ಜನರ ಕೈಗೆ ಕೆಲಸ ಕೊಡಿ, ನಿರ್ಗತಿಕರಿಗೆ ವಸತಿ ನೀಡಿ

ಅಭಿವೃದ್ಧಿಯಲ್ಲಿ ಹಿಂದೆ ಬಿದ್ದ ಅಧಿಕಾರಿಗಳಿಗೆ ಶಾಸಕ ಗೋಪಾಲಕೃಷ್ಣ ಮಾತಿನ ಚಾಟಿ ಬೀಸಿ, ಕೆಲಸ ಮಾಡುವಂತೆ ಬಿಸಿ ಮುಟ್ಟಿಸಿದರು. ಗಾಂಧೀಜಿ ಚಿತಾಭಸ್ಮ ಕಾಮಗಾರಿ ನಡೆಸಿದ ನಿರ್ಮಿತಿ ಕಾಮಗಾರಿ ಬಗ್ಗೆ ಶಾಸಕರು ಬೇಸರ ವ್ಯಕ್ತಪಡಿಸಿದರು.

ಕೂಡ್ಲಿಗಿ : ತಾಲ್ಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಗೋಪಾಲಕೃಷ್ಣ

ಕೂಡ್ಲಿಗಿ, ಏ.5-  ಉದ್ಯೋಗ ಖಾತ್ರಿ ಯೋಜನೆಯಡಿ ಕೋಟಿ ಕೋಟಿ ಹಣ ಬರುತ್ತದೆ. ಅಧಿಕಾರಿಗಳು  ಗ್ರಾಮೀಣ ಭಾಗದ ರೈತರಿಗೆ, ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡುವುದರ ಮೂಲಕ ಮಾನವೀಯತೆ ಮೆರೆ ಯಬೇಕು. ಖಾತ್ರಿ ಯೋಜನೆಯಡಿ ಮೀಸಲಿಟ್ಟ ಹಣ ತಾಲ್ಲೂಕಿನಲ್ಲಿ ಝೀರೋ ಆಗುವ ರೀತಿ ಅಧಿಕಾರಿಗಳು ಆಯಾ ಇಲಾಖೆಗೆ ಬಂದ ಅನುದಾನವನ್ನು ಜನತೆಗೆ ಕೂಲಿ ನೀಡುವುದರ ಮೂಲಕ ನ್ಯಾಯ ಒದಗಿಸಿಕೊಡಬೇಕೆಂದು ಕೂಡ್ಲಿಗಿ ಶಾಸಕ ಎನ್.ವೈ. ಗೋಪಾಲಕೃಷ್ಣ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು. 

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ  ಅವರು ಮಾತನಾಡಿದರು.

ಕೂಡ್ಲಿಗಿ ತಾಲ್ಲೂಕಿನಲ್ಲಿರುವ ಅಲೆಮಾರಿ ಕುಟುಂಬಗಳಿಗೆ ಸಾವಿರಕ್ಕೂ ಹೆಚ್ಚು ಮನೆಗಳನ್ನು ಮಂಜೂರು ಮಾಡಿಸಿದ್ದು, ಬಿಸಿಎಂ ಅಧಿಕಾರಿಗಳು ಹಾಗೂ ಸಂಬಂಧಿಸಿದ ಸ್ಥಳೀಯ ಆಡಳಿತದ ಅಧಿಕಾರಿಗಳು  ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಮುಂದಾಗಬೇಕು. ನಿವೇಶನ ಇದ್ದವರಿಗೆ ಮನೆ ಕಟ್ಟಿಸಿಕೊಡಲು ಅಧಿಕಾರಿಗಳು ಮುಂದೆ ಬರಬೇಕು. ಈ ಕುರಿತು ವಾರದೊಳಗೆ ಫಲಾನುಭವಿಗಳ ಸ್ಥಿತಿಗತಿಗಳ ಬಗ್ಗೆ ಪಟ್ಟಿ ಮಾಡುವಂತೆ ಬಿಸಿಎಂ ಅಧಿಕಾರಿ ಪಂಪಾಪತಿಯವರಿಗೆ ಶಾಸಕರು ನಿರ್ದೇಶನ ನೀಡಿದರು. 

ಬರಿಯ ಭಾಷಣದಿಂದ ಪ್ರಯೋಜನವಿಲ್ಲ: ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸದಿರುವ ಕುರಿತು ಬೇಸರ ವ್ಯಕ್ತಪಡಿಸಿದ ಶಾಸಕರು, ಕಂದಾಯ ಇಲಾಖೆ ಅಧಿಕಾರಿಗಳು ಕೇವಲ ಭಾಷಣ ಮಾಡುವುದರಿಂದ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸಹಕಾರ ನೀಡುವುದರ ಮೂಲಕ ಜನಪರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕೆಂದು ತಹಶೀಲ್ದಾರ್ ಮಹಾಬಲೇಶ್ವರ ಅವರಿಗೆ ಸಲಹೆ ನೀಡಿದರು. 

3 ಕೋಟಿ ವೆಚ್ಚದಲ್ಲಿ ಮಕ್ಕಳ ಆಸ್ಪತ್ರೆ ನಿರ್ಮಾಣ:  ಕೂಡ್ಲಿಗಿಯಲ್ಲಿ ಸರ್ಕಾರಿ ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ 3 ಕೋಟಿ ಹಣ ಮಂಜೂರಾಗಿ ವರ್ಷಗಳೇ ಗತಿಸಿದರೂ ಅಧಿಕಾರಿಗಳು ನಿವೇಶನ ಇಲ್ಲ ಎನ್ನುವ ಸಬೂಬು ಹೇಳುತ್ತಿರುವುದು ಸರಿಯಲ್ಲ. ಎನ್.ಎ. ಸೈಟ್‌ಗಳಲ್ಲಿ ಪಾರ್ಕ್‌ಗೆ ಬಿಡುವ ನಿವೇಶನದಲ್ಲಿಯೇ ಮಕ್ಕಳ ಆಸ್ಪತ್ರೆ ನಿರ್ಮಿಸಿ. ಆಸ್ಪತ್ರೆ ನಿರ್ಮಾಣ ಸಹ ನಾಗರಿಕ ಸೌಲಭ್ಯಗಳಲ್ಲೊಂದಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ತಿಳಿಸುತ್ತೇನೆ. ಆದಷ್ಟು ಶೀಘ್ರ ಕೂಡ್ಲಿಗಿಯಲ್ಲಿ ಮಕ್ಕಳ ಆಸ್ಪತ್ರೆಗೆ ನಿವೇಶನ ಗುರ್ತಿಸಿ ಎಂದು ಮುಖ್ಯಾಧಿಕಾರಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು. 

ಕುಡಿಯುವ ನೀರಿಗೆ ಶೇ.50 ಹಣ ಬಳಸಲು ಸೂಚನೆ: ಬೇಸಿಗೆ ಆರಂಭವಾಗಿದ್ದು, ಇನ್ನು ಮುಂದೆ ಕುಡಿಯುವ ನೀರಿನ ಸಮಸ್ಯೆ ಆರಂಭವಾಗಲಿದೆ. ಹೀಗಾಗಿ ಗ್ರಾಮ ಪಂಚಾಯ್ತಿಗೆ  14ನೇ ಹಣಕಾಸು ಯೋಜನೆಯಲ್ಲಿ ಬಂದ ಹಣದಲ್ಲಿ ಶೇ. 25ರಷ್ಟು ಹಣವನ್ನು ಕುಡಿಯುವ ನೀರಿಗೆ ಬಳಸಬಹುದು.  ಉಳಿದಂತೆ ನೈರ್ಮಲ್ಯ ಮುಂತಾದ ಕಾರ್ಯಗಳಿಗೆ ಬಳಸಬಹುದು ಎಂದು ತಾ.ಪಂ.ಇಓ ಬಸಣ್ಣ ಶಾಸಕರಿಗೆ ತಿಳಿಸಿದಾಗ ಕುಡಿಯುವ ನೀರಿಗೆ ಶೇ.25 ಸಾಕಾಗುವುದಿಲ್ಲ. ಶೇ. 50 ಹಣ ಬಳಸಿ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಬರದ ಹಾಗೇ ನೋಡಿಕೊಳ್ಳಿ. ಎಂದು ಇಓಗೆ ಸೂಚಿಸಿದರು. 

ತಾ.ಪಂ. ಇಓ ಬಸಣ್ಣ, ತಹಶೀಲ್ದಾರ್ ಮಹಾಬಲೇಶ್ವರ,  ಜಿ.ಪಂ. ಎಇಇ ಮಲ್ಲಿಕಾರ್ಜುನ, ಲೋಕೋಪಯೋಗಿ ಇಲಾಖೆಯ ಜೆಇ ನಾಗನಗೌಡ, ಕೃಷಿ ಇಲಾಖೆಯ ಕೆ.ವಾಮದೇವ, ಗುಡೇಕೋಟೆ ಅರಣ್ಯಾಧಿಕಾರಿ ರೇಣುಕಾ, ಕೂಡ್ಲಿಗಿ ಅರಣ್ಯಾಧಿಕಾರಿ ಮಂಜುನಾಥ ಸೇರಿದಂತೆ, ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.  

error: Content is protected !!