ದಾವಣಗೆರೆ, ಜು.11- ಕೋವಿಡ್-19 ಸಮಸ್ಯೆಯಿಂದ ಶಾಲಾ ಮಕ್ಕಳ ಆಟೋ ಮತ್ತು ವ್ಯಾನ್ ಚಾಲಕರಿಗೆ ಸರ್ಕಾರ ಘೋಷಣೆ ಮಾಡಿರುವ ಪರಿಹಾರ ಧನ ಸಹಾಯವನ್ನು ನೀಡುವಂತೆ ಕೋರಿ ಜಿಲ್ಲಾ ಶಾಲಾ ಮಕ್ಕಳ ಆಟೋ ಮತ್ತು ವ್ಯಾನ್ ಚಾಲಕರ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕೋವಿಡ್ನಿಂದಾಗಿ ಶಾಲೆಗಳಿಲ್ಲದೆ, 4 ತಿಂಗಳಿಂದ ಚಾಲಕರು ಜೀವನ ನಿರ್ವಹಣೆಗೆ ಒದ್ದಾಡುತ್ತಿದ್ದು, ಇದೀಗ ರಾಜ್ಯ ಸರ್ಕಾರ ಘೋಷಿಸಿರುವ 5,000 ರೂಪಾಯಿ ಧನ ಸಹಾಯವೂ ಶೇ. 15ರಷ್ಟು ಜನರಿಗೆ ಮಾತ್ರ ತಲುಪಿರುತ್ತದೆ. ಆಟೋ ಚಾಲಕರಿಗೆ ಆದಾಯವಿಲ್ಲದ ಕಾರಣ ಜೀವನ ನಡೆಸುವುದು ಕಷ್ಟವಾಗಿದ್ದು, ಇಎಂಐ ಕಟ್ಟಲು ಆಗಿರುವುದಿಲ್ಲ. ಕೇಂದ್ರ ಸರ್ಕಾರ ಮತ್ತು ಆರ್ಬಿಐ ಸೆಪ್ಟೆಂಬರ್ ತಿಂಗಳವರೆಗೆ ವಿನಾಯ್ತಿ ಘೋಷಣೆ ಮಾಡಿದ್ದರೂ ಖಾಸಗಿ ಬ್ಯಾಂಕ್ಗಳು ಮತ್ತು ಫೈನಾನ್ಸ್ಗಳ ಕಂತು ಕಟ್ಟಲು ಒತ್ತಾಯ ಮಾಡಿರುತ್ತದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ನ್ಯಾಯ ಒದಗಿಸಿಕೊಡುವಂತೆ ಮನವಿ ಮಾಡಿದ್ದಾರೆ.
ಜಿಲ್ಲಾಧ್ಯಕ್ಷ ವಿ. ಮಂಜುನಾಥ್, ಉಪಾಧ್ಯಕ್ಷ ನೀಲ ಕಂಠ, ಪ್ರಧಾನ ಕಾರ್ಯದರ್ಶಿ ಎ.ಎಂ. ರುದ್ರಸ್ವಾಮಿ, ಎನ್. ಕೃಷ್ಣಪ್ಪ, ಬಿ.ಪಿ. ನಾಗರಾಜ್, ಅಣ್ಣಪ್ಪ ಸ್ವಾಮಿ, ಸತೀಶ್ (ಈಶ್ವರಮ್ಮ), ಮಂಜುನಾಥ್ ಸ್ವಾಮಿ, ನಿರಂ ಜನ್ ಸ್ವಾಮಿ, ಧರ್ಮಣ್ಣ, ಬುದ್ಧಿಸ್ವಾಮಿ ಇನ್ನಿತರರಿದ್ದರು.