ಪಟೇಲ್ ಬಡಾವಣೆಯ ಆರು ಪಾರ್ಕ್‍ಗಳಿಗೆ ಸ್ವಾತಂತ್ರ್ಯ ಯೋಧರ ಹೆಸರು

ದಾವಣಗೆರೆ, ಫೆ.20-  ಜೆ.ಹೆಚ್.ಪಟೇಲ್ ಬಡಾವಣೆಯಲ್ಲಿರುವ 6 ಪಾರ್ಕ್‍ಗಳಿಗೆ ಸ್ವಾತಂತ್ರ್ಯ ಯೋಧರ ಹೆಸರುಗಳನ್ನು ನಾಮಕರಣ ಮಾಡಲಾಗುವುದೆಂದು ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಹೇಳಿದರು.

ಇಂದು ನಡೆದ ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದ ಅವರು  1942 ರ ಆಗಸ್ಟ್ 9 ರಂದು  ಗಾಂಧೀಜಿಯವರು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ (ಕ್ವಿಟ್ ಇಂಡಿಯಾ) ಆಂದೋಲನಕ್ಕೆ ಕರೆ ಕೊಟ್ಟಾಗ ದಾವಣಗೆರೆಯಲ್ಲಿಯೂ  ಬ್ರಿಟಿಷರ ವಿರುದ್ಧ ಪ್ರತಿಭಟಿಸಿ, ಅವರ ಗುಂಡಿಗೆ ಎದೆ ಕೊಟ್ಟು ಪ್ರಾಣಾರ್ಪಣೆ ಮಾಡಿದ ಸ್ವಾತಂತ್ರ್ಯ ವೀರ ಯೋಧರಾದ ಹಳ್ಳೂರು ನಾಗಪ್ಪ, ಅಕ್ಕಸಾಲೆ ವಿರೂಪಾಕ್ಷಪ್ಪ,  ಬಿದರಕುಂದಿ ನಿಂಗಪ್ಪ, ಹದಡಿ ನಿಂಗಪ್ಪ, ಹಮಾಲಿ ತಿಮ್ಮಣ್ಣ, ಮಾಗಾನಹಳ್ಳಿ ಹನುಮಂತಪ್ಪ ಇವರುಗಳ ಹೆಸರುಗಳನ್ನು ನಾಮಕರಣ ಮಾಡಲಾಗುವುದು ಎಂದಾಗ ಶಾಸಕರುಗಳಾದ ಎಸ್.ಎ. ರವೀಂದ್ರನಾಥ್, ಎಸ್. ರಾಮಪ್ಪ ಸೇರಿದಂತೆ ಪ್ರಾಧಿಕಾರದ ಸದಸ್ಯರು ಸಮ್ಮತಿ ಸೂಚಿಸಿದರು.

ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಧಿಕಾರದಿಂದ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ಪ್ರಸ್ತಾಪಿಸಿ ದೂಡಾ ವ್ಯಾಪ್ತಿಯಲ್ಲಿ ಬರುವ ಖಾಸಗಿ ಬಡಾವಣೆಗಳಲ್ಲಿ ಕಾಯ್ದಿರಿಸಿರುವ ಉದ್ಯಾನವನಗಳನ್ನು ಒತ್ತುವರಿ/ಅತಿಕ್ರಮಣ ತಡೆಯುವ ದೃಷ್ಟಿಯಿಂದ ಹದ್ದುಬಸ್ತು ಮಾಡಿ ತಂತಿ-ಬೇಲಿ ಹಾಕುವ ಕುರಿತು ಕ್ರಮ ವಹಿಸಲಾಗುತ್ತಿದೆ. ಒಟ್ಟು 20 ಉದ್ಯಾನವನಗಳಿಗೆ ತಂತಿ-ಬೇಲಿ ಹಾಕಲಾಗಿದೆ ಎಂದರು.

ಜೆ.ಹೆಚ್.ಪಟೇಲ್ ಬಡಾವಣೆಯಲ್ಲಿರುವ ಎರಡು ವೃತ್ತಗಳಿಗೆ ಜಗನ್ನಾಥ್ ಜೋಷಿ ಮತ್ತು ಡಾ. ಶಾಮ್ ಪ್ರಸಾದ್ ಮುಖರ್ಜಿ ಅವರುಗಳ ಹೆಸರನ್ನು ನಾಮಕರಣ ಮಾಡಲಾಗುವುದು. 

ದೂಡಾದಲ್ಲಿ ವಿಲೇಗೆ ಲಭ್ಯವಿದ್ದ ಒಟ್ಟು 8 ನಾಗರಿಕ ಸೌಲಭ್ಯದ ನಿವೇಶನಗಳ ಹಂಚಿಕೆಗಾಗಿ ಫೆ. 20 ರಂದು ನಾಗರಿಕ ಸೌಲಭ್ಯ ನಿವೇಶನ ಹಂಚಿಕೆ ಉಪಸಮಿತಿ ಸಭೆಯನ್ನು ನಡೆಸಲಾಯಿತು. 08 ನಾಗರಿಕ ಸೌಲಭ್ಯದ ನಿವೇಶನಗಳ ಪೈಕಿ 05 ನಾಗರಿಕ ಸೌಲಭ್ಯ ನಿವೇಶನಗಳ ಹಂಚಿಕೆಗೆ ಒಟ್ಟು 09 ಅರ್ಜಿಗಳು ಸ್ವೀಕೃತವಾಗಿದ್ದು, ಸದರಿ ಅರ್ಜಿಗಳ ಪೈಕಿ 05 ಸಂಸ್ಥೆ/ಕಛೇರಿಗಳಿಗೆ ನಾಗರಿಕ ಸೌಲಭ್ಯ ನಿವೇಶನ ಹಂಚಿಕೆ ಮಾಡಲು ತೀರ್ಮಾನಿಸಲಾಗಿದೆ ಎಂದು  ಸಭೆಯ ಗಮನಕ್ಕೆ ತಂದರು. 

ಸಹಾಯಕ ಕಾರ್ಯಪಾಲಕ ಅಭಿಯಂತರರು ಮಾತನಾಡಿ, ದೂಡಾದಿಂದ ಅಭಿವೃದ್ಧಿ ಪಡಿಸಿರುವ ಕುಂದುವಾಡ ಗ್ರಾಮದ ವಿವಿಧ ರಿಸನಂ. ಗಳಲ್ಲಿ ಒಟ್ಟು 53 ಎಕರೆ ಜಮೀನುಗಳನ್ನು ವಸತಿ ಯೋಜನೆ ಉದ್ದೇಶಕ್ಕೆ ನೇರ ಖರೀದಿ ಮೂಲಕ ಜಮೀನು ಖರೀದಿ ಮಾಡಲು ಹಾಗೂ ಯೋಜನೆ ಕೈಗೆತ್ತಿಕೊಳ್ಳುವ ಬಗ್ಗೆ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ-1987ರ ಕಲಂ-15(ಬಿ)ರಂತೆ ಪೂರ್ವಾನುಮತಿ ಪಡೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಆಯುಕ್ತರು ಶಾಸಕರ ಗಮನಕ್ಕೆ ತಂದರು. 

ಪ್ರಾಧಿಕಾರದ ಸದಸ್ಯರಾದ ನಾಗರಾಜ ಎಂ. ರೋಖಡೆ ಮಾತನಾಡಿ ಹರಿಹರ ನಗರದಲ್ಲಿ ರಿಂಗ್ ರಸ್ತೆ ನಿರ್ಮಾಣ ಕುರಿತು ಪ್ರಸ್ತಾಪಿಸಿದರು. ಸಭೆಯು ರಿಂಗ್ ರಸ್ತೆ ಕಾಮಗಾರಿ ಕೈಗೊಳ್ಳುವ ಬಗ್ಗೆ ಸರ್ವೇ ಕಾರ್ಯ ಕೈಗೊಳ್ಳಲು  ತೀರ್ಮಾನಿಸಿತು. 

ದೂಡಾ ವ್ಯಾಪ್ತಿಯಲ್ಲಿ ಅನಧಿಕೃತ ಬಡಾವಣೆಗಳು  ಬರುವುದನ್ನು ತಡೆಯುವ ಸಂಬಂಧವಾಗಿ ಮಹಾನಗರ ಪಾಲಿಕೆ ಆಯುಕ್ತರು, ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ತಾಲ್ಲೂಕು ಸರ್ವೇಯರ್ ಅವರಿಗೆ ಸಭೆಯು ಯಾವ ಕಡೆ ಅನಧಿಕೃತ ಬಡಾವಣೆ ಬರುತ್ತದೆ ಎಂಬುದನ್ನು ಗುರುತಿಸಿ, ಆ ಬಡಾವಣೆಗಳನ್ನು ಪಟ್ಟಿ ಮಾಡಿ ಪ್ರಾಧಿಕಾರಕ್ಕೆ ವರದಿ ಮಾಡಲು ಹಾಗೂ ಉಪನೋಂದಣಿ ಕಚೇರಿಗೆ ಅನಧಿಕೃತ ಬಡಾವಣೆಯಲ್ಲಿನ ನಿವೇಶನಗಳನ್ನು ನೋಂದಣಿ ಮಾಡದಂತೆ ಕ್ರಮ ವಹಿಸಲು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. 

 ಶಾಸಕರುಗಳಾದ ಎಸ್.ಎ. ರವೀಂದ್ರನಾಥ್‍, ಎಸ್.ರಾಮಪ್ಪ, ಸದಸ್ಯರುಗಳಾದ ಆರ್.ಎಲ್. ದೇವೀರಮ್ಮ, ನಾಗರಾಜ ಎಂ. ರೋಖಡೆ, ಸೌಭಾಗ್ಯಮ್ಮ, ಡಿ.ವಿ. ಜಯರುದ್ರಪ್ಪ, ಆಯುಕ್ತರಾದ ಬಿ.ಟಿ. ಕುಮಾರಸ್ವಾಮಿ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.

error: Content is protected !!