ಗುಟ್ಕಾ ಪ್ಯಾಕೇಟ್ ಕಳ್ಳತನ : ಅಂತರ್‌ರಾಜ್ಯ ಕಳ್ಳರ ಬಂಧನ

ಗುಟ್ಕಾ ಪ್ಯಾಕೇಟ್ ಕಳ್ಳತನ :  ಅಂತರ್‌ರಾಜ್ಯ ಕಳ್ಳರ ಬಂಧನ

ರಾಣೇಬೆನ್ನೂರು, ಜೂ. 21- ಗೂಡ್ಸ್ ಗಾಡಿಯ ಸಮೇತ ಲಕ್ಷಾಂತರ ರೂ. ಮೌಲ್ಯದ ಗುಟ್ಕಾ ಪ್ಯಾಕೇಟ್‍ಗಳನ್ನು ಕಳ್ಳತನ ಮಾಡಿದ್ದ ಅಂತರ್‌ರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ರಾಜ್ಯಸ್ಥಾನ ಮೂಲದ ಸದ್ಯ ಮೈಸೂರು ಜಿಲ್ಲೆಯ ಭೂಗತನಗಲ್ಲಿಯಲ್ಲಿ ವಾಸವಾಗಿರುವ ಭಗವಾನ್‍ರಾಮ, ರತ್ನಾರಾಮ್, ಧಾನಾರಾಮ್, ಅರ್ಜುನ್ ಬಂಧಿತ ಆರೋಪಿಗಳು. 

ಜೂ.6 ರಂದು ರಾತ್ರಿ ಬ್ಯಾಡಗಿ ಎಪಿಎಂಸಿ ಆವರಣದಲ್ಲಿ ನಿಲ್ಲಿಸಿದ್ದ ಐಶರ್ ಗೂಡ್ಸ್ ವಾಹನವನ್ನು ಕಳ್ಳತನ ಮಾಡಿಕೊಂಡು ನಂತರ ಶಹರದ ನೆಹರು ಮಾರುಕಟ್ಟೆಯಲ್ಲಿ ವಿಶಾಲ್ ಗುಪ್ತಾ ಅವರಿಗೆ ಸೇರಿದ ಪ್ರಕಾಶ ಟಿ.ಡಿಪೋ ಎಂಬ ಅಂಗಡಿಯಲ್ಲಿ ಸುಮಾರು 87,18,754 ರೂ. ಮೌಲ್ಯದ ಆರ್‍ಎಂಡಿ ಪಾನ್‍ಮಸಾಲ್ ಬಾಕ್ಸ್ ಹಾಗೂ ಗುಟ್ಕಾ ಬಾಕ್ಸ್‌ಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದರು. 

ಬಂಧಿತ ಆರೋಪಿಗಳಿಂದ 60,49,962 ರೂ. ಮೌಲ್ಯದ ಆರ್‍ಎಂಡಿ ಗುಟ್ಕಾ ಬಾಕ್ಸ್ ಹಾಗೂ ಐಶರ್ ಕ್ಯಾಂಟರ್ ಲಾರಿ, ಕೃತ್ಯಕ್ಕೆ ಬಳಕೆ ಮಾಡಿದ ಟಾಟಾ ಮಿನಿ ಗೂಡ್ಸ್, ಕ್ರೇಟಾ ಕಾರು ಸೇರಿದಂತೆ ಒಟ್ಟು 1,00,49,962 ರೂ. ಮೌಲ್ಯದ ಗುಟ್ಕಾ ಬಾಕ್ಸ್ ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಡಿವೈಎಸ್‍ಪಿ ಶ್ರೀಧರ, ಸಿಪಿಐ ಎಂ.ಐ.ಗೌಡಪ್ಪಗೌಡ್ರ, ಸಿಇಎನ್ ಸಿಪಿಐ ಸಂತೋಷ ಪಾಟೀಲ, ಎಚ್.ಎನ್.ದೊಡ್ಡಮನಿ, ಪಿಎಸ್‍ಐ ಸಂಪತ್ ಆನಿಕಿವಿ, ಆನಂದ ದೊಡ್ಡಕುರುಬರ, ಮಹೇಶ ಹೊರಕೇರಿ, ಸಿ.ಬಿ.ಕಡ್ಲೆಪ್ಪನವರ, ಚಂದ್ರು ಸಣ್ಣಮನಿ, ಮಹಾಂತೇಶ ಪಾಟೀಲ, ಹನುಮಂತ ದನವಿಮನಿ ಸೇರಿದಂತೆ ಇತರರಿದ್ದರು.

error: Content is protected !!