ಸರಳ, ಸಂಭ್ರಮ ರಂಜಾನ್ ಆಚರಣೆ

ದಾವಣಗೆರೆ, ಮೇ 25- ಪವಿತ್ರ ರಂಜಾನ್‌ ಹಬ್ಬವನ್ನು ಜಿಲ್ಲಾದ್ಯಂತ ಮುಸ್ಲಿಂ ಬಾಂಧವರು ಇಂದು ಬಹಳ ಸರಳವಾಗಿ ಆಚರಿಸಿ ದೇಶದಾದ್ಯಂತ ವ್ಯಾಪಿಸಿರುವ ಕೊರೊನಾ ಸೋಂಕು ತೊಲಗಲಿ, ನಾಡು ಸಂಪದ್ಭರಿತವಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು.

ಸಂಪ್ರದಾಯದಂತೆ ರಂಜಾನ್‌ ಹಬ್ಬದ ಈದ್‌-ಉಲ್-ಫಿತರ್ ಪ್ರಾರ್ಥನೆಯನ್ನು ಈದ್ಗಾಗಳಲ್ಲಿ (ನಮಾಜ್) ಸಲ್ಲಿಸಬೇಕಾಗಿತ್ತು. ಆದರೆ ದೇಶದಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸಿ ಸಮಾಜದ ಮುಖಂಡರು ಧರ್ಮ ಗುರು (ಉಲೇಮಾ)ಗಳ ತೀರ್ಮಾನದಂತೆ ಸಡಗರ ಸಂಭ್ರಮವನ್ನು ಮಾಡದೆ ಸರಳ ರೀತಿಯಲ್ಲಿ ರಂಜಾನ್ ಆಚರಿಸಿರುವುದು ಇತಿಹಾಸದ ದಾಖಲೆ ಎನ್ನುತ್ತಾರೆ ಮುತ್ಸದ್ಧಿಯೊಬ್ಬರು.

ರಂಜಾನ್ ಹಬ್ಬದ ಪ್ರಮುಖ ಅಂಶಗಳು ನಮಾಜ್, ರೋಜಾ (ಉಪವಾಸ) ಜಕಾತ್, ಫಿತ್ರಾ, ಹಜ್. ಕಳೆದ ಒಂದು ತಿಂಗಳಿನಿಂದ ಉಪವಾಸ ಆಚರಿಸಿದ ಮುಸ್ಲಿಂ ಬಾಂಧವರು ಹಬ್ಬದ ದಿನ ಹೊಸ ಬಟ್ಟೆಗಳನ್ನು ಧರಿಸಿಕೊಂಡು ಈದ್ಗಾಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸುವುದು ಸಾಮಾನ್ಯ. ಆದರೆ ಈ ವರ್ಷ ದೇಶದಲ್ಲಿ ಲಾಕ್‌ಡೌನ್‌, ಕೆಲವು ಕಡೆ ಸೀಲ್‌ಡೌನ್‌ ಸಂದಿಗ್ಧ ಪರಿಸ್ಥಿತಿಯಲ್ಲಿ  ಖುಷಿ, ಮೋಜು, ಮಸ್ತಿ ಸೂಕ್ತ ಅಲ್ಲ ಎಂಬ ಸ್ವಯಂ ಪ್ರೇರಿತ ಮುಸ್ಲಿಂ ಬಾಂಧವರ ತೀರ್ಮಾನ ಉಲೇಮಾಗಳ ತಂಜೀಮ್ ಆದೇಶಕ್ಕೆ ಪುಷ್ಠಿ ನೀಡುವಂತಿತ್ತು.

ಜಿಲ್ಲಾಡಳಿತದ ಸಲಹೆಯಂತೆ ಯಾವುದೇ ಈದ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡದೇ ತಮ್ಮ ತಮ್ಮ ಮನೆಗಳಲ್ಲಿ ಕುಟುಂಬ ಸಮೇತರಾಗಿ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಬಾಂಧವರು ಬಡವರಿಗೆ, ನಿರ್ಗತಿಕರಿಗೆ, ಸಂಬಂಧಿಗಳಿಗೆ ಜಕಾತ್ ಹಾಗೂ ಫಿತ್ರಾದ ಹಣ ಹಾಗೂ ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ನೀಡಿ ಹಬ್ಬದ ಸಂತೋಷವನ್ನು ವಿನಿಮಯ ಮಾಡಿಕೊಂಡರು.

ಲಾಕ್‌ಡೌನ್ ಘೋಷಣೆ ಸಂದರ್ಭದಲ್ಲಿ ರಾಜ್ಯ ವಕ್ಫ್‌ ಬೋರ್ಡ್‌ ಆದೇಶದಂತೆ ಪ್ರತಿ ಮಸೀದಿಗಳಲ್ಲಿ ತಲಾ ಐದು ಜನರು ನಮಾಜ್ ಸಲ್ಲಿಸಲು ಅವಕಾಶ ಕಲ್ಪಿಸಿತು. ಅದರಂತೆ ನಗರದ ಮಸೀದಿಗಳಲ್ಲಿಯೂ ಸಹ ಪ್ರಾರ್ಥನೆ ಸಲ್ಲಿಸಲಾಯಿತು.

ಮೊಬೈಲ್ : ಹಬ್ಬದ ಶುಭಾಶಯ

ಪ್ರಾರ್ಥನೆಯ ನಂತರ ತಮ್ಮ ಸಂಬಂಧಿಗಳ ಮನೆಗಳಿಗೆ ಶುಭಾಶಯ ಸಲ್ಲಿಸಲು ಹೋಗುತ್ತಿದ್ದ ದೃಶ್ಯ ನಗರ ದಲ್ಲಿ ಎಲ್ಲಿಯೂ ಸಹ ಕಂಡು ಬಂದಿಲ್ಲ. ಬಹು ತೇಕ ಈ ಬಾರಿ ಮೊಬೈಲ್‌ನಲ್ಲಿಯೇ ವಿಡಿಯೋ ಕಾಲ್ ಮೂಲಕ ಶುಭಾ ಶಯ ವಿನಿಮಯ ಮಾಡಿರುವ ಘಟನೆ ಸಾಮಾನ್ಯವಾಗಿದ್ದವು.

ಗಾಡ್‌ ಈಜ್ ಗ್ರೇಟ್ : ಪ್ರಕೃತಿಯ ವಿಕೋಪದಿಂದಾಗಿ ಈ ಬಾರಿ ನಮಗೆ ಸಾಮೂ ಹಿಕ ಪ್ರಾರ್ಥನೆ ಸಲ್ಲಿಸುವ ಅವಕಾಶ ದೊರೆತಿಲ್ಲ. ಆದರೆ ಇದರಲ್ಲಿ `ಅಲ್ಹಾ’ನಿಗೆ ಸಂತೋಷ ಪಡಿ ಸುವ ಕೆಲಸ ಮಾಡಬೇಕು ಎಂದು ಹೇಳಿ, ನಮ್ಮ ಮನೆಗಳಲ್ಲಿ ಕುಟುಂಬ ಸಮೇತರಾಗಿ ಕಳೆದ ಒಂದು ತಿಂಗಳಿನಿಂದ ಉಪವಾಸ ಇರುವ ಮೂಲಕ ಪ್ರಾರ್ಥನೆ ಸಲ್ಲಿಸಿರುವ ನಾವುಗಳು ಧನ್ಯರು. ಆದರೆ ಭಗವಂತನು ನಮಗೆ ಈ ಅವಕಾಶ ನೀಡಿದ್ದಾನೆ. ನಿಜಕ್ಕೂ ಗಾಡ್ ಈಜ್ ಗ್ರೇಟ್ ಎಂದರು.

ಮಕ್ಕಳಲ್ಲಿ ಕಂಡ ಸಂಭ್ರಮ : ಈ ವರ್ಷ ಹೊಸ ಬಟ್ಟೆಗಳನ್ನು ಕೇಳದೆ ತಮ್ಮ ಪೋಷಕರ ತೀರ್ಮಾನಕ್ಕೆ ಬದ್ಧರಾಗಿದ್ದ ಮಕ್ಕಳಲ್ಲಿ ನಿನ್ನೆ ಸಂಜೆ ಚಂದ್ರದರ್ಶನದ ನಂತರ ಎಲ್ಲಿಲ್ಲದ ಸಂಭ್ರಮ ಕಂಡು ಬಂದಿತು. ಸೂರ್ಯಾಸ್ತವಾಗುತ್ತಿದ್ದಂತೆ ರಂಗು ರಂಗಿನ ದೀಪಾಲಂಕಾರದಿಂದ ಜಗಮಗಿಸಿದ `ಮೀನಾ ಬಜಾರ್’ನ ಕೆಲವು ಅಂಗಡಿಗಳು ವ್ಯಾಪಾರ ವಹಿವಾಟು ಹಬ್ಬದ ಖುಷಿಗೆ ನಾಂದಿಯಾಗಿತ್ತು. ಹೊಸ ಬಟ್ಟೆಗಳನ್ನು ಹೊರತುಪಡಿಸಿ, ಟೋಪಿ, ಖರ್ಚೀಫ್‌, ಶ್ಯಾವಿಗೆ, ಬೆಲ್ಟ್, ಚಪ್ಪಲಿ, ಬ್ಯಾಂಗಲ್ ಸ್ಟೋರ್‌ಗಳಲ್ಲಿ ಮೆಹೆಂದಿ, ಚಿಕ್ವಾ, ಸೆಂಟ್, ಸುರ್ಮಾ ಖರೀದಿಯ ಆರ್ಭಟ ಮುಗಿಲು ಮುಟ್ಟುವಂತಿತ್ತು. ಆದರೆ, ಕೊಂಚ ಗಂಟೆಗಳ ಸಂತೋಷ ಸರಳ ಸಂಭ್ರಮದ ರಂಜಾನ್ ಆಚರಣೆಗೆ ಸಾಕ್ಷಿಯಾಗಿತ್ತು.

error: Content is protected !!