ದಾವಣಗೆರೆ, ಜು. 12- ನಗರದ ಎಸ್.ಪಿ.ಕಚೇರಿಯಿಂದ ಅಕ್ತರ್ ರಜ್ಹಾ ಸರ್ಕಲ್ವರೆಗೂ ವಿದ್ಯುತ್ ದೀಪ ಹಾಗೂ ಹಂಪ್ಸ್ ಅಳವಡಿಸದಿ ರುವುದನ್ನು ವಿರೋಧಿಸಿ ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ಅಕ್ತರ್ ರಜ್ಹಾ ಸರ್ಕಲ್ ಬಳಿ ಧರಣಿ ಸತ್ಯಾಗ್ರಹ ನಡೆಸಿದರು.
ಇದೇ ವೇಳೆ ಪಕ್ಷದ ಮುಖಂಡ ಆದಿಲ್ ಖಾನ್ ಮಾತನಾಡಿ, ಎಸ್ಪಿ ಕಚೇರಿಯಿಂದ ಅಕ್ತರ್ ರಜ್ಹಾ ಸರ್ಕಲ್ ವರೆಗೆ ವಿದ್ಯುತ್ ಕಂಬಗಳನ್ನು ನೆಟ್ಟಿದ್ದಾರೆಯೇ ಹೊರತು, ವಿದ್ಯುತ್ ದೀಪಗಳನ್ನು ಅಳವಡಿಸದಿರುವುದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ ಎಂದರು.
ಆಮ್ ಆದ್ಮಿ ಪಕ್ಷದ ವತಿಯಿಂದ ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರೂ ಪ್ರಯೋಜನ ವಾಗಿಲ್ಲ. ಪಾಲಿಕೆ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಮಾಡಿದಾಗ ಜೂ. 20ರೊಳಗಾಗಿ ವಿದ್ಯುತ್ ದೀಪ ಅಳವಡಿಸುವ ಭರವಸೆ ನೀಡಿದ್ದರು. ಆದರೆ ಇದುವರೆಗೂ ಅಳವಡಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಧರಣಿ ಸತ್ಯಾಗ್ರಹದಲ್ಲಿ ಆಮ್ ಆದ್ಮಿ ಪಕ್ಷದ ಕೆ. ರವೀಂದ್ರ, ಅನ್ಸರ್, ಬಾಷಾ, ರಫೀಕ್ , ಶರೀಫ್ ಅಹಮದ್ ಮತ್ತಿತರರು ಭಾಗವಹಿಸಿದ್ದರು.