3 ಪಾಸಿಟಿವ್, ಐವರು ಬಿಡುಗಡೆ

ಜಿಲ್ಲೆಯಲ್ಲಿ ಒಟ್ಟು 97 ಸಕ್ರಿಯ ಪ್ರಕರಣಗಳು: ಜಿಲ್ಲಾಧಿಕಾರಿ

ದಾವಣಗೆರೆ, ಮೇ 21-   ಕೊರೊನಾ ಪಾಸಿಟಿವ್ ಬಾಧಿತರಾಗಿ ಜಿಲ್ಲಾ ಚಿಗಟೇರಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ಐವರು ಸಂಪೂರ್ಣ ಗುಣಮುಖರಾಗಿದ್ದು, ಇವರನ್ನು ಗುರುವಾರ ಸಂಜೆ ಜಿಲ್ಲಾಧಿಕಾರಿ, ಎಸ್ಪಿ ಹಾಗೂ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳು ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಟ್ಟರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಗುರುವಾರ ಜಿಲ್ಲೆಯಲ್ಲಿ ಮೂರು ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಪಿ-1483, ಪಿ-1485, ಪಿ-1488 ಜಾಲಿನಗರಕ್ಕೆ ಸಂಬಂಧಟ್ಟವರು. ಪಿ-1485 ಇವರು ಪಿ-667 ರ ದ್ವಿತೀಯ ಸಂಪರ್ಕ ಹೊಂದಿದವರಾಗಿದ್ದರೆ. ಪಿ-1488 ಇವರು ಪಿ-634 ಸಂಪರ್ಕಿತರಾಗಿದ್ದಾರೆ. ಕಂಟೈನ್‍ಮೆಂಟ್ ಜೋನ್‍ಲ್ಲಿರುವ ಎಪಿಸೆಂಟರ್‍ನ ಅಕ್ಕಪಕ್ಕದ ಮನೆಯವರಲ್ಲಿ ಕಂಡುಬಂದಂತಹ ಒಂದು ಪ್ರಕರಣ ಪಿ-1483 ಆಗಿದ್ದು ಇವರು 15 ವರ್ಷದ ಬಾಲಕನಾಗಿದ್ದಾನೆ ಎಂದು ಮಾಹಿತಿ ನೀಡಿದರು.

ಇಂದು ಬಿಡುಗಡೆಗೊಂಡ ಐದು ಜನರು ಪಿ-618, 620, 623, 628, 664 ಆಗಿದ್ದು, ಇವರಲ್ಲಿ ಇಬ್ಬರು ಪುರುಷರು ಹಾಗೂ 3 ಜನ ಮಹಿಳೆಯರು. ಬುಧವಾರ 7 ಜನ, ಇಂದು 5 ಹಾಗೂ ಹಳೆಯ 2 ಜನ ಸೇರಿ ಒಟ್ಟು 14 ಜನರನ್ನು ಈವರೆಗೆ
ಬಿಡುಗಡೆ ಮಾಡಲಾಗಿದೆ. 4 ಜನ ಸಾವನ್ನಪ್ಪಿದ್ದು ಒಟ್ಟು 115 ರಲ್ಲಿ 97 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ ಎಂದರು. 

ಅವರನ್ನು ಕೂಡ ಪ್ರೋಟೋಕಾಲ್ ಪ್ರಕಾರ ಒಳ್ಳೆಯ ಚಿಕಿತ್ಸೆ ನೀಡಿ, ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಆದಷ್ಟು ಬೇಗ ಗುಣಮುಖರನ್ನಾಗಿಸುವ ಪ್ರಯತ್ನ ಮಾಡಲಾಗುತ್ತಿದೆ. 14 ದಿನ ಚಿಕಿತ್ಸೆ ಮುಗಿದವರಿದ್ದು ಮತ್ತೊಮ್ಮೆ ಸ್ಯಾಂಪಲ್ ಸಂಗ್ರಹಿಸಿ ಕಳುಹಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಆದಷ್ಟು ಬೇಗ ಎಲ್ಲರೂ ಗುಣಮುಖರಾಗುವ ವಿಶ್ವಾಸ ಇದೆ ಎಂದರು.

ಪಾಲಿಕೆ ಮೇಯರ್ ಬಿ.ಜಿ.ಅಜಯ್ ಕುಮಾರ್ ಮಾತನಾಡಿ,  ದಾವಣಗೆರೆಯಲ್ಲಿ ಈಗಾಗಲೇ ಸಕ್ರಿಯ 97 ಪ್ರಕರಣಗಳಿವೆ.  ವೈದ್ಯರು ಹೇಳುವ ಪ್ರಕಾರ ಅವರಲ್ಲಿ 50 ಜನ 14 ದಿನಗಳ ಚಿಕಿತ್ಸೆ ಮುಗಿಸಿರುವವರು ಇದ್ದಾರೆ. ಇವರ ಎರಡನೇ ಸುತ್ತಿನ ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಪ್ರೋಟೋಕಾಲ್ ಪ್ರಕಾರ ಅವರನ್ನು ಬಿಡುಗಡೆಗೊಳಿಸುವ ವಿಶ್ವಾಸ ಇದೆ. ಕೇಸ್ ದಿನೇ ದಿನೇ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಜನರು ಎಚ್ಚೆತ್ತುಕೊಳ್ಳಬೇಕು ಎಂದರು.

ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಹನುಮಂತರಾಯ ಮಾತನಾಡಿ, ಅನ್ಯ ರಾಜ್ಯಗಳಿಂದ ನಮ್ಮ ಜಿಲ್ಲೆ, ಗ್ರಾಮಗಳಿಗೆ ಬಂದವರನ್ನು ಕ್ವಾರಂಟೈನ್ ಮಾಡಲು ಅವಕಾಶ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಎಸಿ ಮಮತಾ ಹೊಸಗೌಡರ್, ಡಿಎಚ್‍ಒ ಡಾ.ರಾಘವೇಂದ್ರಸ್ವಾಮಿ, ಜಿಲ್ಲಾ ಸರ್ವೇಕ್ಷ ಣಾಧಿಕಾರಿ ಡಾ.ರಾಘವನ್, ಜಿಲ್ಲಾ ಶಸ್ತ್ರಚಿಕಿತ್ಸಕ ಸುಭಾಷ್‌ಚಂದ್ರ, ತಹಶೀಲ್ದಾರ್ ಗಿರೀಶ್ ಇದ್ದರು.

error: Content is protected !!