನಗಳನ್ನು ಚನ್ನವೀರ ಸ್ವಾಮಿ ಹಿರೇಮಠ (ಕಡಣಿ) ಸಂಪಾದಿಸಿದ್ದಾರೆ. ಸೇವಾ ಸಮಿತಿಯ ಗುರು ಕುಮಾರ ಪಂಚಾಕ್ಷರ ಪ್ರಕಾಶನ ಸಂಸ್ಥೆ ಈ ಕೃತಿ ಪ್ರಕಟಿಸಿದೆ ಎಂದು ಮಾಹಿತಿ ನೀಡಿದರು.

ಜಮಖಂಡಿ ಶಾಸಕ ಮಹಾದಾನಿ ಜಗದೀಶ್ ಕುಡುಗುಂಟಿ, ಕಾಶಿ ಪೀಠದ ವೇದಾಗಮ ಸಂಸ್ಕೃತ ಪಾಠಶಾಲೆಯ ಪ್ರಾಧ್ಯಾಪಕ ಪಂ. ಗುರುಸಿದ್ಧಯ್ಯ ಹಿರೇಮಠ ಇವರನ್ನು ಒಳಗೊಂಡಂತೆ  ಐದು ಜನರಿಗೆ ಉಚಿತವಾಗಿ ನೀಡು ಮೂಲಕ ಚಾಲನೆ ನೀಡಲಾಯಿತು.

 ಇದೇ ಸಂದರ್ಭದಲ್ಲಿ ಕೃತಿ ಸಂಪಾದಕರಾದ ಚೆನ್ನವೀರ ಸ್ವಾಮೀಜಿ ಹಿರೇಮಠ (ಕಡಣಿ) ಇವರಿಗೆ ಜಗದ್ಗುರುಗಳು ಗುರು ರಕ್ಷೆ ನೀಡಿ ಆಶೀರ್ವದಿಸಿದರು. ಸಮಾರಂಭದಲ್ಲಿ ಡಾ. ಕಲ್ಲಯ್ಯ ಅಜ್ಜನವರು ಉಪಸ್ಥಿತರಿದ್ದರು.

error: Content is protected !!