ರೈತನ ಕರೆಗೆ ಸ್ಪಂದಿಸಿದ ಬಸವಂತಪ್ಪ ಎಲೆಕೋಸು ಖರೀದಿಸಿ ಉಚಿತ ವಿತರಣೆ

ದಾವಣಗೆರೆ, ಮೇ 13- ಲಾಕ್ ಡೌನ್ ಪರಿಣಾಮ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಎಲೆಕೋಸು ಬೆಳೆದು ಸಂಕಷ್ಟದಲ್ಲಿದ್ದ ರೈತನ ನೆರವಿಗೆ ಧಾವಿಸಿದ ಮಾಯಕೊಂಡ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಸ್. ಬಸವಂತಪ್ಪ ಎಲೆಕೋಸು ಖರೀದಿಸಿ ಪರಿಹಾರ ಧನ ನೀಡಿದರಲ್ಲದೇ, ಖರೀದಿಸಿದ ಎಲೆಕೋಸನ್ನು ಅನುಕೂಲವಾಗುವಂತೆ ಕೂಲಿ ಕಾರ್ಮಿಕರಿಗೆ ಉಚಿತವಾಗಿ ವಿತರಿಸಿದರು.
ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ಗಂಗನಕಟ್ಟೆ ಗ್ರಾಮದ ರೈತ ಶರಣಪ್ಪ ತಮ್ಮ 2 ಎಕರೆ ಜಮೀನಿನಲ್ಲಿ ಬೆಳೆದ ಎಲೆಕೋಸು ಬೆಳೆಯನ್ನು ಲಾಕ್‍ಡೌನ್ ಪರಿಣಾಮ ಬೆಲೆ ಕುಸಿತದಿಂದ ಮಾರಾಟ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಬಸವಂತಪ್ಪನವರಿಗೆ ದೂರವಾಣಿ ಮುಖಾಂತರ ಸಂಪರ್ಕಿಸಿ ತಮ್ಮ ಅಳಲನ್ನು ತೋಡಿಕೊಂಡರು.
ಇವರ ಅಳಲಿಗೆ ಸ್ಪಂದಿಸಿದ ಬಸವಂತಪ್ಪ ಹೊಲಕ್ಕೆ ಭೇಟಿ ನೀಡಿ ರೈತರಿಗೆ ಆತ್ಮಸ್ಥೈರ್ಯದ ಮಾತುಗಳನ್ನಾಡಿ, ಧೈರ್ಯ ತುಂಬಿ ರೈತ ಬೆಳೆದ ಎಲೆಕೋಸನ್ನು ಖರೀದಿಸುವ ಮೂಲಕ ಸ್ಥಳದಲ್ಲೇ ಪರಿಹಾರವಾಗಿ 5 ಸಾವಿರ ರೂ. ಗಳನ್ನು ನೀಡಿದರು. ನಂತರ ಖರೀದಿಸಿದ ಎಲೆ ಕೋಸನ್ನು ದಾವಣಗೆರೆಯ ಸ್ಲಂ ಬಡಾವಣೆಗಳಲ್ಲಿ ಉಚಿತವಾಗಿ ವಿತರಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ರಮೇಶಣ್ಣ, ಹೇಮಂತ್, ಮೊಹಮ್ಮದ್ ಸೇರಿದಂತೆ ಇತರರು ಇದ್ದರು.

error: Content is protected !!