ಹರಪನಹಳ್ಳಿ, ಜೂ.22- ಯೋಗ ಅಧ್ಯಾತ್ಮಿಕ ಶಿಸ್ತು. ಮನಸ್ಸು ಮತ್ತು ದೇಹದ ನಡುವೆ ಸಾಮರಸ್ಯವನ್ನು ತರುವುದರ ಮೇಲೆ ಕೇಂದ್ರೀಕರಿಸುತ್ತದೆ ಎಂದು ಉಪನ್ಯಾಸಕ ಹೆಚ್.ಮಲ್ಲಿಕಾರ್ಜುನ ಹೇಳಿದರು.
ಪಟ್ಟಣದ ಗೋಕರ್ಣೇಶ್ವರ ದೇವಸ್ಥಾನದ ಹತ್ತಿರವಿರುವ ಕಲಾ ಐಸಿರಿ ನೃತ್ಯ ತರಬೇತಿ ಕೇಂದ್ರದಲ್ಲಿ 9ನೇ ಅಂತರ ರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಸಾವಿರಾರು ವರ್ಷಗಳಿಂದಲೂ ಭಾರತ ದೇಶದಲ್ಲಿ ಆಚರಿಸಲ್ಪಡುತ್ತಿರುವ ‘ಯೋಗ ವಿದ್ಯೆಯು’ ಋಷಿ ಮುನಿಗಳಾದಿ ಸಾಧಕರಿಂದ ವಿದ್ಯೆ ಮತ್ತು ಜೀವನ ಶೈಲಿಯಾಗಿ ಹರಿದು ಬಂದಿದೆ ಶ್ವಾಸಕೋಶ ಬಲಗೊಳ್ಳಲು, ಯೋಗವು ಜೀವಿತಾವಧಿಯನ್ನು ವೃದ್ಧಿಸಿ, ಜತೆಗೆ ಯೌವ್ವನ ಹಾಗೂ ಸೌಂದರ್ಯವನ್ನು ಹೆಚ್ಚಿಸುವುದು. ಯೋಗ ಮತ್ತು ಪ್ರಾಣಾಯಾಮದಿಂದ ನಮ್ಮ ಶಾರೀರಿಕವಾದ ಹಾಗೂ ಮಾನಸಿಕ ಆರೋಗ್ಯ ಹೆಚ್ಚುತ್ತದೆ. ಯೋಗದಿಂದ ದೈಹಿಕ ಸಮಸ್ಯೆ ದೂರವಾಗುತ್ತದೆ. ಸದೃಢ ಆರೋಗ್ಯಕ್ಕಾಗಿ ಯೋಗಾ ಸನ. ರಕ್ತ ಪರಿಚಲನೆ, ರಕ್ತ ಶುದ್ಧಿ, ಕೋಪ ನಿವಾರಣೆ, ಬೊಜ್ಜು ಕರಗುವಿಕೆ, ಕೀಲು ನೋವು ನಿವಾರಣೆ, ಮತ್ತು ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ. ಮೆದುಳಿನ, ವಾತ, ಪಿತ್ತ, ಕಫ ಈ ತ್ರಿದೋಷಗಳಿಂದ ಶರೀರವು ಮುಕ್ತವಾಗುತ್ತದೆ. ಥೈರಾಯ್ಡ್, ಬಿ.ಪಿ, ಕೊಲೆಸ್ಟ್ರಾಲ್, ಮಧುಮೇಹ, ಕಿಡ್ನಿ ಸಂಬಂಧಿತ ಕಾಯಿಲೆಗಳನ್ನು ನಿಯಂತ್ರಿಸಬಹುದು ಎಂದರು.
ಪ್ರಾಣಾಯಾಮದಿಂದ ನಮ್ಮ ದೇಹದಲ್ಲಿರುವ 72 ಸಾವಿರ ನಾಡಿಗಳು ಬಲಿಷ್ಠಗೊಳ್ಳುತ್ತವೆ. ಮಹಿಳೆಯರು ಯೋಗಾಸನ-ಪ್ರಾಣಾಯಾಮ ಮತ್ತು ಬದ್ಧಕೋನಾಸನ ಮಾಡುವುದರ ಮೂಲಕ ಮಹಿಳೆಯರ ಸಮಸ್ಯೆಗಳನ್ನು ದೂರ ಮಾಡಬಹುದು ಹಾಗೂ ಹೆಚ್ಚು ಹೆಚ್ಚು ನೀರನ್ನು ಕುಡಿಯುವುದರ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಅಡುಗೆಯಲ್ಲಿ ಸಕ್ಕರೆ, ಉಪ್ಪು, ಮಸಾಲೆ ಪದಾರ್ಥ ಮತ್ತು ಎಣ್ಣೆ ಪದಾರ್ಥಗಳನ್ನು ಕಡಿಮೆ ಬಳಸಬೇಕು ಎಂದರು.
ಯೋಗ ತರಬೇತಿಯಲ್ಲಿ ನಂದಿನಿ, ಸೌಮ್ಯ, ಪ್ರೀತಿ, ಮೀನಾಕ್ಷಿ, ಅಶ್ವಿನಿ, ಶಾಂತ, ಸಪ್ನ ಮಲ್ಲಿಕಾರ್ಜುನ್, ಚನ್ನವೀರಸ್ವಾಮಿ ಇತರರು ಇದ್ದರು.