ಸಮಾಜದ ಅಂಕು-ಡೊಂಕುಗಳನ್ನು ತಿದ್ದುವಲ್ಲಿ ಪತ್ರಕರ್ತರ ಸೇವೆ ಅಮೋಘ

ಹರಪನಹಳ್ಳಿ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಉಚ್ಚೆಂಗೆಪ್ಪ

ಹರಪನಹಳ್ಳಿ, ಜು.2- ಸಮಾಜದ ಹಾಗೂ ಸರ್ಕಾರದ ಅಂಕು – ಡೊಂಕುಗಳನ್ನು ತಿದ್ದುವಲ್ಲಿ ಪತ್ರಕರ್ತರ ಕಾರ್ಯ ಅಮೋಘವಾಗಿದೆ ಎಂದು ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೋರಿ ಶೆಟ್ಟಿ ಉಚ್ಚೆಂಗೆಪ್ಪ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ವತಿಯಿಂದ ಪತ್ರಿಕಾ ದಿನಾಚರಣೆ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಮಾಜದ ಒಳಿತಿಗಾಗಿಯೇ ಶ್ರಮಿಸುತ್ತಿರುವ ಫಣಿಯಾಪುರ ಲಿಂಗರಾಜ್, ಪತ್ರಿಕಾ ಕ್ಷೇತ್ರದಲ್ಲಿ   ತಮ್ಮದೇ ಆದ ಛಾಪು  ಮೂಡಿಸುತ್ತಿರುವ   ಚಂದ್ರಪ್ಪ ತಳವಾರ, ಪೊಲೀಸ್‌ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರವಿ ದಾದಾಪುರ, ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಯುವ ಕೃಷಿಕ ಟಿ.ಯೋಗೀಶ್‌ ಅವರಿಗೆ ಸನ್ಮಾನಿಸಿ, ಗೌರವಿಸವುದು ನಮ್ಮ ಕೆಲಸ.   ಇವರುಗಳಿಗೆ ಪತ್ರಿಕಾ ದಿನಾಚರಣೆಯ ಪ್ರಯುಕ್ತ ಸನ್ಮಾನಿಸಿರುವುದು ನನಗೆ ಅತೀವ ಸಂತೋಷವನ್ನುಂಟು ಮಾಡಿದೆ.  ಮುಂದಿನ ದಿನಗಳಲ್ಲಿ ಇವರ ಸಾಧನೆ ಇನ್ನೂ ಉತ್ತುಂಗಕ್ಕೇರಲಿ ಎನ್ನುವ ಸದಾಶಯ ನನ್ನದು ಎಂದರು.

ಈ ವೇಳೆ ನ್ಯಾಯವಾದಿ ಕೆ.ಎಂ.ಪ್ರಾಣೇಶ್, ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಉಪಾಧ್ಯಕ್ಷ ದಾದಾಪುರದ ಶಿವಾನಂದ್, ಯುವ ಮುಖಂಡ ಬಸಾಪುರದ ಮಂಜುನಾಥ ಮಾತನಾಡಿದರು.

ಮುಖಂಡರಾದ ಆಲಮರಸಿಕೇರಿ ಟಿ.ಬಿ.ರಾಜ, ಅಲಮರಸೀಕೆರೆ ಗೋಣೆಪ್ಪ, ಕಡತಿ ರಮೇಶ್, ಆಲೂರು ದುರ್ಗಪ್ಪ, ಕಣಿವಿಹಳ್ಳಿ ಹೊನ್ನಪ್ಪ, ನಂದಿಬೇವೂರು ರಾಜಪ್ಪ, ಮದ್ದಾನಪ್ಪ ಹುಲಿಯಪ್ಪನವರ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

error: Content is protected !!