ಜಿಲ್ಲೆಯಲ್ಲಿ ಬಾಲ್ಯವಿವಾಹಗಳಾಗುತ್ತಿರುವುದು ವಿಷಾದದ ಸಂಗತಿ

ಜಿಲ್ಲೆಯಲ್ಲಿ ಬಾಲ್ಯವಿವಾಹಗಳಾಗುತ್ತಿರುವುದು ವಿಷಾದದ ಸಂಗತಿ

ವನಿತಾ ಸಮಾಜದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ವ್ಯಾಕ್ಯುಲತೆ

ದಾವಣಗೆರೆ, ಮಾ. 8- ರಾಜ್ಯದಲ್ಲಿ ಬಾಲ್ಯವಿವಾಹ ಪದ್ಧತಿಯಲ್ಲಿ ದಾವಣಗೆರೆ ಜಿಲ್ಲೆ ಮೂರನೇ ಸ್ಥಾನದಲ್ಲಿದ್ದು, ಜಿಲ್ಲೆಯಲ್ಲಿ ಶೇ. 19 ರಷ್ಟು ಬಾಲ್ಯ ವಿವಾಹಗಳಾಗುತ್ತಿರುವುದು ವಿಷಾದದ ಸಂಗತಿ. ಇದಕ್ಕೆ ಕಡಿವಾಣ ಹಾಕುವ ಅಗತ್ಯವಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಹೇಳಿದರು.

ನಗರದ ವನಿತಾ ಸಮಾಜದ ಶ್ರೀ ಸತ್ಯ ಸಾಯಿ ರಂಗಮಂದಿರದಲ್ಲಿ ವನಿತಾ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಅಂತರ ರಾಷ್ಟ್ರೀಯ ಮಹಿಳಾ ದಿನಾ ಚರಣೆ ಹಾಗೂ ವನಿತಾ ಸಮಾಜದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಬಾಲ್ಯ ವಿವಾಹಗಳಾಗುತ್ತಿರುವುದು ಕಂಡು ಬಂದಿದ್ದು, ಲೈಂಗಿಕ ದೌರ್ಜನ್ಯ ಪ್ರಕರಣಗಳು ಕೂಡ ಹೆಚ್ಚಾಗುತ್ತಿವೆ ಎಂದರು.

ಬಾಲ್ಯವಿವಾಹ ಪದ್ಧತಿ ಕೂಡ ಸಾಮಾಜಿಕ ಪಿಡುಗಾಗಿದ್ದು, ಚಿಕ್ಕ ವಯಸ್ಸಿನಲ್ಲಿ ಮದುವೆ ಆಗುವುದರಿಂದ ಅನೇಕ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಮಕ್ಕಳು ಅಪೌಷ್ಟಿಕತೆಯಿಂದ ನರಳಬೇಕಾಗುತ್ತದೆ. ಮಕ್ಕಳ ಆರೋಗ್ಯದ ಕಡೆ ಹೆಚ್ಚು ಗಮನಹರಿಸುವ ಅಗತ್ಯವಿದೆ ಎಂದು ಹೇಳಿದರು.

ಪುರಾಣ ಕಾಲದಿಂದಲೂ ಮಹಿಳೆ ದೌರ್ಜನ್ಯಕ್ಕೆ ಒಳಗಾಗಿದ್ದಳು. ಆದರೆ ಅಂದಿನ ಕಾಲದಲ್ಲಿ ಎಲ್ಲವನ್ನೂ ಸಹಿಸಿಕೊಂಡು ಜೀವನ ಮುನ್ನಡೆಸಿಕೊಂಡು ಬರುತ್ತಿದ್ದಳು. ಶಿಕ್ಷಣದಿಂದ ವಂಚಿತಳಾಗಿದ್ದಳು. ಆದರೀಗ ಮಹಿಳೆ ಶಿಕ್ಷಣ ಪಡೆಯುವ ಮೂಲಕ ಎಲ್ಲಾ ರಂಗಗಳಲ್ಲೂ ಪ್ರಗತಿ ಸಾಧಿಸುವ ಮೂಲಕ ಪುರುಷರಷ್ಟೇ ಸರಿ ಸಮಾನವಾಗಿ ಬೆಳೆದಿದ್ದಾಳೆ ಎಂದರು.

ಸಮಾಜ ಸೇವಕಿ ಡಾ. ಶಾಂತಾಭಟ್ ವನಿತಾ ಸೇವಾ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಈ ಪ್ರಶಸ್ತಿ `ಕಸ-ರಸ’ ಅಭಿಯಾನದ ಪ್ರತಿಯೊಬ್ಬ ಕಾರ್ಯಕರ್ತರಿಗೂ ಸಲ್ಲುತ್ತದೆ. ಇನ್ನೂ ಪೂರ್ಣಗೊಂಡಿಲ್ಲ. ಜನರ ಸಹಭಾಗಿತ್ವ ಮತ್ತು ಸಹಕಾರದೊಂದಿಗೆ ಈ ಪ್ರಕ್ರಿಯೆ ನಿರಂತರವಾಗಿ ನಡೆಯಬೇಕಾಗಿದೆ. ತನ್ಮೂಲಕ ಸ್ವಚ್ಛ, ಸುಂದರ, ಸಮೃದ್ಧ ಭಾರತ ನಿರ್ಮಾಣದತ್ತ ಹೆಜ್ಜೆ ಹಾಕಬೇಕಾಗಿದೆ ಎಂದು ಹೇಳಿದರು.

ಜನರ ಮನಸ್ಸಿನಲ್ಲಿ ಪರಿಸರ ಸ್ವಚ್ಛತೆಯ ಅರಿವಿನ ಬೀಜ ಬಿತ್ತಿದ್ದೇವೆ. ಅದನ್ನು ಪೋಷಿಸುವ ಕೆಲಸವಾಗಬೇಕಷ್ಟೇ ಎಂದರು.

ವನಿತಾ ಸಮಾಜದ ಅಧ್ಯಕ್ಷರಾದ ಪದ್ಮ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸುಷ್ಮಾ ಮೋಹನ್, ಶ್ರೀಮತಿ ರೇಖಾ ಶಾಮನೂರು ಗಣೇಶ್ ಉಪಸ್ಥಿತರಿದ್ದರು.

ಶ್ರೀ ಶಾರದಾ ಸಂಗೀತ ಮತ್ತು ನೃತ್ಯ ಕಲಾ ಶಾಲೆ ಬಾಲಕಿಯರು ಭರತ ನಾಟ್ಯ ಪ್ರದರ್ಶಿಸಿದರು. ಅನುರಾಧ ರಮೇಶ್, ಸೂರ್ಯಪ್ರಭ ಪ್ರಾರ್ಥಿಸಿದರು. ಉಷಾ ರಂಗನಾಥ್ ಸ್ವಾಗತಿಸಿದರು. ಗೀತಾ ಬದರಿನಾಥ್ ನಿರೂಪಿಸಿದರು. ಸುನೀತ ಇಂದೂಧರ್, ನಳಿನಾ ಅಚ್ಚುತ್ ಅತಿಥಿಗಳ ಪರಿಚಯ ಮಾಡಿಕೊಟ್ಟರು. ನಾಗರತ್ನ ಜಗದೀಶ್, ಮಂಜುಳಾ ಬಸವಲಿಂಗಪ್ಪ, ಕಲಾ ಭೀಮಾ ನಂದ್, ಪ್ರೇಮಾ ನಾಗರಾಜ್ ಮತ್ತಿತರರು ಇದ್ದರು.

error: Content is protected !!