ಸೇವಾ ಮನೋಭಾವನೆಯಿಂದ ಕೂಡಿರುವ ಶಿಕ್ಷಕ ವೃತ್ತಿ

ಸೇವಾ ಮನೋಭಾವನೆಯಿಂದ ಕೂಡಿರುವ ಶಿಕ್ಷಕ ವೃತ್ತಿ

ಹೊನ್ನಾಳಿ, ಜು.9- ರಾಜಕೀಯ ವ್ಯಕ್ತಿಗಳ 5 ವರ್ಷಗಳ ಸೇವೆಗೆ ಜನ ಬೇಸರಗೊಳ್ಳುತ್ತಾರೆ. ಆದರೆ, ಶಿಕ್ಷಕರು 30 ವರ್ಷಕ್ಕೂ ಹೆಚ್ಚು ಸೇವೆ ಸಲ್ಲಿಸಿದ ನಂತರವೂ, ಅವರನ್ನು ಪ್ರೀತಿ, ಗೌರವಗಳಿಂದ ಕಾಣುತ್ತಾರೆ. ಇದುವೇ ಶಿಕ್ಷಣದ ಶಕ್ತಿ ಎಂದು  ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.

ತಾಲ್ಲೂಕಿನ ಗೊಲ್ಲರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 25 ವರ್ಷ ಗಳ ಸೇವೆ ಸಲ್ಲಿಸಿ ನಿವೃತ್ತಿಯಾದ ಶಿಕ್ಷಕರಾದ  ಕೆ.ಆರ್. ಗೋಣಪ್ಪ ಮತ್ತು ಕೆ.ಎಸ್. ಚಂದ್ರಪ್ಪ ಅವರನ್ನು ಹಳೆ ವಿದ್ಯಾರ್ಥಿ ಬಳಗ, ಎಸ್.ಡಿ.ಎಂ.ಸಿ., ಹಾಗೂ ಗೊಲ್ಲರಹಳ್ಳಿಯ ಶಿಕ್ಷಕರ ಬಳಗದ ವತಿಯಿಂದ ಗ್ರಾಮದ ಶ್ರೀ ಆಂಜ ನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಇಂದು ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ಶಿಕ್ಷಕರುಗಳನ್ನು ಸನ್ನಾನಿಸಿ, ಗೌರವಿಸಿದ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. 

ಇದೇ ವೇಳೆ ತಮ್ಮ ಬಾಲ್ಯದ ಶಿಕ್ಷಣ ವ್ಯವಸ್ಥೆಯನ್ನು ಸ್ಮರಿಸಿಕೊಂಡ ಶಾಸಕ ಶಾಂತನಗೌಡ ಅವರು, ತಮ್ಮ ಗ್ರಾಮದಲ್ಲಿ ಶಿಕ್ಷಕ ವೃತ್ತಿಯನ್ನು ನಿರ್ವಹಿಸಿ ಸೇವೆಯಿಂದ ನಿವೃತ್ತಿಯಾಗುತ್ತಿರುವ ಶಿಕ್ಷಕರನ್ನು ಈ ರೀತಿ ಇಡೀ ಗ್ರಾಮವೇ ನಿಂತು ಅದ್ಧೂರಿಯಾದ ಬೀಳ್ಕೂಡುಗೆ ಸಮಾರಂಭ ಮಾಡುತ್ತಿರುವುದು ಎಲ್ಲಿಯೂ ನೋಡಿಲ್ಲ ಎಂದು ಶ್ಲಾಘಿಸಿದರು.

ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಮಾತನಾಡಿ, ತಾನೂ ಕೂಡ ಒಬ್ಬ ಶಿಕ್ಷಕನ ಮಗ ಎಂದು ಹೇಳಿಕೊಳ್ಳುವುದಕ್ಕೆ ಅತೀವ ಹೆಮ್ಮೆ ಎನಿಸುತ್ತಿದೆ. ತಾಯಿಯೇ ಮೊದಲ ಗುರು ನಂತರದಲ್ಲಿ ಭವಿಷ್ಯದ ಜೀವನ ರೂಪಿಸುವ ಶಿಲ್ಪಿ ಎಂದರೆ  ಅದು ಗುರುಗಳು, ಜೀವನದಲ್ಲಿ ಮನುಷ್ಯ ಸೋಲು ಗೆಲುವುಗಳನ್ನು ಸಮನಾಗಿ ಸ್ವೀಕರಿಸುವ ಮನೋಬಲವನ್ನು ಎಲ್ಲರೂ ಬೆಳೆಸಿಕೊಳ್ಳ ಬೇಕು. ಇಂತಹ ಭಾವನೆ ನನ್ನಲ್ಲಿ ಬೆಳೆದು ಬಂದಿದೆ ಎಂದರೆ ಅದಕ್ಕೆ ನನಗೆ ಕಲಿಸಿದ ಗುರುಗಳೇ ಕಾರಣ ಎಂದು ಹೇಳಿದರು.

ಕಾಂಗ್ರೆಸ್‍ನ ಹಿರಿಯ ಮುಖಂಡ ವರದರಾಜಪ್ಪ ಗೌಡ,  ಗ್ರಾ.ಪಂ.ಮಾಜಿ ಉಪಾಧ್ಯಕ್ಷೆ  ಜಿ.ಪಿ.ಇಂದಿರಮ್ಮ, ಜಿ.ಪಂ. ಮಾಜಿ  ಉಪಾಧ್ಯಕ್ಷ ಸುರೇಂದ್ರನಾಯ್ಕ, ಗ್ರಾ.ಪಂ.ಸದಸ್ಯ ನಟರಾಜ್, ದೈಹಿಕ  ಶಿಕ್ಷಣಾಧಿಕಾರಿ ಈಶ್ವರಪ್ಪ  ಮತ್ತಿತರರು ಮಾತನಾಡಿದರು.  ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷ ಕುಮಾರ್  ಎ.ಕೆ. ವಹಿಸಿದ್ದರು.

ಬಿಆರ್‍ಪಿಗಳಾದ ಜಿ.ಕೆ.ಅರು ಣ್‍ಕುಮಾರ್, ಸುನೀಲ್ ಎಸ್. ಸಿಆರ್‍ಪಿ. ಗಿರೀಶ್, ಛೇರ್ಮನ್ ಹಾಲಪ್ಪ,  ಗ್ರಾ.ಪಂ. ಸದಸ್ಯರಾದ ಸುಲೋಚನಮ್ಮ ಹಳದಪ್ಪ, ಮುಖಂಡ ರಮೇಶ್‍ದಾಸಳ್ಳಿ ಇದ್ದರು.

ಗಣೇಶ್ ಎಚ್. ಸ್ವಾಗತಿಸಿದರು. ಶಿಕ್ಷಕಿ ಮಂಜುಳ ವಂದಿಸಿದರು. ಶಿಕ್ಷಕ ಸುನೀಲ್ ನಿರೂಪಿಸಿದರು.  ಗೊಲ್ಲರಹಳ್ಳಿ ಶಿಕ್ಷಕ ವೃಂದ, ಶ್ರೀವಿನಾಯಕ,  ಶನಿಶ್ವೇರ ಸೇವಾ ಸಮಿತಿ,  ಶ್ರೀ ದುರ್ಗಾಂಜನೇಯ ಸೇವಾ ಸಮಿತಿ ಪದಾಧಿಕಾರಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.

error: Content is protected !!