ಮಳೆ ನೀರು ಮನೆಗೆ ನುಗ್ಗಿರುವ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ

ಹರಿಹರ, ಸೆ.24- ನಗರದ ತುಂಗಭದ್ರಾ ನದಿಯು ಹೆಚ್ಚಿನ ಪ್ರಮಾಣದಲ್ಲಿ ಹರಿಯುತ್ತಿರುವುದರಿಂದ ನಗರದ ಗಂಗಾನಗರದ ನಿವಾಸಿಗಳ ಮನೆಗಳಿಗೆ ನೀರು ನುಗ್ಗಿರುವ ಸ್ಥಳಕ್ಕೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಇಂದು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.

ಈ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಳೆ ಹೆಚ್ಚಾಗಿ ಬೀಳುವ ವೇಳೆ ಮತ್ತು ದೇವರಬೆಳಕೆರೆ ಡ್ಯಾಮ್‌ನ ಹಿನ್ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುವ ಸಂದರ್ಭದಲ್ಲಿ ಇಲ್ಲಿನ ಗಂಗಾನಗರದ ನಿವಾಸಿಗಳ 18 ಮನೆಗಳಿಗೆ ನೀರು ತುಂಬಿಕೊಂಡು, ಇಲ್ಲಿನ ಜನತೆ ಸಂಕಷ್ಟದ ಜೀವನವನ್ನು ಮಾಡಬೇಕಾದ ಪರಿಸ್ಥಿತಿ ಬರುತ್ತದೆ. ಹಾಗಾಗಿ ಇಲ್ಲಿನ ಜನತೆಗೆ ಶಾಶ್ವತ ಪರಿಹಾರ ನೀಡುವುದಕ್ಕೆ ನಗರದ ಹೊರ ವಲಯದಲ್ಲಿ ಜಮೀನನ್ನು ಕೊಂಡು ಅವರಿಗೆ ಹೊಸದಾಗಿ ವಸತಿ ಸೌಕರ್ಯ ಒದಗಿಸುವ ಮೂಲಕ ಇಲ್ಲಿನ ಸಮಸ್ಯೆಯನ್ನು ಪರಿಹರಿಸಲು ಮುಂದಾಗುವುದಕ್ಕೆ ಈಗಾಗಲೇ ವ್ಯವಸ್ಥೆ ಮಾಡಲಾಗುತ್ತಿದೆ. ಅದು ಶೀಘ್ರದಲ್ಲೇ ಆಗುತ್ತದೆ ಮತ್ತು ನಗರಸಭೆ ಪೌರಾಯುಕ್ತರಾದ ಎಸ್. ಲಕ್ಷ್ಮಿಅವರಿಗೆ ಇದರ ಬಗ್ಗೆ ಆದಷ್ಟು ಬೇಗ ಹೆಚ್ಚಿನ ಗಮನವನ್ನು ಹರಿಸಿ ಎಂದು ಈ ವೇಳೆ ಸೂಚಿಸಿದರು.

ಸ್ಥಳೀಯ ಜನರು ನಮ್ಮ ಮನೆಗಳಿಗೆ ಪ್ರತಿ ಸಾರಿ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದಾಗ ಮನೆಗಳಿಗೆ ನೀರು ನುಗ್ಗುತ್ತದೆ. ಇದರ ಬಗ್ಗೆ ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಕಳೆದ 3 ವರ್ಷ ಗಳಿಂದ ಬಂದು ನೋಡುತ್ತಾರೆ, ನಂತರದಲ್ಲಿ ಮರೆತು ಬಿಡುತ್ತಾರೆ ಎಂದು ಹೇಳುತ್ತಾರೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾ ಧಿಕಾರಿಗಳು, ದಾವಣಗೆರೆಯ ಅಶೋಕ ಚಿತ್ರ ಮಂದಿರದ ಬಳಿಯ ರೈಲ್ವೆ ಗೇಟ್ ವಿಚಾರ ದಲ್ಲೂ ಇಪ್ಪತ್ತು ವರ್ಷಗಳಿಂದ ಅದನ್ನೇ ಹೇಳಿ ದ್ದರು. ಈಗ ಆ ಕೆಲಸವನ್ನು ಮಾಡುತ್ತಿಲ್ಲವೇ. ಇದು ಹಾಗೆಯೇ ಮಾಡುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ನಗರಸಭೆ ಪೌರಾಯುಕ್ತರಾದ ಶ್ರೀಮತಿ ಎಸ್. ಲಕ್ಷ್ಮಿ, ಎಇಇ ಬಿರಾದಾರ, ವಿ.ಎ. ಆನಂದ್, ದೇವರಾಜ್, ನಗರಸಭೆ ಇಂಜಿನಿಯರ್ ನೌಷಾದ್, ಅಣ್ಣಪ್ಪ ಮತ್ತು ಇತರರು ಹಾಜರಿದ್ದರು.   

error: Content is protected !!