ಕಂಟೈನ್‌ಮೆಂಟ್ ಝೋನ್‍ ಅನುಕೂಲಕ್ಕಾಗಿ ಎಟಿಎಂಗೆ ಚಾಲನೆ

ದಾವಣಗೆರೆ, ಜೂ.3- ಜಿಲ್ಲೆಯಲ್ಲಿ ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿರುವ ಕಂಟೈನ್‌ಮೆಂಟ್ ಝೋನ್‍ಗಳಲ್ಲಿ ಹಣದ ಅಗತ್ಯವುಳ್ಳವರ ಸಹಾಯಕ್ಕಾಗಿ ಪಿ.ಬಿ. ರಸ್ತೆಯಲ್ಲಿರುವ ಎಸ್‍ಬಿಐ ಶಾಖೆಯ ವತಿಯಿಂದ ವ್ಯವಸ್ಥೆ ಮಾಡಲಾಗಿರುವ ಮೊಬೈಲ್ ಎಟಿಎಂ ವಾಹನ ಸಂಚಾರಕ್ಕೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಚಾಲನೆ ನೀಡಿದರು.

ಈ ವೇಳೆ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಪರಿಣಾಮದಿಂದಾಗಿ ಸೀಲ್‍ಡೌನ್ ಪ್ರದೇಶಗಳಲ್ಲಿ ದೈನಂದಿನ ಹಣಕಾಸಿನ ವ್ಯವಹಾರಕ್ಕೆ ತೊಂದರೆ ಆಗಬಾರದು ಎಂದು ಕಂಟೈನ್‍ಮೆಂಟ್ ಝೋನ್‍ಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಸೇವೆ ಒದಗಿಸಲಾಗಿದೆ. ಮೊಬೈಲ್ ಎಟಿಎಂ ಬ್ಯಾಂಕ್‍ಗೆ ಬಹಳಷ್ಟು ಬೇಡಿಕೆ ಇಟ್ಟಿದ್ದೆವು. ಇದೀಗ ಸೇವೆ ಒದಗಿದ್ದು, ಕಂಟೈನ್‍ಮೆಂಟ್ ಝೋನ್‍ಗಳಲ್ಲಿನ ಜನರಿಗೆ ಸಹಾಯವಾಗಲಿದೆ ಎಂದು ಹೇಳಿದರು.

ಕೆಟಿಜೆ ನಗರದ ಕಂಟೈನ್‍ಮೆಂಟ್ ಝೋನ್‍ನಲ್ಲಿ ಕಳೆದ 28 ದಿನಗಳಿಂದ ಒಂದೂ ಪ್ರಕರಣ ದಾಖಲಾಗದ ಹಿನ್ನೆಲೆಯಲ್ಲಿ ನಿಯಮಾನುಸಾರ ಡಿನೋಟಿಫೈ ಮಾಡಲಾಗಿದೆ. ಪ್ರಕರಣದ ಸಂಪರ್ಕದ ಕೊಂಡಿಗಳನ್ನು ಬೇರ್ಪಡಿಸುವ ಕೆಲಸ ಮಾಡಲಾಗುತ್ತಿದ್ದರೂ ಸಹ ಜಿಲ್ಲೆಯಲ್ಲಿ ಅಲ್ಲೊಂದು ಇಲ್ಲೊಂದು ಪ್ರಕರಣಗಳು ಕಂಡುಬರುತ್ತಿವೆ. 

  • ಇದೀಗ ಜಿಲ್ಲೆಯಲ್ಲಿ ಕೊರೊನಾಗೆ ಸಂಬಂಧಪಟ್ಟಂತೆ ಪರಿಸ್ಥಿತಿ ಸುಧಾರಿಸಿದೆ. ಆದಷ್ಟು ಪ್ರಕರಣಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತಿದ್ದು, ಅವರೆಲ್ಲರಿಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಉತ್ತಮವಾದ ಆಹಾರ ಹಾಗೂ ಆಯುಷ್ ಇಲಾಖೆಯ ಉತ್ಪನ್ನಗಳನ್ನು ನೀಡಲಾಗುತ್ತಿದೆ.

– ಮಹಾಂತೇಶ್ ಬೀಳಗಿ, ಜಿಲ್ಲಾಧಿಕಾರಿ

ಜಿಲ್ಲಾ ಸರ್ವೇಕ್ಷಣಾ ತಂಡವು ಉತ್ತಮವಾಗಿ ಕೆಲಸ ಮಾಡುತ್ತಿದೆ. ಕೊರೊನಾ ನಿಯಂತ್ರಿಸಲು ಇನ್ನೂ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು ಎಂದರು.

ಅತೀ ಹೆಚ್ಚು ಕೇಸ್‍ಗಳು ಜಾಲಿನಗರ ಹಾಗೂ ಬಾಷಾ ನಗರಕ್ಕೆ ಸಂಬಂಧಿಸಿವೆ. ರೋಗಿ ಸಂಖ್ಯೆ-533 ಮತ್ತು 556 ಇವರಿಗೆ ಸಂಬಂಧಪಟ್ಟ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದವರನ್ನು 300 ರಿಂದ 400 ಜನರನ್ನು ಕ್ವಾರಂಟೈನ್ ಮಾಡಲಾಗಿತ್ತು. ಇದೀಗ ಅವರಿಗೆ ಸಂಬಂಧಪಟ್ಟ ದ್ವಿತೀಯ ಸಂಪರ್ಕದವರಿಗೆ ಕೊರೊನಾ ಪ್ರಕರಣ ಕಂಡು ಬರುತ್ತಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್ ಹಾಗೂ ಎಸ್‍ಬಿಐ ಬ್ಯಾಂಕ್ ಮ್ಯಾನೇಜರ್ ಸೇರಿದಂತೆ, ಸಿಬ್ಬಂದಿಗಳು ಹಾಜರಿದ್ದರು.

error: Content is protected !!