ಬಯಲುಸೀಮೆ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ಗುರಿ

ರಾಣೇಬೆನ್ನೂರಿನಲ್ಲಿ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಅಣಬೇರು ಜೀವನಮೂರ್ತಿ

ರಾಣಿಬೆನ್ನೂರು, ಫೆ.2-  ಮಳೆ ಪ್ರಮಾಣ ಕಡಿಮೆಯಾಗುವ 14 ಜಿಲ್ಲೆಗಳ 57 ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಬರುವ 70 ವಿಧಾನಸಭಾ ಕ್ಷೇತ್ರಗಳು ಬಯಲು ಸೀಮೆ ಎಂದು ಸರ್ಕಾರ ಗುರುತಿಸಿ ಅಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ಸದುದ್ದೇಶವನ್ನು ಹೊಂದ ಲಾಗಿದ್ದು, ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಸ್ಥಾಪಿಸಿ ಚಿತ್ರದುರ್ಗವನ್ನು ಕೇಂದ್ರ ಸ್ಥಾನವನ್ನಾಗಿಸಿಕೊಂಡು ತನ್ಮೂಲಕ ಅಭಿವೃದ್ಧಿ  ಪಡಿಸಲು ಮುಂದಾಗಿದೆ ಎಂದು ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಅಣಬೇರು ಜೀವನಮೂರ್ತಿ ಹೇಳಿದರು.

ಮೊನ್ನೆ ಇಲ್ಲಿ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಬಯಲು ಸೀಮೆ ಎಂದು ಸರ್ಕಾರ ಗುರುತಿಸಿರುವ ಬಾಗಲಕೋಟೆ, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಗದಗ, ಹಾವೇರಿ, ಕೋಲಾರ, ರಾಮನಗರ, ತುಮ ಕೂರು, ವಿಜಯಪುರ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಮಂಡಳಿಯಿಂದ ಕೈಗೊಂಡ ಕಾಮಗಾರಿಗಳನ್ನು ಪರಿಶೀ ಲಿಸಿ, ಅಭಿವೃದ್ಧಿ ಕುರಿತು ಸ್ಥಳೀಯ ಅಧಿಕಾರಿಗಳು ಮತ್ತು ಜನಪ್ರತಿನಿಧಿ ಗಳೊಂದಿಗೆ ಚರ್ಚಿಸಿ ಪರಿಹಾರೋಪಾ ಯಗಳನ್ನು ಕಂಡುಕೊಳ್ಳಲಾಗುವುದು ಎಂದರು.

 ರಸ್ತೆಯ ಮೇಲೆ ಹರಿಯುವ ಹಳ್ಳಕ್ಕೆ ಬದು ನಿರ್ಮಾಣ ಮಾಡುವುದು. ಇದರಿಂದ ಸುತ್ತಮುತ್ತಲ ಜಮೀನುಗಳಲ್ಲಿಯ ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಹೆಚ್ಚುವುದರ ಜೊತೆಗೆ ದನ – ಕರುಗಳು ಮತ್ತು ಪ್ರಾಣಿ – ಪಕ್ಷಿಗಳಿಗೆ ಬೇಸಿಗೆಯಲ್ಲಿ ಕುಡಿಯಲು ನೀರಿನ ಸೌಲಭ್ಯವಾಗಲಿದೆ. ಸರ್ಕಾರಿ ಜಮೀನುಗಳಲ್ಲಿ ಚೆಕ್ ಡ್ಯಾಂ, ಸಣ್ಣ ಕೆರೆಗಳ ಬದು ಮತ್ತು ಕೋಡಿ ನಿರ್ಮಾಣ, ಮಳೆ ನೀರು ತಡೆಗೋಡೆ, ಗೋಕಟ್ಟೆ ನಿರ್ಮಾಣ ಮಾಡಲಾಗುವುದು. 

ದೊಡ್ಡ ಪ್ರಮಾಣದಲ್ಲಿ ಸರ್ಕಾರಿ ಜಾಗದಲ್ಲಿ ಕಿರು ಕಾಲುವೆಗಳು ಮತ್ತು ಇಂಗು ಗುಂಡಿ ನಿರ್ಮಿಸಿ ಅಂತರ್ಜಲ ಮಟ್ಟ ಹೆಚ್ಚಿಸಲಾಗುವುದು. ಜೊತೆಗೆ ಎಸ್ಸಿ ಮತ್ತು ಎಸ್‍ಟಿ ಸಮುದಾಯಕ್ಕೆ ಸೇರಿದ ವ್ಯಕ್ತಿಗಳನ್ನು ಒಟ್ಟುಗೂಡಿಸಿ ಅರಣ್ಯೀಕರಣ, ತೋಟಗಾರಿಕೆ, ಸಮುದಾಯ ಕೃಷಿ, ಕೊಳವೆ ಬಾವಿಯ ಸಹಾಯದಿಂದ ಹನಿ ನೀರಾವರಿ ಒದಗಿಸಿ ಆರ್ಥಿಕ ಮಟ್ಟ ಹೆಚ್ಚಿಸುವ ಕಾಮಗಾರಿಗಳನ್ನು ಮಾಡಲಾಗುವುದು ಎಂದರು.

ಜಿ.ಪಂ. ಅಧ್ಯಕ್ಷ ಏಕನಾಥ ಭಾನುವಳ್ಳಿ, ಕಾರ್ಯದರ್ಶಿ ಎಸ್.ವೈ. ಬಸವರಾಜಪ್ಪ, ಉಪಕಾರ್ಯ ದರ್ಶಿ ಕೃಷ್ಣ ನಾಯಕ, ಜಿ.ಪಂ. ಉಪವಿಭಾಗದ ಸಹಾಯಕ ಅಭಿಯಂತರ ರಾಮಣ್ಣ ಬಜಾರಿ, ಡಾ. ಬಸವರಾಜ ಕೇಲಗಾರ, ದೀಪಕ್ ಹರಪನಹಳ್ಳಿ, ರಾಘವೇಂದ್ರ ಕುಲಕರ್ಣಿ ಇನ್ನಿತರರಿದ್ದರು.

error: Content is protected !!