ಎತ್ತಣ ರಂಗೇಗೌಡ್ರೂ ! ಎತ್ತಣ ಹಾವೇರಿ ಸಮ್ಮೇಳನಾ ? ಅಧ್ಯಕ್ಷಗಿರಿಯ ಆಯ್ಕೆ ಎತ್ತಣದಿಂದೆತ್ತ ಸಂಬಂಧವಯ್ಯಾ?

ಮಾನ್ಯರೇ, 

ಹಾವೇರಿಯಲ್ಲಿ ನಡೆಯಲಿರುವ 86ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ; 

ಎತ್ತಣ ತುಮ್ಕೂರು ರಂಗೇಗೌಡ್ರೂ ! ಎತ್ತಣ ಹಾವೇರಿ ಸಮ್ಮೇಳನಾ ? ಅಧ್ಯಕ್ಷಗಿರಿಯ ಆಯ್ಕೆ ಎತ್ತಣದಿಂದೆತ್ತ ಸಂಬಂಧವಯ್ಯಾ? ಅವರನ್ನು ವಯೋ ಜೇಷ್ಠರೆಂದು ಆಯ್ಕೆ ಮಾಡಿದರೇ? 

ಅವರಿಗಿಂತ ಜೇಷ್ಠತೆ – ಶ್ರೇಷ್ಠತೆ ಹೊಂದಿರುವ ಹಿರಿಯ ಸಾಹಿತಿಗಳಾದ ಗೊ.ರು. ಚನ್ನಬಸಪ್ಪನವರನ್ನು ಆಯ್ಕೆ ಮಾಡಬಹುದಿತ್ತು. ಇನ್ನು ಸ್ಥಳೀಯರೆಂದು ಪರಿಗಣಿಸಿದಲ್ಲಿ ಹಾವೇರಿ ಜಿಲ್ಲೆಯ  ಆಣೂರಲ್ಲಿ ಜನಿಸಿ, ನಾಡು, ದೇಶ, ವಿದೇಶದವರು ಗಮನಿಸಿ, ನಮಿಸುವ ಸಾಧನೆಯನ್ನು ಮಾಡಿರುವ ರಂಗಜಂಗಮ, ಸಾಹಿತಿ, ನಾಟಕಕಾರ, ವಚನಕಾರ, ಲೇಖಕರು, ಸಂಘಟನಾಕಾರರು, ಮಾರ್ಗದರ್ಶಕರೂ ಆದ ಸಾಣೇಹಳ್ಳಿಯ ತರಳಬಾಳು ಶಾಖಾ ಮಠದ ಪೀಠಾಧಿಪತಿಗಳಾದ ಶ್ರೀ  ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳನ್ನು ಆಯ್ಕೆ ಮಾಡಬಹುದಿತ್ತು.  ಸಣ್ಣ ಪುಟ್ಟ ಜಾತ್ರೆಗಳನ್ನೇ ಮಾಡದೆ ತಡೆಯೊಡ್ಡುವ ಸರ್ಕಾರವು ಕೊರೊನಾ ರಕ್ಕಸಿಗೆ ಎಲ್ಲವನ್ನು ಬಲಿಕೊಟ್ಟು ದಿಕ್ಕು ತೋಚದಾಗಿರುವ ದುಸ್ಥಿತಿಯಲ್ಲಿ ಈ ನಮ್ಮ ಗೌರವದ ಕನ್ನಡ ಸಾಹಿತ್ಯ ಸಮ್ಮೇಳನ ಮಾಡುವುದು ಸರಿಯೇ?  

ಕೊರೊನಾ ಮರೆಯಾದ ನಂತರ ಅದೇ ಊರಲ್ಲಿ ಸಂಭ್ರಮದಿಂದ ಮಾಡಬಹುದು. ಆದರ ಜೊತೆ ಸೂಕ್ತವಾದವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ  ಮಾಡಬಹುದು. ಈಗ ಈ ಸಮ್ಮೇಳನ ಮಾಡುವ ಉದ್ದೇಶ ಕೇವಲ ಹಣ ಹಾಗೂ ಅಧಿಕಾರದ ದುರಾಸೆಯಿಂದ ಮಾತ್ರ ಎಂಬುದು ಎಲ್ಲರಿಗೂ ವೇದ್ಯವಾಗುವ ವಿಷಯ.

ಆದರೆ ಯಾರೂ ತುಟಿಬಿಚ್ಚುತ್ತಿಲ್ಲ. ಇದನ್ನು ಸದ್ಯ ತಡೆದು ಮುಂದೂಡುವಂತೆ ಇಂದೇ ಕಸಾಪದ ಎಲ್ಲಾ ಆಜೀವ ಸದಸ್ಯರೂ ಸರ್ಕಾರಕ್ಕೆ ಪತ್ರ ಬರೆಯುವ ಆಂದೋಲನ ನಡೆಸೋಣ ಬನ್ನಿ.


– ಆರ್. ಶಿವಕುಮಾರಸ್ವಾಮಿ ಕುರ್ಕಿ, ದಾವಣಗೆರೆ.

error: Content is protected !!