ಮಾನವೀಯತೆ ಮೆರೆದ ಉಪ ತಹಶೀಲ್ದಾರರಿಗೆ ಡಿಸಿ ಸನ್ಮಾನ

ದಾವಣಗೆರೆ,  ಜೂ.2- ರಸ್ತೆ ಅಪಘಾತಕ್ಕೊಳಗಾಗಿ ರಸ್ತೆಯಲ್ಲಿ ಒದ್ದಾಡುತ್ತಿದ್ದ ಪ್ರೇಮಾ (44) ಎಂಬ ಮಹಿಳೆಯನ್ನು ತಮ್ಮ ವಾಹನದಲ್ಲಿ ಕರೆದುಕೊಂಡು ಹೋಗಿ ಎಸ್.ಎಸ್.ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.

 ಮೇ 30 ರಂದು ತ್ಯಾವಣಿಗಿ ಬೆಸ್ಕಾಂ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜಗಳೂರು ತಾಲ್ಲೂಕಿನ ಹಳವದಂಡೆ ಗ್ರಾಮದ ಪ್ರೇಮಾ ದಾವಣಗೆರೆಯಿಂದ ಮೋಟಾರ್ ಬೈಕಿನಲ್ಲಿ ಹಿಂದಿನ ಸೀಟಿನಲ್ಲಿ ಕುಳಿತು ಬರುತ್ತಿರುವಾಗ ಮತ್ತಿ ಸಮೀಪ ಆಕಸ್ಮಿಕವಾಗಿ ಅಡ್ಡ ಬಂದ ಎಮ್ಮೆಗೆ ಬೈಕ್ ಡಿಕ್ಕಿ ಹೊಡೆದಿದೆ. ಹಿಂಬದಿಯಲ್ಲಿ ಕುಳಿತಿದ್ದ ಪ್ರೇಮಾ ಕೆಳಗೆ ಬಿದ್ದು ಒದ್ದಾಡುತ್ತಿದ್ದರು. ಅಲ್ಲಿ ಹಲವರು ಅವರನ್ನು ನೋಡಿದರೂ ಸಹಾಯಕ್ಕೆ ಮುಂದಾಗದೇ ಇರುವುದನ್ನು ಅಲ್ಲೇ ಸಾಗುತ್ತಿದ್ದ ಬಸವಾಪಟ್ಟಣ ನಾಡಕಚೇರಿಯ ಉಪ ತಹಶೀಲ್ದಾರ್ ಎನ್.ಎಸ್.ಚಂದ್ರಪ್ಪ ಆಕೆಯನ್ನು ತಮ್ಮ ಕಾರಿನಲ್ಲಿ ದಾವಣಗೆರೆಯ ಎಸ್‍ಎಸ್ ಆಸ್ಪತ್ರೆಗೆ ತಂದು ಸೇರಿಸಿ, ಆಸ್ಪತ್ರೆ ಖರ್ಚಿಗೆಂದು ರೂ.10 ಸಾವಿರ ನೀಡಿದ್ದರು. ನಂತರ ಅವರ ತಂದೆ, ತಾಯಿಗೆ ವಿಷಯ ತಿಳಿಸಿದ್ದರು. ಬೈಕ್ ಸವಾರ ಯುವಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು.

ಅಪಘಾತಕ್ಕೀಡಾದ ಹೆಣ್ಣುಮಗಳನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಉಪ ತಹಶೀಲ್ದಾರ್ ಚಂದ್ರಪ್ಪ ಅವರನ್ನು  ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ತಮ್ಮ ಕಚೇರಿಯಲ್ಲಿ ಇಂದು ಸನ್ಮಾನಿಸಿದರು. ಚಂದ್ರಪ್ಪ ಉತ್ತಮ ಕೆಲಸ ಮಾಡಿದ್ದಾರೆ. ಎಲ್ಲರೂ ಹೀಗೇಯೇ ತಮ್ಮ ಸುತ್ತಮುತ್ತಲು ಏನಾದರೂ ಅವಘಡಗಳು ಸಂಭವಿಸಿದರೆ ಸಹಾಯಕ್ಕೆ ಮುಂದಾಗಿ ಮಾನವೀಯತೆ ಮೆರೆಯಬೇಕು ಎಂದರು.  ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಅಪಘಾತಕ್ಕೀಡಾದ ಮಹಿಳೆಯ ತಂದೆ ಪಂಚಾಕ್ಷರಪ್ಪನವರಿಗೆ ಧೈರ್ಯ ಹೇಳಿದರು. 

ಈ ಸಂದರ್ಭದಲ್ಲಿ ಚಂದ್ರಪ್ಪನವರ ಧರ್ಮಪತ್ನಿ ಬಿ.ಎಸ್.ರೇಣುಕಮ್ಮ, ರೈತ ಮುಖಂಡರು, ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಪ್ರಧಾನ ಸಂಚಾಲಕರಾದ ಹೆಚ್.ಬಿ.ಅಣ್ಣಪ್ಪ, ಆಂಜನೇಯ ಮತ್ತಿತರರು ಹಾಜರಿದ್ದರು.

error: Content is protected !!