ಸ್ಕೌಟ್ಸ್-ಗೈಡ್ಸ್ ಮಕ್ಕಳ ಇ-ಜಾಗೃತಿಯಲ್ಲಿ ಸೃಜನಶೀಲತೆ

ದಾವಣಗೆರೆ, ಮೇ 30- ಲಾಕ್‌ಡೌನ್‌ನಿಂದಾಗಿ ಮನೆಯ ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿದ್ದ   ಮಕ್ಕಳು ತಮ್ಮ ಸೃಜನಶೀಲ ಯೋಚನೆಯಿಂದ ಕಿಟಕಿಯಾಚೆಗಿನ ವಾಸ್ತವವನ್ನು ಕುಂಚದಲ್ಲಿ ಸೆರೆ ಹಿಡಿದಿದ್ದಾರೆ.

ಬಿಳಿ ಹಾಳೆಯಲ್ಲಿ ಚಿತ್ರ ಬರೆದು ಕೊರೊನಾ ಸೋಂಕಿನ ವಿರುದ್ಧ ಡಿಜಿಟಲ್ ಜಾಗೃತಿ ಮೂಡಿಸು ತ್ತಿದ್ದಾರೆ. ಬೇಸಿಗೆ ರಜೆಯಲ್ಲಿ ವಿನೋದದ ಜೊತೆಗೆ ಸಾಮಾಜಿಕ ಶಿಕ್ಷಣದ ಪ್ರಜ್ಞೆ ಮೂಡಿಸುವ ಉದ್ದೇಶದಿಂದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವಿವಿಧ ರಚನಾತ್ಮಕ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿದೆ.

ಜಿಲ್ಲೆಯ ಕಬ್ಸ್, ಬುಲ್‌ಬುಲ್ಸ್, ಸೌಟ್ಸ್, ಗೈಡ್ಸ್, ರೋವರ್ಸ್ ಮತ್ತು ರೇಂಜರ್ಸ್‌ಗಳು ಕೋವಿಡ್‌ನಿಂದ ಸ್ವಯಂ ರಕ್ಷಣೆ ಪಡೆಯುವ ಮಾದರಿಗಳನ್ನು ಸಿದ್ಧಪಡಿಸಿ ಸರಪಣಿಗಳ ಮೂಲಕ ಹೆಚ್ಚು ಜನರನ್ನು ತಲುಪುತ್ತಿದ್ದಾರೆ. ಮಕ್ಕಳು ಮಾನಸಿಕವಾಗಿ ಕುಗ್ಗದಂತೆ ಕಾಳಜಿ ವಹಿಸಲು ಸಂಸ್ಥೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ.

ಆರೋಗ್ಯ ಮತ್ತು ಯೋಗಕ್ಷೇಮ ಕಾರ್ಯಕ್ರಮದ ಅಡಿಯಲ್ಲಿ ಪರಿಚಿತ ಐವರಿಗೆ ದೂರವಾಣಿ ಕರೆ ಮಾಡಿ, ಕೋವಿಡ್-19 ಹರಡುವಿಕೆ ತಡೆಯಲು ಕೈಗೊಳ್ಳುವ ಕ್ರಮಗಳ ಕುರಿತು ತಿಳಿಸುವಂತೆ ಮಕ್ಕಳಿಗೆ ಹೇಳಲಾಗಿತ್ತು. ನಂತರ ಆ ಐವರು ಮತ್ತೆ ಐವರಿಗೆ ಕರೆ ಮಾಡುವ ಮೂಲಕ ಸರಪಣಿ ಬೆಳೆಸುವ ಯೋಜನೆ ಇದಾಗಿತ್ತು. ಕುಟುಂಬ ಸುರಕ್ಷಿತವಾಗಿರಲು ಮನೆಯಿಂದ ಸೆಲ್ಫಿ ತೆಗೆದು ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದರು. ಪುಟ್ಟ ಮಕ್ಕಳು ಹ್ಯಾಂಡ್‌ವಾಷ್ ಬಳಸಿ ವೈಜ್ಞಾನಿಕವಾಗಿ ಕೈ ತೊಳೆಯುವ ವಿಧಾನದ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣ, ಯೂಟ್ಯೂಬ್‌ಗೆ ಹಾಕಿದ್ದನ್ನು ಹಲವರು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು. ರೋವರ್ಸ್ ಮತ್ತು ರೇಂಜರ್ಸ್‌ಗಳು ಕೊರೊನಾ ವೈರಸ್‌ನಿಂದ ರಕ್ಷಿಸಿಕೊಳ್ಳುವ ಚಿತ್ರಗಳನ್ನು ಬಿಡಿಸಿ ಗಮನ ಸೆಳೆದರು.

ವಿಪತ್ತಿನ ಸಂದರ್ಭದಲ್ಲಿ ಅಗತ್ಯ ಬಂದಲ್ಲಿ ಜಿಲ್ಲಾಡಳಿತಕ್ಕೆ ನೆರವಾಗಲು ಕೊರೊನಾ ವಾರಿಯರ್ಸ್ ಸ್ವಯಂ ಸೇವಕರ ತಂಡವನ್ನು ಅಣಿಗೊಳಿಸಲಾಗುತ್ತಿದೆ. ಮಾಸ್ಕ್ ಬ್ಯಾಂಕ್ ಮಾಡಲು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮುಖಗವಸು ಸಿದ್ಧಪಡಿಸುತ್ತಿದ್ದಾರೆ ಎಂದು ಮುರುಘರಾಜೇಂದ್ರ ಜೆ. ಚಿಗಟೇರಿ ತಿಳಿಸಿದ್ದಾರೆ.

error: Content is protected !!