ಸ್ಥಗಿತಗೊಂಡಿದ್ದ ಕಾಮಗಾರಿ ತನಿಖೆ ನಡೆಸಿದ ಡಿಸಿ, ಎಸ್ಪಿ, ಎಸಿ
ದಾವಣಗೆರೆ, ಜೂ. 2- ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಉಪವಿಭಾಗಾ ಧಿಕಾರಿ ಮಮತಾ ಹೊಸಗೌಡರ್ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಗುತ್ತಿಗೆದಾರರು, ಕಂದಾಯ ಅಧಿಕಾರಿ ಮತ್ತು ಸಿಬ್ಬಂದಿಗಳೊಂದಿಗೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸಂಬಂಧ ಸಾರ್ವಜನಿಕ ಅಹವಾಲು ಹಾಗೂ ಕಾಮಗಾರಿ ಸ್ಥಗಿತಗೊಂಡಿರುವ ಹಿನ್ನೆಲೆ ಯಲ್ಲಿ ಇಂದು ಸ್ಥಳ ತನಿಖೆ ಮಾಡಿದರು.
ರಾಷ್ಟ್ರೀಯ ಹೆದ್ದಾರಿ ರಸ್ತೆ ಅಗಲೀಕರಣ ಸಂಬಂಧ ಅಡ್ಡಿಪಡಿಸುತ್ತಿರುವ ಕುರಿತು ಕಲ್ಪನಹಳ್ಳಿ, ಮಲ್ಲಶೆಟ್ಟಿಹಳ್ಳಿ, ಹೊನ್ನೂರು ಮತ್ತು ಲಕ್ಕಮುತ್ತೇನಹಳ್ಳಿ ಇಲ್ಲಿ ಹೊಸದಾಗಿ ಅಂಡರ್ಪಾಸ್ ನಿರ್ಮಿಸುವ ಕುರಿತಂತೆ ಸಾರ್ವಜನಿಕರ ಅಹವಾಲು ಹಾಗೂ ಕಾಮಗಾರಿ ಸ್ಥಗಿತಗೊಂಡಿರುವ ಕಾರಣಕ್ಕಾಗಿ ಇಂದು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ಈ ಗ್ರಾಮಗಳ ಗ್ರಾಮಸ್ಥರು ಉತ್ತಮ ದರ್ಜೆಯ ಮತ್ತು ವಿಶಾಲವಾದ ಅಂಡರ್ಪಾಸ್ ನಿರ್ಮಿಸುವ ಕುರಿತಂತೆ ತೀವ್ರತರವಾದ ಬೇಡಿಕೆ ಇಡಲಾಗಿತ್ತು. ಆದ ಕಾರಣ ಕಾಮಗಾರಿ ಕೈಗೊಳ್ಳದಂತೆ ಅಡ್ಡಿಪಡಿಸುವುದಾಗಿ ತಿಳಿಸಿದರು.
ಡಿಸಿ ಮತ್ತು ಎಸ್ಪಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮ ಗಳಂತೆ ಈ ಹಂತದಲ್ಲಿ ಗ್ರಾಮಸ್ಥರ ಬೇಡಿಕೆಗೆ ತಕ್ಕಂತೆ ವಿಶಾಲವಾದ ಅಂಡರ್ಪಾಸ್ ನಿರ್ಮಿಸಲು ಅವಕಾಶವಿಲ್ಲವೆಂಬ ವಿಷಯನ್ನು ಗ್ರಾಮಸ್ಥರಿಗೆ ಮನದಟ್ಟು ಮಾಡಿಸಿ, ಕಲ್ಪನಹಳ್ಳಿ, ಮಲ್ಲಶೆಟ್ಟಿಹಳ್ಳಿ ಗ್ರಾಮಗಳಲ್ಲಿ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.