ದಾವಣಗೆರೆ,ಜ.14- ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಲು ಪ್ರಮೋದ್ ಮಧ್ವರಾಜ್ ಅವರಿಗೆ ಬಿಜೆಪಿ ವರಿಷ್ಠರು ಟಿಕೆಟ್ ನೀಡಬೇಕು ಎಂದು ಗಂಗಾಮತ ಸಮಾಜದ ಜಿಲ್ಲಾ ಘಟಕ ಆಗ್ರಹಿಸಿದೆ.
ನಮ್ಮ ಸಮಾಜ ಮಹತ್ವದ ಸವಾಲು ಎದುರಿಸುತ್ತಿದ್ದು, ಮಾನ್ಯತೆ ಮತ್ತು ಪ್ರಾತಿನಿಧ್ಯತೆ ಪಡೆಯಲು ದೀರ್ಘಕಾಲದಿಂದ ಹೋರಾಡುತ್ತಿದೆ. ನಿರ್ಲಕ್ಷಿಸಲ್ಪಟ್ಟಿರುವ ನಮ್ಮ ಸಮಾಜವನ್ನು ಸಮರ್ಥವಾಗಿ ಪ್ರತಿನಿಧಿಸುವ ಪ್ರತಿನಿಧಿಯೊಬ್ಬರು ಬೇಕಾಗಿದೆ. ಹಾಗಾಗಿ ಸೂಕ್ತ ವ್ಯಕ್ತಿಯಾಗಿರುವ ಪ್ರಮೋದ್ ಅವರಿಗೆ ಸ್ಪರ್ಧಿಸುವ ಅವಕಾಶ ಕಲ್ಪಿಸಬೇಕು ಎಂದು ಗಂಗಾಮತ ಜಿಲ್ಲಾ ಸಂಘದ ಕಾರ್ಯದರ್ಶಿ ಜೆ.ಉಮೇಶ್, ಕೆಂಚನಹಳ್ಳಿ ಮಹಾಂತೇಶಪ್ಪ, ಎ.ಪಿ. ಆನಂದ್, ಕೋಲ್ಕುಂಟೆ ಅಶೋಕ್, ಅಣ್ಣಪ್ಪ, ಬೇತೂರು ಬಸವರಾಜ್, ರವಿಕುಮಾರ್, ಮಹೇಂದ್ರ, ಕೇಶವಮೂರ್ತಿ ಮತ್ತಿತರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.