ಗ್ರಾಮೀಣ ಕೂಟ ಸಂಸ್ಥೆ ಯವರಿಗೆ ತಹಶೀಲ್ದಾರ್ ಹುಲ್ಲುಮನಿ ತಿಮ್ಮಣ್ಣ ಎಚ್ಚರಿಕೆ
ಜಗಳೂರು, ಜೂ. 5- ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಂದ ಬಲವಂತವಾಗಿ ಸಾಲ ವಸೂಲಿ ಮಾಡಿದರೆ ಸಂಸ್ಥೆಯ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣ ಕೂಟ ಸಂಸ್ಥೆ ಯವರಿಗೆ ತಹಶೀಲ್ದಾರ್ ಹುಲ್ಲುಮನಿ ತಿಮ್ಮಣ್ಣ ಎಚ್ಚರಿಕೆ ನೀಡಿದರು.
ಗುರುವಾರ ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಗ್ರಾಮೀಣ ಕೂಟ ಸಂಸ್ಥೆಯ ಸಿಬ್ಬಂದಿಗಳ ಜೊತೆ ನಡೆದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕೊರೊನಾ ವೈರಸ್ ಹಾವಳಿಯಿಂದ ಜನ ಜೀವನ ನಡೆಸುವುದು ಕಷ್ಟವಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಬಲವಂತವಾಗಿ ಸಾಲ ವಸೂಲಿ ಮಾಡುತ್ತಿರುವುದಾಗಿ ನಿಮ್ಮ ಸಂಸ್ಥೆಯ ಮೇಲೆ ವಿವಿಧ ಗ್ರಾಮಗಳ ಗ್ರಾಮಸ್ಥರು ದೂರವಾಣಿ ಮೂಲಕ ಕರೆ ಮಾಡಿ ದೂರು ನೀಡುತ್ತಿದ್ದಾರೆ
ಸರ್ಕಾರದ ಸೂಚನೆಗಳನ್ನು ಗಾಳಿಗೆ ತೂರಿ, ನಿಮ್ಮಿಷ್ಟದ ಹಾಗೆ ಕೆಲಸ ಮಾಡಬೇಡಿ. ಜನತೆ ನಿಮ್ಮ ಸಾಲವನ್ನು ಮರುಪಾವತಿ ಮಾಡುತ್ತಾರೆ. ಅವರಿಗೆ ಸಹಕಾರ ನೀಡಿ. ಮತ್ತೊಮ್ಮೆ ಸಂಸ್ಥೆಯ ಮೇಲೆ ದೂರು ಬಂದರೆ ಪರವಾನಿಗಿ ರದ್ದು ಪಡಿಸಲು ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಗ್ರಾಮೀಣ ಕೂಟ ಸಂಸ್ಥೆ ಸಿಬ್ಬಂದಿಗಳು ಹಾಜರಿದ್ದರು.