ಜಗಳೂರಿನಲ್ಲಿ ಪತ್ರಕರ್ತರ ಪ್ರತಿಭಟನೆ

ಜಗಳೂರು, ಅ.1- ಕನ್ನಡ ಟಿವಿ ಸುದ್ದಿವಾಹಿನಿ ಪವರ್ ಟಿವಿಯ ನೇರ ಪ್ರಸಾರವನ್ನು ತಡೆಹಿಡಿದಿರುವ ಸರ್ಕಾರದ ಏಕಪಕ್ಷೀಯ ನಿರ್ಧಾರವನ್ನು ಖಂಡಿಸಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿದರು.

ಪಟ್ಟಣದ ತಾಲ್ಲೂಕು ಕಚೇರಿಯ ಮುಂ ಭಾಗ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಜಮಾಯಿಸಿ, ಟಿವಿ ನೇರ ಪ್ರಸಾರ ತಡೆಹಿಡಿದಿರುವುದನ್ನು ಖಂಡಿಸಿ ಮನವಿ ಸಲ್ಲಿಸಿದರು.

ಕನ್ನಡ ಟಿವಿ ಸುದ್ಧಿವಾಹಿನಿ ನೇರಪ್ರಸಾರ ವನ್ನು ತಡೆಹಿಡಿದಿರುವ ಬಿಜೆಪಿ ಸರ್ಕಾರದ ಏಕಪಕ್ಷೀಯ ನಿರ್ಧಾರ ಪ್ರಜಾಪ್ರಭುತ್ವದ ಮೌಲ್ಯ ಮತ್ತು ಆಶಯಕ್ಕೆ ಧಕ್ಕೆಯುಂಟು ಮಾಡಿದಂತಾಗಿದೆ ಎಂದು ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಅಣಬೂರು ಮಠದ ಕೊಟ್ರೇಶ್ ಆಗ್ರಹಿಸಿದರು.

ಸಂಘದ ಗೌರವಾಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ವಕೀಲ ಡಿ.ಶ್ರೀನಿವಾಸ್ ಮಾತನಾಡಿ, ಯಾವುದೇ ವ್ಯಕ್ತಿಗೆ ಮಾನಹಾನಿ ಯಾಗುವ ಸುದ್ದಿ ಬಿತ್ತರಿಸಿದರೆ ಕಾನೂನಾತ್ಮಕ ಹೋರಾಟ ನಡೆಸಲು ಸಂವಿಧಾನಬದ್ಧ ಹಕ್ಕಿದೆ. ಆದರೆ, ವಾಹಿನಿಗಳನ್ನು ದಮನಗೊಳಿಸಿ ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಸ್ತಕ್ಷೇಪ ಮಾಡುತ್ತಿರುವುದು ಸರಿಯಲ್ಲ ಎಂದರು. 

ಅಧ್ಯಕ್ಷ ಚಿದಾನಂದಪ್ಪ ಮಾತನಾಡಿ, ಆರೋಪಗಳಿದ್ದರೆ ಸರಿಯಾದ ಮಾರ್ಗದಲ್ಲಿ ತನಿಖೆ ನಡೆಸಲಿ. ಆದರೆ ಪ್ರಸಾರಕ್ಕೆ ತಡೆ ನೀಡಿರುವುದು ಖಂಡನೀಯ ಎಂದರು.

ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಲೋಕೇಶ್ ಎಂ.ಐಹೊಳೆ, ಸಿ.ಬಸವರಾಜ್, ರವಿಕುಮಾರ್ ಜೆ.ಓ, ಮರೇನಹಳ್ಳಿ ಬಾಬು, ಮಾದಿಹಳ್ಳಿ ಮಂಜಪ್ಪ,  ಧನ್ಯಕುಮಾರ್, ಮಾರಪ್ಪ, ಮಹಾಲಿಂಗಪ್ಪ, ಮಂಜಪ್ಪ, ಮಂಜಯ್ಯ, ಮಾರುತಿ, ಬಿ.ಓ.ಮಾರುತಿ, ಜಗದೀಶ್, ವಾಸಿಂ, ಮಾದಿಹಳ್ಳಿ ಮಂಜಪ್ಪ, ವೇದಮೂರ್ತಿ, ರಫೀಕ್,  ಕರಿಬಸಪ್ಪ, ಬಸವರಾಜ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು. 

error: Content is protected !!