ತೂಕದಲ್ಲಿ ವ್ಯತ್ಯಾಸ : ರಾಗಿ ಖರೀದಿ ಕೇಂದ್ರಕ್ಕೆ ಶಾಸಕ ರೆಡ್ಡಿ ಭೇಟಿ – ಅಧಿಕಾರಿಗಳಿಗೆ ತರಾಟೆ

ಹರಪನಹಳ್ಳಿ, ಮೇ 17- ಎಪಿಎಂಸಿ ಆವರಣದಲ್ಲಿಯೇ ಬೃಹತ್ ಗಾತ್ರದ  ಗೋಡೌನ್‌  ಇದ್ದು, ಹರಿಹರಕ್ಕೆ ಏಕೆ ಕಳಿಸುತ್ತೀರಿ, ಹುಚ್ಚರ ಸಂತೆ ಆಗಿದೆ. ರೈತರ ಜೊತೆ ತಮಾಷೆ ಮಾಡಬೇಡಿ ಎಂದು ಶಾಸಕ ಜಿ.ಕರುಣಾಕರ ರೆಡ್ಡಿ ಅವರು ರಾಗಿ ಖರೀದಿ ಕೇಂದ್ರದ ವ್ಯವಸ್ಥಾಪಕರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಇಂದು ನಡೆಯಿತು.
ತೂಕದಲ್ಲಿ ವ್ಯತ್ಯಾಸವಾಗುತ್ತದೆ ಎಂದು ರೈತರು ನೀಡಿದ ದೂರಿನ ಹಿನ್ನಲೆಯಲ್ಲಿ ಪಟ್ಟಣದ ಎಪಿಎಂಸಿ ಆವರಣದಲ್ಲಿ  ಸ್ಥಾಪನೆಯಾಗಿರುವ ರಾಗಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ, ಪರಿಶೀಲನೆ ಮಾಡಿ ಮಾತನಾಡಿದ ಅವರು, ಒಂದು ಚೀಲ ರಾಗಿಗೆ ಚೀಲದ ತೂಕ 580 ಗ್ರಾಂ ರಾಗಿ ವಜಾ ಮಾಡಿಕೊಳ್ಳಬೇಕೆಂಬ ಸರ್ಕಾರದ ನಿಯಮ ವಿದ್ದರೂ ಅಧಿಕಾರಿಗಳು 1 ಕಿಲೋ ರಾಗಿಯನ್ನು ವಜಾ ಮಾಡಿಕೊಳ್ಳುತ್ತಾರೆ ಎಂದು ರೈತರ ದೂರಾಗಿದ್ದು, ಸರ್ಕಾರದ ಆದೇಶದ ಪ್ರಕಾರ ತೂಕ  ಮಾಡಿಕೊಳ್ಳಿ, ಹೆಚ್ಚುವರಿ ರಾಗಿ ತೆಗೆದುಕೊಳ್ಳಬೇಡಿ ಎಂದು ತಾಕೀತು ಮಾಡಿದರು. ಆಗ ಗುಣಮಟ್ಟ ಪರಿಶೀಲಿಸುವ ವೀರೇಶ್ ಅವರು, ಸರ್ ನಾನು ವ್ಯವಸ್ಥಾಪಕರು ಸೂಚಿಸಿದಂತೆ ಕಾರ್ಯನಿರ್ವಹಿಸುತ್ತೇನೆ ಎಂದು  ಉತ್ತರಿಸಿದರು. ಸ್ಥಳಕ್ಕೆ  ಆಗಮಿಸಿದ ಖರೀದಿ ಕೇಂದ್ರದ ವ್ಯವಸ್ಥಾಪಕ ರಾಮಚಂದ್ರಯ್ಯ ಇಲ್ಲಿಂದ ಖರೀದಿಸಿದ ಚೀಲಗಳನ್ನು ಹರಿಹರದ ಗೋಡೌನ್‌ಗೆ ಕಳಿಸಬೇಕು, ಟ್ರಾನ್ಸ್‌ಪೋರ್ಟ್ ಹಾಗೂ ಚೀಲ ಎತ್ತುವಾಗ  ಹುಕ್ ಹಾಕುವುದು ಸೇರಿ ಸಾಕಷ್ಟು ರಾಗಿ ಚೆಲ್ಲುತ್ತದೆ ಎಂದು ಹೇಳಿದರು.
ಇಲ್ಲಿಯ ರೈತರಿಗೆ ತೊಂದರೆಯಾಗಬಾರದು ಎಂದು ಎಚ್ಚರಿಸಿ ನಿಮ್ಮ ವಹಿವಾಟಿನ ಎಲ್ಲಾ ಮಾಹಿತಿಯನ್ನು ಉಪವಿಭಾಗಾಧಿಕಾರಿಯವರಿಗೆ ನೀಡಿ ಎಂದು ಹೇಳಿದರು.
ಉಪವಿಭಾಗಾಧಿಕಾರಿ ವಿ.ಕೆ. ಪ್ರಸನ್ನಕುಮಾರ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಮಂಜಾನಾಯ್ಕ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸತ್ತೂರು ಹಾಲೇಶ್, ಉಪಾಧ್ಯಕ್ಷ ನಿಟ್ಟೂರು ಸಣ್ಣಹಾಲಪ್ಪ,  ಬಿಜೆಪಿ ಎಸ್.ಟಿ. ಘಟಕದ ತಾಲ್ಲೂಕು ಅಧ್ಯಕ್ಷ ಆರ್.ಲೋಕೇಶ್, ಬಾಗಳಿ ಕೊಟ್ರೇಶಪ್ಪ, ಪುರಸಭೆ ಸದಸ್ಯರುಗಳಾದ ಕಿರಣಕುಮಾರ್ ಶಾನಭೋಗ, ದ್ಯಾಮಜ್ಜಿ ರೊಕ್ಕಪ್ಪ, ಜಾವಿದ್ ಮುಖಂಡರಾದ ಎಂ.ಪಿ.ನಾಯ್ಕ್, ಕರೇಗೌಡ, ಯಡಿಹಳ್ಳಿ ಶೇಖರಪ್ಪ, ರಾಘವೇಂದ್ರಶೆಟ್ಟಿ, ಯು.ಪಿ.ನಾಗರಾಜ್  ಮುಖಂಡರಾದ ಎಂ.ಪಿ.ನಾಯ್ಕ್, ಸಣ್ಣಹಾಲಪ್ಪ, ಲೋಕೇಶ್, ಬಾಗಳಿ ಕೊಟ್ರೇಶ್,  ನಾಗರಾಜ್ ಜೈನ್, ಸಂತೋಷ್, ಕರೇಗೌಡ, ಮಲ್ಲೇಶ್, ರಾಘವೇಂದ್ರಶೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.  

error: Content is protected !!