ದಾವಣಗೆರೆ,ಮೇ 10- ಮತದಾರರ ಪಟ್ಟಿಯಲ್ಲಿ ಸಾಕಷ್ಟು ಹೆಸರುಗಳು ನಾಪತ್ತೆಯಾಗಿವೆ ಎಂದು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ವ್ಯವಸ್ಥಾಪಕ ಕೆ.ಎಸ್. ಬೀರಪ್ಪ ದೂರಿದ್ದಾರೆ. ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಮತದಾನ ಮಾಡಲೆಂದು ತಮ್ಮ ಪುತ್ರಿ ವರ್ಷ ಮತಗಟ್ಟೆಗೆ ಹೋದ ಸಂದರ್ಭದಲ್ಲಿ ಮತದಾರರ ಪಟ್ಟಿಯಲ್ಲಿ ಆಕೆಯ ಹೆಸರು ಇರಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಈ ಹಿಂದಿನ ಚುನಾವಣೆ ಸಮಯದಲ್ಲಿ ಸೇರ್ಪಡೆಯಾಗಿದ್ದು, ಈಗ ಯಾವುದೇ ಕಾರಣವಿಲ್ಲದೆ ಹೆಸರು ಮತದಾರ ಪಟ್ಟಿಯಿಂದ ನಾಪತ್ತೆಯಾಗಿದೆ. ಮತದಾನ ಮಾಡುವ ಉದ್ದೇಶದಿಂದಲೇ ವರ್ಷ ಮೈಸೂರಿನಿಂದ ಬಂದಿದ್ದಳು. ಆದರೆ, ಮತದಾನ ಮಾಡಲು ಅವಕಾಶ ಸಿಗದ ಕಾರಣ ಬಹಳ ನಿರಾಸೆಗೊಂಡಿದ್ದಾಳೆ ಎಂದು ಬೀರಪ್ಪ ಹೇಳಿದ್ದಾರೆ.