ರೈತ ವಿರೋಧಿ ನೀತಿಗಳ ಕೈಬಿಡಲು ಪ್ರತಿಭಟನೆ

ದಾವಣಗೆರೆ, ಆ.26- ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳಾದ ಭೂಮಿ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ಖಾಸಗೀಕರಣ ಕೈಬಿಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಇಂದು ಗ್ರಾಮೀಣ ಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.

ಆನಗೋಡು ಹೋಬಳಿಯ ಆನಗೋಡು ನಾಡ ಕಚೇರಿ ಹತ್ತಿರ ಹಾಗೂ ಕೊಡಗನೂರು ಕ್ರಾಸ್ ಹತ್ತಿರ ಜಮಾಯಿಸಿದ್ದ ರೈತರು, ಪ್ರತಿಭ ಟನಾ ಧರಣಿ ನಡೆಸಿ ಭೂಮಿ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ಖಾಸಗೀಕರಣ ತಿದ್ದುಪಡಿ ಕಾಯ್ದೆಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಈ ಹಿಂದೆ ಉಳುವವನೇ ಭೂಮಿಯ ಒಡೆಯ, ಭೂಮಿಯಿಂದಲೇ ಬದುಕು ಕಟ್ಟಿಕೊಂಡ ರೈತರೇ ಭೂಮಿಯನ್ನು ಖರೀದಿ ಮಾಡಬಹುದೆಂದು ಭೂಮಿ ಕಾಯ್ದೆ ಇದ್ದು, ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉಳ್ಳವನೇ ಒಡೆಯ ಎಂಬಂತೆ ಶ್ರೀಮಂತರ ಪರವಾಗಿ ಕಾಯ್ದೆ ರೂಪಿಸಿವೆ. ಹಾಗಾದರೆ ರೈತರು ಸಾಕು ಪ್ರಾಣಿಗಳಾದ ಕುರಿ, ಕೋಳಿ, ಮೇಕೆ, ಹಂದಿ, ಎತ್ತು-ಆಕಳು, ಎಮ್ಮೆ ಸೇರಿದಂತೆ ಇತರೆ ಸಾಕು ಪ್ರಾಣಿಗಳನ್ನು ಎಲ್ಲಿಗೆ ಕಳುಹಿಸ ಬೇಕು ಹಾಗೂ ಎಲ್ಲಿ ಸಾಕಬೇಕು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಎಪಿ ಎಂಸಿಯಲ್ಲಿ ನೂರಾರು ವರ್ಷಗಳಿಂದ ಆಹಾರ ಧಾನ್ಯಗಳ ವ್ಯಾಪಾರ-ವಹಿವಾಟು ಮಾಡುತ್ತಿದ್ದು, ಗುರುತು ಬಲ್ಲವರು ಹಾಗೂ ಮುಖ ಪರಿಚಯ ವಿರುವಂತಹ ವ್ಯಕ್ತಿಗಳು ವ್ಯಾಪಾರ ಮಾಡುತ್ತಿ ದ್ದರು. ಈ ಕಾಯ್ದೆಯಿಂದ ಬೇರೆ ದೇಶ ಮತ್ತು ಬೇರೆ ರಾಜ್ಯಗಳ ಶ್ರೀಮಂತರು ಆಹಾರ ಧಾನ್ಯ ವಹಿವಾಟು ಮಾಡಿದ್ದಲ್ಲಿ ಹಾಗೂ ರೈತರಿಗೆ ಅನ್ಯಾ ಯವಾದಲ್ಲಿ ರೈತರು ಯಾರನ್ನು ಕೇಳಬೇಕು. ಸರ್ಕಾರವೋ ಅಥವಾ ವ್ಯಾಪಾರಿಯೋ ಎಂಬುದು ರೈತರ ಗೋಳಾಗಿದೆ. ಕೇಂದ್ರ ಸರ್ಕಾ ರವು ವಿದ್ಯುತ್ ಕಾಯ್ದೆಯನ್ನು ತಿದ್ದುಪಡಿ ಮಾಡಿ, ಖಾಸಗಿ ಕಂಪನಿಯವರಿಗೆ ವಹಿಸಿದೆ. ಈ ಹಿಂದೆ ವಿದ್ಯುತ್ ಸರ್ಕಾರದ ಸಹಭಾಗಿತ್ವದಲ್ಲಿದ್ದು, ರೈತರ ಪಂಪ್‍ಸೆಟ್‍ಗೆ ಉಚಿತವಾಗಿ ವಿದ್ಯುತ್ ನೀಡುತ್ತಿತ್ತು. ರೈತರು ದೇಶದ 138 ಕೋಟಿ ಜನರಿಗೆ ಆಹಾರ ಧಾನ್ಯಗಳನ್ನು ಬೆಳೆಯುತ್ತಿದ್ದು, ಶ್ರೀಮಂತ ಕಂಪನಿಗಳು ರೈತರಿಗೆ ಯಾವುದೇ ಕಾರಣಕ್ಕೂ ಉಚಿತ ವಿದ್ಯುತ್ ನೀಡುವುದಿಲ್ಲ. ದೇಶದಲ್ಲಿ ಆಹಾರ ಧಾನ್ಯದ ಕೊರತೆಯಾಗುತ್ತದೆ ಎಂದು ಆಕ್ಷೇಪಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್, ಜಿಲ್ಲಾ ಧ್ಯಕ್ಷ ಕಬ್ಬಳ ಪ್ರಸಾದ್, ಚಿಕ್ಕನಹಳ್ಳಿ ರೇವಣ ಸಿದ್ದಪ್ಪ, ಆನಗೋಡು ಭೀಮಣ್ಣ, ಚಿನ್ನಸಮುದ್ರ ಭೀಮನಾಯ್ಕ್, ಮಾಯಕೊಂಡದ ನಿಂಗಣ್ಣ, ಚಿನ್ನಸಮುದ್ರ ರಮೇಶನಾಯ್ಕ್ ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!