ಹೂವಿನಹಡಗಲಿ, ಫೆ.20- ತಾಲ್ಲೂಕಿನ ಸುಪ್ರಸಿದ್ಧ ಶ್ರೀ ಕುರುವತ್ತಿ ಬಸವೇಶ್ವರ ಸ್ವಾಮಿ ರಥೋತ್ಸವ ಸೋಮವಾರ ಸಂಜೆ 5 ಗಂಟೆಗೆ ಸರಿಯಾಗಿ ಅತ್ಯಂತ ವಿಜೃಂಭಣೆಯಿಂದ ಭಕ್ತರ ಹರ ಹರ ಮಹಾದೇವ ಎಂಬ ಹರ್ಷೋದ್ಘಾರ ದೊಂದಿಗೆ ಜರುಗಿತು.
ಜಾಥಾ ರಥೋತ್ಸವಕ್ಕೆ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಎಲ್ಲಾ ಸಕಲ ಸಿದ್ಧತೆಗಳನ್ನು ಕೈಗೊಂಡಿತ್ತು. ತಾಲ್ಲೂಕು ಆಡಳಿತ ಕೂಡ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿತ್ತು. ಸೂಕ್ತವಾಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರಿಂದ ಕುರುವತ್ತಿ ಕ್ರಾಸ್ನಿಂದ ಕುರುವತ್ತಿ ಗ್ರಾಮಕ್ಕೆ ತೆರಳುವ ಭಕ್ತರ ಎಲ್ಲ ವಾಹನಗಳನ್ನು ಎರಡು ಕಿಲೋಮೀಟರ್ ದೂರದ ಹಿಂದೆ ತಡೆದು ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿತ್ತು.
ರಥೋತ್ಸವಕ್ಕೆ ದೂರದ ನಗರಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು ವಿಶೇಷವಾಗಿತ್ತು. ಕೊರೊನಾ ಹಿನ್ನೆಲೆಯಲ್ಲಿ ಎರಡು ವರ್ಷಗಳ ಕಾಲ ಜಾತ್ರೆಯನ್ನು ನಿರ್ಬಂಧಿಸಲಾಗಿದ್ದರಿಂದ ಈ ವರ್ಷ ಜಾತ್ರೆ ಬಹಳ ಅದ್ಧೂರಿಯಾಗಿ ಜರುಗಿತು. ಮುಜರಾಯಿ ಇಲಾಖೆಯ ಕಾರ್ಯನಿರ್ವಹಣಾಧಿಕಾರಿ ಬಿ.ಎಂ. ಕೃಷ್ಣಪ್ಪ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಎಸ್.ಎಸ್. ಪ್ರಕಾಶ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.