ವಿಶ್ವನಾಥ ಅವರ ಬಗ್ಗೆ ಬಹಳಷ್ಟು ಗೌರವವಿದ್ದು, ಅವರು ಮುಖ್ಯಮಂತ್ರಿ ಯಡಿಯೂರಪ್ಪ ಬಗ್ಗೆ ಮಾತನಾಡಿದ್ದು ನೋವಾಗಿದೆ. ಸುಪ್ರೀಂಕೋರ್ಟ್ನ ಆದೇಶ ಹಿನ್ನಲೆಯಲ್ಲಿ ಸಚಿವ ಸ್ಥಾನ ಸಿಕ್ಕಿಲ್ಲ. ಇಷ್ಟು ದಿವಸ ತಾಳ್ಮೆಯಿಂದ ಇರುವ ಫಲವಾಗಿ ಸಚಿವ ಸ್ಥಾನ ಲಭಿಸಿದೆ. ಪಕ್ಷಕ್ಕೆ ಮುಜುಗಾರ ತರುವ ಹೇಳಿಕೆ ನೀಡಲ್ಲ ಎಂದು ಸಚಿವ ಆರ್.ಶಂಕರ್ ಹೇಳಿದರು.
ರಾಣೇಬೆನ್ನೂರು, ಜ.14- ಬಿಜೆಪಿ ಸರ್ಕಾರದಲ್ಲಿ ಸಚಿವರಾದ ನಂತರ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಸಚಿವ ಆರ್.ಶಂಕರ್ಗೆ ಅವರ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಭವ್ಯ ಸ್ವಾಗತ ಕೋರಿದರು.
ಸಚಿವ ಆರ್.ಶಂಕರ್ ಮೊದಲಿಗೆ ಕೆಇಬಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು. ನಂತರ ಗಂಗಾಜಲ ಚೌಡೇಶ್ವರಿ ದೇವಸ್ಥಾನಕ್ಕೆ ತೆರಳಿ, ದೇವಿಯ ದರ್ಶನ ಪಡೆದು ಪುನಃ ಕೆಇಬಿ ವಿನಾಯಕ ದೇವಸ್ಥಾನಕ್ಕೆ ಬಂದರು. ಅಲ್ಲಿಂದ ಸಚಿವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಬಸ್ನಿಲ್ದಾಣ ವೃತ್ತ, ಸ್ಟೇಷನ್ ರಸ್ತೆ, ಮೆಡ್ಲೇರಿ ಕ್ರಾಸ್, ಎಡಿಬಿ ಕ್ರಾಸ್, ಪೋಸ್ಟ್ ಸರ್ಕಲ್ ಮಾ ರ್ಗವಾಗಿ ಬಿಜೆಪಿ ಕಚೇರಿಗೆ ಕರೆತರಲಾಯಿತು. ಮಾರ್ಗ ಮಧ್ಯದಲ್ಲಿ ಅಭಿಮಾನಿಗಳು ಸಚಿವರಿಗೆ ಸೇಬು ಹಾರ ಹಾಕಿದ್ದು ವಿಶೇಷವಾಗಿತ್ತು.
ಪಕ್ಷದ ಕಚೇರಿಯಲ್ಲಿ ಮಾತನಾಡಿದ ಸಚಿವ ಆರ್.ಶಂಕರ್, ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರದ ಆಡಳಿತವಿದ್ದರೆ ಅಭಿವೃದ್ಧಿಗೆ ಪೂರಕ ವಾಗಲಿದೆ ಎಂಬ ಚಿಂತನೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆನು. ಇತಿಹಾಸದಲ್ಲಿಯೇ ಎರಡರಲ್ಲಿ ಒಂದೇ ಸರ್ಕಾರ ಆಡಳಿತ ನಡೆಸು ವಂತೆ ಮಾಡಿದ್ದೇವೆ. ಇದಾದ ನಂತರ ಅನರ್ಹ ತೆಗೆ ಒಳಗಾಗಿದ್ದು, ಒಂದೂವರೆ ವರ್ಷಗಳ ಅವಧಿಯಲ್ಲಿ ಮಾನ-ಅಪಮಾನ ಎರಡನ್ನೂ ಅನುಭವಿಸಿರುವೆ. ಮುಂದಿನ ದಿನಗಳಲ್ಲಿ ನನ್ನ ಬಲಗೈ ಸ್ಥಳೀಯ ಶಾಸಕ ಅರುಣಕುಮಾರ ಪೂಜಾರ್ ಜೊತೆಗೂಡಿ, ಬೆಂಗಳೂರು ಮಾದರಿ ಯಲ್ಲಿ ತಾಲ್ಲೂಕನ್ನು ಅಭಿವೃದ್ಧಿಗೊಳಿಸುವೆ. ಕ್ಷೇತ್ರದ ಮತದಾರರು 2018ರಲ್ಲಿ ನನ್ನನ್ನು ಮೊದಲ ಬಾರಿಗೆ ಶಾಸಕನನ್ನಾಗಿ ಆಯ್ಕೆ ಮಾಡಿದ್ದು, ಅಭಿವೃದ್ಧಿ ಮೂಲಕ ನಾನು ಅವರ ಋಣ ತೀರಿಸಬೇಕಾಗಿದೆ. ನಾನು ಶಾಸಕನಾಗಿದ್ದ ಸಮಯದಲ್ಲಿ 380 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳನ್ನು ತಂದಿದ್ದೆ. ಕೊರೊನಾ ಹಿನ್ನೆಲೆ ಯಲ್ಲಿ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗಿದೆ. ಈಗ ಮತ್ತೆ ತಾಲ್ಲೂಕಿಗೆ ಸಾಕಷ್ಟು ಅನುದಾನವನ್ನು ತಂದು ಅಭಿವೃದ್ದಿಗೊಳಿಸುತ್ತೇವೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ಧರಾಜ ಕಲಕೋಟಿ ಮಾತನಾಡಿದರು.