ಹರಪನಹಳ್ಳಿ ಪುರಸಭೆ : ಲಸಿಕೆ, ಮಾಸ್ಕ್‌ ಜಾಗೃತಿ ಜಾಥಾ

ಹರಪನಹಳ್ಳಿ, ಏ.5- ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ  ಶುರುವಾಗಿರುವ ಹಿನ್ನೆಲೆಯಲ್ಲಿ ಪಟ್ಟಣದ ಪುರಸಭೆಯಿಂದ ಕೋವಿಡ್ ಲಸಿಕೆ ಹಾಗೂ ಮಾಸ್ಕ್ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.

ಜಾಗೃತಿ ಜಾಥಾದಲ್ಲಿ 45 ವರ್ಷ  ವಯೋಮಾನದವರು ಹಾಗೂ ರಕ್ತದೊತ್ತಡ, ಮಧುಮೇಹದಂತಹ ಕಾಯಿಲೆಯಿಂದ ಬಳಲುವವರು ಕಡ್ಡಾಯವಾಗಿ ಸ್ವಯಂ ಪ್ರೇರಿತರಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಹಾಗೂ 8ನೇ ವಾರ್ಡ್‌  ಅಂಬೇಡ್ಕರ್ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳಿರಿ ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.

 ಜಾಗೃತಿ ಮೂಡಿಸುವ ಭಿತ್ತಿಚಿತ್ರಗಳನ್ನು ಹಿಡಿದು ಜಾಥಾವು ಪಟ್ಟಣದ ಪ್ರವಾಸಿ ಮಂದಿರ ವೃತ್ತದಿಂದ ಪ್ರಾರಂಭವಾಗಿ  ಹರಿಹರ-ಹೊಸಪೇಟೆ ರಸ್ತೆ, ಸಿನಿಮಾ ಟಾಕೀಸ್,  ವಾಲ್ಮೀಕಿ ನಗರ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿತು. 

ತಹಶೀಲ್ದಾರ್  ಎಲ್.ಎಂ. ನಂದೀಶ್ ಹಾಗೂ  ಪುರಸಭೆ ಮುಖ್ಯಾಧಿಕಾರಿ ಬಿ.ಆರ್. ನಾಗರಾಜ ನಾಯ್ಕ  ಹಸಿರು  ನಿಶಾನೆ ತೋರಿಸಿ ಚಾಲನೆ ನೀಡಿದರು.

ಇದೇ ವೇಳೆ ಮಾಸ್ಕ್‌ ಧರಿಸದ ಅಂಗಡಿ ಮಾಲೀಕರಿಗೆ ದಂಡವನ್ನು ವಿಧಿಸಲಾಯಿತು. ಹಿರಿಯ ಆರೋಗ್ಯ ನಿರೀಕ್ಷಕ  ಪಿ. ಮಂಜುನಾಥ್‌, ಸಮುದಾಯ ಸಂಘಟನಾಧಿಕಾರಿ
ಸಿ. ಲೋಕ್ಯಾನಾಯ್ಕ ಸೇರಿದಂತೆ ಪುರಸಭೆ
ಪೌರ ಕಾರ್ಮಿಕರು ಜಾಗೃತಿ ಜಾಥಾದಲ್ಲಿ ಭಾಗವಹಿಸಿದ್ದರು.

error: Content is protected !!