ಹರಿಹರದಲ್ಲಿ ಸುಸಜ್ಜಿತ ಬಡಾವಣೆ

ದಾವಣಗೆರೆ, ಜೂ.15- ಹರಿಹರ ಸಮೀಪದ ಶೋರಾಪುರ ದಲ್ಲಿ ಸುಮಾರು 54 ಎಕರೆ ಜಮೀನಿನಲ್ಲಿ ಒಂದು ಮಾದರಿ ಬಡಾವಣೆಯನ್ನು ಗೃಹ ಮಂಡಳಿ ಯಿಂದ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ಮುಂದಿನ ತಿಂಗಳು 20ರೊಳಗಾಗಿ ಕೆಲಸದ ಪ್ರಕ್ರಿಯೆ ಪ್ರಾರಂಭಿಸಲು ಅಧಿಕಾರಿ ಗಳಿಗೆ ಸೂಚನೆ ನೀಡಿದ್ದೇನೆ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.

ಸ್ಥಳ ವೀಕ್ಷಣೆ ನಡೆಸಿ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈ ಬಡಾವಣೆ ಮನೆಗಳಿಗಾಗಿ 35 ಸಾವಿರ ಅರ್ಜಿ ಬಂದಿವೆ. ಆದರೆ ಇದರಲ್ಲಿ 800 ರಿಂದ 900 ಸೈಟ್‍ಗಳಾಗುತ್ತವೆ. ಅದೇ ರೀತಿ ಶಾಸಕರು 8 ಎಕರೆ ಜಾಗ ಇದೆ. ಬಡವರಿಗಾಗಿ ಮನೆ ಕಟ್ಟಿಕೊಡಿ ಎಂದು ಮನವಿ ಮಾಡಿದ್ದಾರೆ. ಫಲಾನುಭವಿಗಳ ಆಯ್ಕೆ ಪಾರದರ್ಶಕವಾಗಿ ಮಾಡಿ ಬಡವರಿಗೆ ಮನೆ ಕೊಡಲು ಮುಂದಾಗುತ್ತೇವೆ ಎಂದು ಭರವಸೆ ನೀಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ಸೂರಿಲ್ಲದವರಿಗೆ 2022ರೊಳಗಾಗಿ ಪ್ರತಿಯೊಬ್ಬರಿಗೂ ಒಂದು ಸೂರು ಒದಗಿಸುವ ಚಿಂತನೆಗೆ ಸುಮಾರು 10 ಲಕ್ಷ ಮನೆಗಳನ್ನು ಇನ್ನೂ ಒಂದೂವರೆಯಿಂದ ಎರಡು ವರ್ಷ ಗಳಲ್ಲಿ ಮುಗಿಸಲು ಕ್ರಿಯಾ ಯೋಜನೆ ಮಾಡಿ ಕೆಲಸ ಕೂಡ ಪ್ರಾರಂಭಿಸಲಾಗಿದೆ ಎಂದರು.

4,535 ಎಕರೆ ಜಾಗವನ್ನು ರಾಜೀವ್‌ ಗಾಂಧಿ ವಸತಿ ನಿಗಮಕ್ಕೆ ಹಸ್ತಾಂತರ ಮಾಡಿಕೊಂಡಿದ್ದು,. 1.20 ಲಕ್ಷ ಸೈಟ್‍ಗಳನ್ನು ನಾಲ್ಕೈದು ತಿಂಗಳಲ್ಲಿ ಬೇಕಾದಂತಹ ಮೂಲಭೂತ ಸೌಕರ್ಯ ಒದಗಿಸಿ ಹಂಚುವ ಕೆಲಸ ಮಾಡಲಾಗುವುದು. 30 ವರ್ಷಗಳಲ್ಲಿ ಇಡೀ ರಾಜ್ಯದಲ್ಲಿ 3 ಲಕ್ಷ ಸೈಟ್ ಕೊಡಲಾಗಿದೆ. ಆದರೆ 1.20 ಲಕ್ಷ ಸೈಟ್‍ಗಳನ್ನು ಇನ್ನು ಐದರಿಂದ ಆರು ತಿಂಗಳಲ್ಲಿ ಬಡವರಿಗೆ ನೀಡಲಿದ್ದೇವೆ ಎಂದರು.

ಯುಎಲ್‍ಬಿ ಜಾಗಗಳನ್ನು ಪತ್ತೆ ಹಚ್ಚಲಾಗುತ್ತಿದ್ದು, ಅದರಡಿಯಲ್ಲಿ ಈ ಬಾರಿ ರಾಜೀವ್‍ಗಾಂಧಿ ವಸತಿ ಯೋಜನೆಯಿಂದ 69 ಸಾವಿರ ಮನೆಗಳನ್ನು ಕಟ್ಟಲು ರಾಜ್ಯದ ಮಹಾನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬೆಂಗಳೂರು ಹಾಗೂ ಮೈಸೂರು ಹೊರತುಪಡಿಸಿ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಈಗಾಗಲೇ ಸಂಡೂರಿನಲ್ಲಿ 2 ಸಾವಿರ ಮನೆ, ನಿಪ್ಪಾಣಿಯಲ್ಲಿ 1,600 ಮನೆ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ 3 ಸಾವಿರ ಮನೆ ಸೇರಿದಂತೆ ಅನೇಕ ಕಡೆ ಕೆಲಸ ಶುರು ಮಾಡಲಾಗಿದೆ. ಅದರಂತೆ ಇಲ್ಲಿ ಕೂಡ ಮಾಡಲಾಗುವುದು ಎಂದರು.

ಆವಾಸ್ ಯೋಜನೆಯಲ್ಲಿ ಮನೆ ಕಟ್ಟಿದವರಿಗೆ ಹಣವನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಾಗುವುದು. ಈಗ ಸದ್ಯದ ಪರಿಸ್ಥಿತಿಯಲ್ಲಿ ಗ್ರಾಮೀಣ ಭಾಗದಲ್ಲಿ 5.40 ಲಕ್ಷ ಹಾಗೂ ಪಟ್ಟಣ ಪ್ರದೇಶದಲ್ಲಿ 4.60 ಲಕ್ಷ ಮನೆಗಳಿಗೆ ಹೊರತುಪಡಿಸಿ ಬೇರೆ ಮನೆಗಳಿಗೆ ಹಣ ಬಿಡುಗಡೆ ಮಾಡಲಾಗುವುದಿಲ್ಲ. ಇನ್ನುಳಿದಂತೆ ಒಂದೂವರೆ ವರ್ಷದಲ್ಲಿ ಫಲಾನುಭವಿಗಳಿಗೆ ಹಂತ ಹಂತವಾಗಿ ಹಣ ಬಿಡುಗಡೆ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಶಾಸಕ ರಾಮಪ್ಪ, ಮಾಜಿ ಶಾಸಕ ಹರೀಶ್, ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.

error: Content is protected !!