ನಗರದಲ್ಲಿ ಇಂದು ಸಿಪಿಐ ಸದಸ್ಯರಿಗೆ ಪಕ್ಷದ ಸೈದ್ಧಾಂತಿಕ ಅಧ್ಯಯನ ಶಿಬಿರ

ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಮಂಡಳಿ ನೇತೃತ್ವದಲ್ಲಿ ಪಕ್ಷದ ಸದಸ್ಯರಿಗೆ ಸೈದ್ಧಾಂತಿಕ ಅಧ್ಯಯನ ಶಿಬಿರವನ್ನು ಇಂದಿನಿಂದ ಮೂರು ದಿನಗಳ ಕಾಲ ಶೇಖರಪ್ಪ ನಗರದಲ್ಲಿರುವ ಹೆಚ್. ಅಡಿವೆಪ್ಪ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ತಿಳಿಸಿದ್ದಾರೆ. 

ಪಕ್ಷದ ಜಿಲ್ಲಾ ಮಂಡಳಿ ಪದಾಧಿಕಾರಿಗಳು, ಜಿಲ್ಲೆಯ ಇತರೆ ತಾಲೂಕುಗಳ ತಾಲೂಕು ಮಂಡಳಿ ಪದಾಧಿಕಾರಿಗಳು, ಶಾಖೆಗಳ ಪದಾಧಿಕಾರಿಗಳು ಸೇರಿದಂತೆ ಸುಮಾರು 75 ಜನ ಸದಸ್ಯರು ಈ ಅಧ್ಯಯನ ಶಿಬಿರದಲ್ಲಿ ಭಾಗವಹಿಸಲಿದ್ದಾರೆ.

ಈ ಮೂರು ದಿನದ ಶಿಬಿರಕ್ಕೆ ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಲು ಪಕ್ಷದ ರಾಜ್ಯ ಮಂಡಳಿ ಕಾರ್ಯದರ್ಶಿ ಸಾತಿ ಸುಂದರೇಶ್, ಸಂಪನ್ಮೂಲ ವ್ಯಕ್ತಿಗಳಾದ ಡಾ. ಸಿದ್ದನಗೌಡ ಪಾಟೀಲ್, ಡಿ.ಎ. ವಿಜಯ ಭಾಸ್ಕರ್, ಎ. ಜ್ಯೋತಿ, ಪಿ.ವಿ. ಲೋಕೇಶ್, ಎಂ.ಸಿ. ಡೋಂಗ್ರೆ ಮತ್ತಿತರರು ಆಗಮಿಸಲಿದ್ದಾರೆ.

ಪಕ್ಷದ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು, ಜಿಲ್ಲಾ ಮಂಡಳಿ ಸಹಕಾರ್ಯದರ್ಶಿ ಗಳಾದ ಹೆಚ್.ಜಿ. ಉಮೇಶ್, ಅವರಗೆರೆ ವಾಸು, ಖಜಾಂಚಿ ಆನಂದರಾಜ್, ಶೇಖರಪ್ಪ-ಸುರೇಶ್-ಪಂಪಾಪತಿ ರೈತ ಕಾರ್ಮಿಕರ ಕಲ್ಯಾಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಟಿ.ಎಸ್. ನಾಗರಾಜ್ ಶಿಬಿರದ ನೇತೃತ್ವ ವಹಿಸಲಿದ್ದಾರೆ.

error: Content is protected !!