ಮಾಸ್ಕ್ ಇಲ್ಲದೆ ಯಾರೂ ಹೊರ ಬರಬೇಡಿ

ಕೊರೊನಾ ತಡೆಗಟ್ಟಲು ಜಾಗೃತಿ ಅಭಿಯಾನ: ಮಾಸ್ಕ್ ಇಲ್ಲದೆ ಸಂಚರಿಸುತ್ತಿದ್ದ ಸಾರ್ವಜನಿಕರಿಗೆ ಉಚಿತ ಮಾಸ್ಕ್ ವಿತರಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ

ದಾವಣಗೆರೆ, ಜೂ.18-   ಜಿಲ್ಲಾಡಳಿತ ಹಾಗೂ ಮಹಾನಗರಪಾಲಿಕೆ ವತಿಯಿಂದ ಕೊರೊನಾ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಗುರುವಾರ ಜಿಲ್ಲೆಯಲ್ಲಿ ಮಾಸ್ಕ್ ದಿನಾಚರಣೆ ಕೈಗೊಂಡು, ಅಭಿಯಾನ ನಡೆಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ ಮಾತನಾಡಿ, ಕೊರೊನಾ ನಿಯಂತ್ರಣಕ್ಕಾಗಿ ಉತ್ತಮ ಸಂದೇಶ ರವಾನೆ ಮಾಡುವ ಕೆಲಸ ಇದಾಗಿದೆ. ಪಾಲಿಕೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾಗೃತಿ ಅಭಿಯಾನ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಸಾರ್ವಜನಿಕರು ತಮ್ಮನ್ನು ತಾವು ರಕ್ಷಣೆ ಮಾಡಿಕೊಂಡು ಮಾಸ್ಕ್ ದಿನಾಚರಣೆಗೆ ಎಲ್ಲರೂ ಕೈ ಜೋಡಿಸಬೇಕು ಎಂದ ಅವರು, ಮಾಸ್ಕ್ ಇಲ್ಲದೇ ಸಂಚರಿಸುತ್ತಿದ್ದ ಸಾರ್ವಜನಿಕರಿಗೆ ಉಚಿತ ವಿತರಣೆ ಮಾಡಿದರು.

ಜನರು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಬೇಕು. ಆರ್ಥಿಕ ಚಟುವಟಿಕೆ, ವ್ಯಾಪಾರ, ವ್ಯವಹಾರ ಯಾವುದೂ ನಿಲ್ಲಬಾರದು. ಅದರೊಂ ದಿಗೆ ತಮ್ಮನ್ನು ತಾವು ರಕ್ಷಣೆ ಮಾಡಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಂಡು ಮುಂದುವರೆಯಬೇಕು ಎಂದು ಸಂದೇಶ ಹೇಳಲು ಈ ಅಭಿಯಾನ ಸಹಕಾರಿಯಾಗಿದೆ. ಇದು ನಿರೀಕ್ಷಿತ ಮಟ್ಟದಲ್ಲಿ ಜಾಗೃತಿ ಮೂಡಿಸುತ್ತದೆ ಎನ್ನುವ ಭರವಸೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮಾಸ್ಕ್ ಹಾಕಿಕೊಳ್ಳದಿರುವವರಿಗೆ ನಗರ ವ್ಯಾಪ್ತಿಯಲ್ಲಿ ರೂ. 200 ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೂ. 100 ದಂಡ ಹಾಕುವ ಕೆಲಸ ಮಾಡಲಾಗುತ್ತಿದೆ. ಸ್ವತಃ ಮೇಯರ್ ಅವರು ಈ ಜಾಗೃತಿಗೆ ಇಂದು ಚಾಲನೆ ನೀಡಿದ್ದಾರೆ. ಮೇಯರ್, ಎಸ್‍ಪಿ ಸೇರಿದಂತೆ ಎಲ್ಲ ಕಾರ್ಪೊರೇಟರ್ ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಎಲ್ಲ ಕಾರ್ಪೊರೇಟರ್ ತಮ್ಮ ತಮ್ಮ ವಾರ್ಡ್‍ಗಳಲ್ಲಿ ಜಾಗೃತಿ ಮೂಡಿಸಿ ಜನರಿಗೆ ಮಾಸ್ಕ್‍ನ ಮಹತ್ವ ತಿಳಿಸಿಕೊಡಬೇಕು ಎಂದು ಮನವಿ ಮಾಡಿದರು.

ಮಾಸ್ಕ್ ಇಲ್ಲದೆ  ಯಾರೊಬ್ಬರೂ ಹೊರಗೆ ಬರಬಾರದು. ಇವತ್ತು ಮಾಸ್ಕ್ ಹಾಕಿಕೊಳ್ಳದೇ ಬಂದ ಕಾನ್‍ಸ್ಟೇಬಲ್ ಅವರಿಗೂ ಕೂಡ ದಂಡ ಹಾಕಲಾಗಿದೆ. ನಗರ ಪ್ರದೇಶದಲ್ಲಿ ಮಾತ್ರವಲ್ಲದೆ ಎಲ್ಲ ಗ್ರಾಮೀಣ ಭಾಗದಲ್ಲಿಯೂ ಕೂಡ ಇವತ್ತು ಮಾಸ್ಕ್ ದಿನಾಚರಣೆ ನಡೆಯುತ್ತಿದೆ. ಎಲ್ಲಾ ಗ್ರಾಮ ಪಂಚಾಯಿತಿ ಪಿಡಿಓ ಸೇರಿದಂತೆ ಟಾಸ್ಕ್‍ಫೋರ್ಸ್ ಅವರು ಈ ಕೆಲಸ ಕೈಗೊಂಡಿದ್ದಾರೆ ಎಂದರು.

ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ಸರ್ಕಾರದ ಸೂಚನೆ ಇದ್ದರೂ ಕೂಡ ಸಾರ್ವಜನಿಕರು ಎಚ್ಚರಿಕೆ ವಹಿಸದಿರುವುದು ವಿಷಾದದ ಸಂಗತಿಯಾಗಿದೆ. ಯಾಕೆಂದರೆ ಕೊರೊನಾ ಕುರಿತು ಮಾಧ್ಯಮ ವಲಯದಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಮಾಹಿತಿ ಇದ್ದರೂ ಸಹ ತುಂಬಾ ಅಜಾಗರೂಕತೆ ಹಾಗೂ ನಿಷ್ಕಾಳಜಿಯಿಂದ ಸಾರ್ವಜನಿಕರು ವರ್ತನೆ ತೋರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಲಿಕೆ ವತಿಯಿಂದ ಮೇಯರ್, ಡಿಸಿ ಹಾಗೂ ಕಾರ್ಪೂರೇಟರ್‍ಗಳು ಎಲ್ಲರೂ ಸೇರಿ ಮಾಸ್ಕ್ ದಿನಾಚರಣೆಗೆ ಚಾಲನೆ ನೀಡಲಾಗಿದೆ ಎಂದರು.

ಇವತ್ತು ಪೊಲೀಸ್ ಹಾಗೂ ಸಾರ್ವಜನಿಕರಿಗೂ ಸೇರಿದಂತೆ 5 ಪ್ರಕರಣಗಳಿಗೆ ದಂಡ ಹಾಕಲಾಗಿದೆ. ಈ ಕುರಿತು ಸಾರ್ವಜನಿಕರು ಎಚ್ಚರಿಕೆ ವವಹಿಸಬೇಕು. ಇಲ್ಲದಿದ್ದಲ್ಲಿ ದಂಡ ಹಾಕಲಾಗುವುದು. ನಮ್ಮ ಉದ್ದೇಶ ಹಾಗೂ ಕಾಳಜಿ ಜನರ ಸುರಕ್ಷತೆಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಮಾಸ್ಕ್ ಹಾಕಿಕೊಳ್ಳಬೇಕು. ಇಲ್ಲದಿದ್ದರೆ  ಮುಂದಿನ ದಿನಗಳಲ್ಲಿ ಸಾರ್ವಜನಿಕರು ಅಜಾಗರೂಕತೆ ವಹಿಸಿದರೆ ಕ್ರಿಮಿನಲ್ ಕೇಸ್ ದಾಖಲಿಸುವುದರೊಂದಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕಾನ್‍ಸ್ಟೇಬಲ್‍ಗೆ ದಂಡ: ಬಡಾವಣೆ ಪೊಲೀಸ್ ಠಾಣೆಯ ಕಾನ್‍ಸ್ಟೇಬಲ್ ಒಬ್ಬರು ಕರ್ತವ್ಯದ ಮೇಲಿದ್ದಾಗ ಮಾಸ್ಕ್ ಧರಿಸದೆ ದ್ವಿಚಕ್ರ ವಾಹನದಲ್ಲಿ ಬರುವಾಗ ಅವರನ್ನು ಸ್ವತಃ ಜಿಲ್ಲಾಧಿಕಾರಿ ಮತ್ತು ಎಸ್‍ಪಿ ಅವರು ಹಳೇ ಬಸ್‍ನಿಲ್ದಾಣದ ಸಮೀಪ ತಡೆ ಹಿಡಿದು ನಿಲ್ಲಿಸಿ ಮಾಸ್ಕ್ ನೀಡಿ ರೂ. 200 ದಂಡ ವಿಧಿಸಿದರು. ಈ ವೇಳೆ ಎಸ್‍ಪಿ ಕಾನೂನು ಕಾಪಾಡುವವರೇ ಕಾನೂನು ಉಲ್ಲಂಘಿಸುವುದು ಸರಿಯಲ್ಲ ಎಂದು ಪೊಲೀಸ್ ಕಾನ್‍ಸ್ಟೇಬಲ್‍ಗೆ ಎಚ್ಚರಿಸಿದರು.

ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಮಹಾನಗರಪಾಲಿಕೆ ಎಲ್ಲ ಸದಸ್ಯರು ಸೇರಿದಂತೆ ಪೊಲೀಸ್ ಸಿಬ್ಬಂದಿ ಹಾಗೂ ಇತರೆ ಇಲಾಖಾ ಅಧಿಕಾರಿಗಳು ಹಾಜರಿದ್ದರು.

error: Content is protected !!