ರಾಮನ ಭಕ್ತರಾಗಿದ್ದರೆ ಅಯೋಧ್ಯೆಯಲ್ಲಿ ವಾಲ್ಮೀಕಿ ಪ್ರತಿಮೆ ಸ್ಥಾಪಿಸಲಿ

ಜಿಲ್ಲಾ ಕಾಂಗ್ರೆಸ್ ನಿಂದ ನಡೆದ ವಾಲ್ಮೀಕಿ ಜಯಂತ್ಯೋತ್ಸವದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಕೆ.ಹೆಚ್. ಓಬಳಪ್ಪ ಒತ್ತಾಯ

ದಾವಣಗೆರೆ, ಅ.31 –  ಜಿಲ್ಲಾ ಕಾಂಗ್ರೆಸ್‍ನಿಂದ   ವಾಲ್ಮೀಕಿ ಜಯಂತಿ, ಸರ್ದಾರ್ ವಲ್ಲಭಬಾಯ್ ಪಟೇಲ್ ಜನ್ಮ ದಿನಾಚರಣೆ, ಮಾಜಿ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಪುಣ್ಯತಿಥಿಯನ್ನು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಅಧ್ಯಕ್ಷ ಹೆಚ್.ಬಿ.ಮಂಜಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆಸಲಾಯಿತು.

ನಂತರ ಮಾತನಾಡಿದ ಮಂಜಪ್ಪ, ವಾಲ್ಮೀಕಿ ಮಹರ್ಷಿಗಳು ತಮ್ಮ ಮಹಾಕಾವ್ಯದ ಮೂಲಕ ರಾಮಾಯಣವನ್ನು ವಿಶ್ವಕ್ಕೆ ನೀಡಿದ್ದ ಲ್ಲದೇ ಪ್ರತಿಯೊಬ್ಬರು ರಾಮನಂತಹ ಆದರ್ಶ ಗಳನ್ನು ಪಾಲಿಸಬೇಕೆಂದು ತಿಳಿಸಿಕೊಟ್ಟಿದ್ದಾರೆ. ಆದರೆ ಬಿಜೆಪಿಯವರು ರಾಮ ನಮ್ಮವನು ಎನ್ನುತ್ತಾರೆಯೇ ವಿನಃ ರಾಮನನ್ನು ಪರಿಚಯಿ ಸಿದ ವಾಲ್ಮೀಕಿಯನ್ನು ಮರೆತಿದ್ದಾರೆ ಎಂದರು.

ಮಾಜಿ ಗೃಹ ಮಂತ್ರಿ ಸರ್ದಾರ್ ವಲ್ಲಭ ಬಾಯ್ ಪಟೇಲ್ ಅವರು ದೇಶವನ್ನು ಒಗ್ಗೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಲ್ಲದೇ ದೇಶ ವಿರೋಧಿ, ಒಂದು ಜಾತಿ-ಧರ್ಮದ ಸಂಘಟನೆಗಳನ್ನು ಬೆಂಬಲಿಸಲಿಲ್ಲ ಎಂದು ತಿಳಿಸಿದರು.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಯವರು ದೇಶದ ಬಡತನ ನಿರ್ಮೂಲನೆಗಾಗಿ 20 ಅಂಶಗಳ ಕಾರ್ಯಕ್ರಮವನ್ನು ತರುವ ಮೂಲಕ ಈ ದೇಶದ ಎಲ್ಲಾ ವರ್ಗಗಳಿಗೆ ಅನುಕೂಲ ಮಾಡಿಕೊಟ್ಟು ಅವರ ಆಡಳಿತವನ್ನು ವಿಪಕ್ಷಗಳು ಹೊಗಳುವಂತೆ ಮಾಡಿದ್ದರು ಎಂದು ಸ್ಮರಿಸಿದರು.

ಜಿಲ್ಲಾ ಕಾಂಗ್ರೆಸ್ ಎಸ್.ಟಿ. ಘಟಕದ ಅಧ್ಯಕ್ಷರೂ, ಜಿಲ್ಲಾ ಪಂಚಾಯತ್ ಸದಸ್ಯರೂ ಆದ ಕೆ.ಹೆಚ್.ಓಬಳಪ್ಪ ಮಾತನಾಡಿ, ಜಗತ್ತಿಗೆ ರಾಮನನ್ನು ರಾಮಾಯಣದ ಮೂಲಕ ಪರಿಚಯಿಸಿದ್ದು ಮಹರ್ಷಿ ವಾಲ್ಮೀಕಿಯವರು. ರಾಮನು ನಮ್ಮವನೆನ್ನುವ ಬಿಜೆಪಿಯವರು ನಿಜವಾಗಿಯೂ ರಾಮನ ಭಕ್ತರಾಗಿದ್ದರೆ ಅಯೋಧ್ಯೆಯಲ್ಲಿ ವಾಲ್ಮೀಕಿ ಪ್ರತಿಮೆಯನ್ನು ಸ್ಥಾಪಿಸಲಿ ಎಂದು ಆಗ್ರಹಿಸಿದರು.

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಘಟಕದ ಅಧ್ಯಕ್ಷ ಬಿ.ಕೆ.ಪರಶುರಾಮ್ ಮಾಗಾನಹಳ್ಳಿ ಮಾತನಾಡಿ, ಬೇಡನಾಗಿ ಹುಟ್ಟಿದ ವಾಲ್ಮೀಕಿ ತನ್ನ ಸಾಧನೆ ಮೂಲಕ ಮಹರ್ಷಿ ಆದವರು. ಅವರಿಂದಾಗಿ ಜಗತ್ತಿಗೇ ರಾಮ ಗೊತ್ತಾಯಿತು. ಇದನ್ನು ಸಂಪೂರ್ಣವಾಗಿ ಅರಿತಿದ್ದ ಮಹಾತ್ಮಗಾಂಧಿಯವರು ರಾಮನ ಭಕ್ತರಾಗಿ ವಾಲ್ಮೀಕಿ ಮಹರ್ಷಿಗಳು ರಚಿಸಿದ ಮಹಾಕಾವ್ಯವನ್ನು ಓದಲು ಹೇಳಿ, ಅದರಲ್ಲಿನ ಆದರ್ಶವನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದ್ದರು ಎಂದರು.

ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಅನಿತಾಬಾಯಿ ಮಾಲ ತೇಶ್   ಮಾತನಾಡಿ, ರಾಮನನ್ನು ವಾಲ್ಮೀಕಿ ಮಹರ್ಷಿಗಳು ಈ ಜಗತ್ತಿಗೆ ಪರಿಚಯಿಸಿ ದವರು. ಆದರೆ ವಾಲ್ಮೀಕಿ ಮಹರ್ಷಿಗಳನ್ನೇ ಮರೆತ ಬಿಜೆಪಿಯವರು ರಾಮನ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. 

ರಾಮ ಜನ್ಮ ಭೂಮಿ ಗಲಾಟೆ ವೇಳೆ ನಮ್ಮ ಸಹೋದರನೂ ಸಹ ಪ್ರಾಣತ್ಯಾಗ ಮಾಡಿದ್ದಾನೆ. ಆದರೆ, ನಾವು ಎಂದೂ ಸಹ ದೇವರ ವಿಷಯದಲ್ಲಿ ರಾಜಕೀಯ ಮಾಡಲಿಲ್ಲ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಎಪಿಎಂಸಿ ಮಾಜಿ ಅಧ್ಯಕ್ಷ ಮುದೇಗೌಡ್ರು ಗಿರೀಶ್, ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಸದಸ್ಯರುಗಳಾದ ದೇವರಮನಿ ಶಿವಕುಮಾರ್, ಜಿ.ಎಸ್.ಮಂಜುನಾಥ್ ಗಡಿಗುಡಾಳ್, ಪಾಮೇನಹಳ್ಳಿ ನಾಗರಾಜ್, ಶ್ರೀಮತಿ ಆಶಾ ಉಮೇಶ್, ಶ್ರೀಮತಿ ಸುಧಾ ಇಟ್ಟಿಗುಡಿ, ಶ್ರೀಮತಿ ಸವಿತಾ ಗಣೇಶ್ ಹುಲ್ಮನಿ, ಶ್ರೀಮತಿ ಶ್ವೇತಾ ಶ್ರೀನಿವಾಸ್, ಕೆಪಿಸಿಸಿ ಸದಸ್ಯ ಅಣಜಿ ಅಂಜಿನಪ್ಪ, ಕಿಸಾನ್ ಜಿಲ್ಲಾಧ್ಯಕ್ಷ ಶಿವಗಂಗಾ ಬಸವರಾಜ್, ಸಾಮಾಜಿಕ ಜಾಲತಾಣದ ಗೋವಿಂದ್ ಹಾಲೇಕಲ್ಲು, ಮಹಿಳಾ ಕಾಂಗ್ರೆಸ್‍ನ ಶುಭಮಂಗಳ, ರಾಜೇಶ್ವರಿ, ಉಮಾಕುಮಾರ್, ಕವಿತಾ, ಆವರಗೆರೆಯ ಶ್ರೀಮತಿ ಲಕ್ಷ್ಮೀಬಾಯಿ ಅಣ್ಣಪ್ಪ, ಸರ್ವಮಂಗಳಮ್ಮ, ರಾಧಾಬಾಯಿ, ಗೀತಾ ಚಂದ್ರಶೇಖರ್, ಭಾರತಿ, ಅನ್ನಪೂರ್ಣಮ್ಮ, ಎಸ್.ಎಂ.ರುದ್ರೇಶ್, ಡೋಲಿ ಚಂದ್ರು, ರಂಗನಾಥ್, ಸೈಯದ್ ಖಾಲಿದ್, ಮುಜಾಹಿದ್, ಅಲಿ ರಹಮತ್, ಎಸ್.ಎಸ್.ಗಿರೀಶ್, ಕೆ.ಪಿ.ರವಿ ಧಣಿ, ನಾಗನೂರು ಶಶಿಕುಮಾರ್, ಲಿಯಾಖತ್, ರಾಕೇಶ್, ಬಾತಿ ಶಿವಕುಮಾರ್, ಪ್ರವೀಣ್ ಕುಮಾರ್, ಮೈನುದ್ದೀನ್ ಮತ್ತಿತರರಿದ್ದರು.

error: Content is protected !!